

ಬೆಂಗಳೂರು: ವನ್ಯಜೀವಿ ಸಂರಕ್ಷಣೆ ಮತ್ತು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಫಾರಿ ವೇಳೆ ಮೊಬೈಲ್ ಫೋನ್ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ.
ಸಫಾರಿಗೆ ಹೋಗುವ ಎಲ್ಲರೂ ತಮ್ಮ ಮೊಬೈಲ್ಗಳನ್ನು ಏರೋಪ್ಲೇನ್ ಮೋಡ್ನಲ್ಲಿ ಇಡಬೇಕು ಹಾಗೂ ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕ್ರಮವು ಸುಪ್ರೀಂಕೋರ್ಟ್ ನೀಡಿದ ಇತ್ತೀಚಿನ ನಿರ್ದೇಶನದ ನಂತರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಫಾರಿ ಪ್ರದೇಶಗಳಲ್ಲಿ ಮೊಬೈಲ್ ಬಳಕೆಯಿಂದ ವನ್ಯಜೀವಿಗಳಿಗೆ ಅಡ್ಡಿಯುಂಟು ಮಾಡುವುದು ಹಾಗೂ ಪ್ರವಾಸಿಗರ ನಡುವೆ ಅನಾವಶ್ಯಕ ಗದ್ದಲ ಉಂಟಾಗುವುದನ್ನು ತಡೆಯುವುದು ಈ ನಿಯಮದ ಉದ್ದೇಶವಾಗಿದೆ.
ರಣಥಂಬೋರ್, ಸರಿಸ್ಕಾ ಮತ್ತು ಇತರ ಹುಲಿ ಮೀಸಲು ಪ್ರದೇಶಗಳ ಸಫಾರಿ ವಲಯಗಳಲ್ಲಿ ಈಗಾಗಲೇ ನಿಯಮವನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದ್ದರೂ, ಕರ್ನಾಟಕ ಇನ್ನೂ ಅದನ್ನು ಸಂಪೂರ್ಣವಾಗಿ ಅನುಸರಿಸಿರಲಿಲ್ಲ. ಇದೀಗ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.
ಕರ್ನಾಟಕದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು ಮಾತನಾಡಿ, “ಸಫಾರಿ ವೇಳೆ ಯಾವುದೇ ರೀತಿಯ ಅಡ್ಡಿಪಡಿಸುವ ಅಂಶಗಳನ್ನು ತಪ್ಪಿಸಬೇಕು. ತಿಥಿಗಳು ಮತ್ತು ಸಿಬ್ಬಂದಿ ಸೇರಿದಂತೆ ಸಫಾರಿಗೆ ಹೋಗುವ ಎಲ್ಲರೂ ತಮ್ಮ ಮೊಬೈಲ್ ಫೋನ್ಗಳನ್ನು ಏರ್ಪ್ಲೇನ್ ಮೋಡ್ನಲ್ಲಿ ಇಡಲು ನಿರ್ದೇಶಿಸಿ ಆದೇಶಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಹಿರಿಯ ಅರಣ್ಯಾಧಿಕಾರಿ ಮಾತನಾಡಿ, ಕರ್ನಾಟಕದಲ್ಲಿ ಸಫಾರಿಗಳು ನಿಯಂತ್ರಿತವಾಗಿ ನಡೆಯುತ್ತಿರುವುದರಿಂದ ಇತರ ರಾಜ್ಯಗಳಂತೆ ಸಂಪೂರ್ಣ ಮೊಬೈಲ್ ನಿಷೇಧ ಅಗತ್ಯವಿಲ್ಲ. ಆದರೆ, ಪ್ರಾಣಿಗಳಿರುವ ಸ್ಥಳದ ಮಾಹಿತಿ ಹಂಚಿಕೊಳ್ಳುವುದು, ಲೈವ್ ಸಂವಹನ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ನಿವೃತ್ತ ಪಿಸಿಸಿಎಫ್ ಬಿಕೆ.ಸಿಂಗ್ ಅವರು ಮಾತನಾಡಿ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. “ಪ್ರಾಣಿಗಳ ಸ್ಥಳ ಮಾಹಿತಿ ಹೊರಬಂದರೆ ಒಂದೇ ಸ್ಥಳದಲ್ಲಿ ಹೆಚ್ಚಿನ ವಾಹನಗಳು ಸೇರುವ ಸಾಧ್ಯತೆ ಇದೆ. ಇದರಿಂದ ವನ್ಯಜೀವಿಗಳಿಗೆ ಅಡ್ಡಿಯುಂಟು ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣಾ ಸಂಘಟನೆ ವೈಲ್ಟ್ ಲೈಫ್ ಫಸ್ಟ್ ಟ್ರಸ್ಟಿ ಪ್ರವೀಣ್ ಭಾರ್ಗವ್ ಅವರು ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು 2026ರ ಮೇ 17ರೊಳಗೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಸಫಾರಿ ವಾಹನ ಚಾಲಕರು ಹಾಗೂ ಮಾರ್ಗದರ್ಶಕರಿಗೂ ಈ ನಿಯಮ ಅನ್ವಯವಾಗಬೇಕು. ವೈರ್ಲೆಸ್ ರೇಡಿಯೊಗಳ ಬಳಕೆಗೆ ವಿಸ್ತರಿಸಬೇಕು. ಈ ಕ್ರಮಗಳು ಹುಲಿ ಕಾಣಿಸಿಕೊಂಡ ಸ್ಥಳಗಳಲ್ಲಿ ಸಫಾರಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ನೋಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
ಸಂರಕ್ಷಿತ ಪ್ರದೇಶಗಳು ಮತ್ತು ಹುಲಿ ಅಭಯಾರಣ್ಯಗಳಲ್ಲಿ 4G ಟವರ್ಗಳ ನಿರ್ಮಾಣವು ಹೆಚ್ಚುತ್ತಿದ್ದು, ಆತಂಕವನ್ನು ಎದುರು ಮಾಡುತ್ತಿವೆ. ಇದು ವನ್ಯಜೀವಿ ಸಂರಕ್ಷಣಾ ಗುರಿಗಳಿಗೆ ಹೊಂದಿಕೆಯಾಗುವುದಿಲ್ಲ. ಅಂತಹ ಪ್ರಸ್ತಾಪಗಳನ್ನು ತಿರಸ್ಕರಿಸಬೇಕು ಎಂದು ತಿಳಿಸಿದ್ದಾರೆ.
ಫೆಬ್ರವರಿ 17, 2026 ರೊಳಗೆ ಪರಿಸರ-ಸೂಕ್ಷ್ಮ ವಲಯಗಳನ್ನು ಒಳಗೊಂಡಂತೆ ಹುಲಿ ಅಭಯಾರಣ್ಯಗಳ ಸಂಪೂರ್ಣ ಪ್ರದೇಶವನ್ನು ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ನಿಯಮಗಳು, 2000 ರ ಅಡಿಯಲ್ಲಿ “ಸೈಲೆನ್ಸ್ ಝೋನ್” ಎಂದು ಘೋಷಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಎಲ್ಲಾ ಅರಣ್ಯಗಳನ್ನು “ಸೈಲೆನ್ಸ್ ಝೋನ್”ಗಳಾಗಿ ಘೋಷಿಸುವುದನ್ನು ಪರಿಗಣಿಸುವಂತೆ ನ್ಯಾಯಾಲಯವು ಸರ್ಕಾರಗಳಿಗೆ ಸೂಚಿಸಿವೆ. ಆದ್ದರಿಂದ, ದೇಶಾದ್ಯಂತ ಅನ್ವಯವಾಗುವ ನವೆಂಬರ್ 2025 ರ ತೀರ್ಪಿನಲ್ಲಿರುವ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ಭಾರ್ಗವ್ ಅವರು ತಿಳಿಸಿದ್ದಾರೆ.
Advertisement