

ಬೆಂಗಳೂರು: ಮಹಾನಗರದ ಅಂದವನ್ನು ಕೆಡಿಸುವ ಅನಧಿಕೃತ ಜಾಹೀರಾತುಗಳ ಹಾವಳಿ ಮುಂದುವರೆದಿದೆ. ಹಬ್ಬ, ಹರಿದಿನ, ಹುಟ್ಟುಹಬ್ಬಗಳ ಸಂದರ್ಭಗಳಲ್ಲಿ ರಸ್ತೆ ಅಕ್ಕಪಕ್ಕ, ಪ್ರಮುಖ ವೃತ್ತಗಳು ಸೇರಿದಂತೆ ಎಲ್ಲೆಂದರಲ್ಲಿ ರಾಜಕೀಯ ನಾಯಕರ ಬೃಹತ್ ಕಟೌಟ್ ಗಳು ರಾರಾಜಿಸುತ್ತವೆ.
ಇವುಗಳ ನಿಯಂತ್ರಣಕ್ಕೆ ಹೈಕೋರ್ಟ್ ಈ ಹಿಂದೆ ನಿಷೇಧ ಹೇರಿತ್ತು. ಆದರೆ, ಜಿಬಿಎ ಬೈಲಾ ತಿದ್ದುಪಡಿ ಮಾಡಿ, ಹೊಸ ನಿಯಮಗಳನ್ನು ಜಾರಿಗೆ ಬಂದ ಬಳಿಕ ಕೆಲವು ಕಡೆ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಜಾಹೀರಾತು ಹಾಕಲಾಗುತ್ತಿದೆ.
ನಗರದ ಅವಳಿ ಕ್ಷೇತ್ರಗಳಾದ ವಿಜಯನಗರ ಹಾಗೂ ಗೋವಿಂದರಾಜ ನಗರದಲ್ಲಿಯೂ ಜಾಹೀರಾತುಗಳ ಹಾವಳಿ ಹೆಚ್ಚಾಗಿರುತ್ತದೆ. ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರುವ ಕಟೌಟ್ ಗಳು, ಬ್ಯಾನರ್, ಬಂಟಿಂಗ್ ಗಳು ಕ್ಷೇತ್ರ ತುಂಬೆಲ್ಲಾ ರಾರಾಜಿಸಿವೆ.
ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ಶಾಸಕ ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾಕೃಷ್ಣ ಅವರ ಮೇಲೆ ಮೊದಲು FIR ದಾಖಲಿಸುವಂತೆ ಒತ್ತಾಯಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಕ್ಯಾಮರಾ ಮುಂದಿನ ಕೇವಲ ಮೀಡಿಯಾ ಸ್ಟಂಟ್ಗಾಗಿ 'ಕೇಸ್ ಹಾಕಿಸುತ್ತೇನೆ' ಎಂಬ ಬೊಗಳೆ ಮಾತುಗಳು ಬೇಡ! ನಿಜಕ್ಕೂ ಕಾನೂನಿನ ಬಗ್ಗೆ ಬದ್ಧತೆ ಇದ್ದರೆ, ವರ್ಷವಿಡೀ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತ ಕಟೌಟ್-ಫ್ಲೆಕ್ಸ್ಗಳಲ್ಲಿ ರಾರಾಜಿಸುವ ನಿಮ್ಮದೇ ಪಕ್ಷದ ಶಾಸಕ ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾಕೃಷ್ಣ ಅವರ ಮೇಲೆ ಮೊದಲು FIR ದಾಖಲಿಸಿ ನಿಮ್ಮ ದಕ್ಷತೆ ಪ್ರದರ್ಶಿಸಿ ಎಂದು ಒತ್ತಾಯಿಸಲಾಗಿದೆ.
Advertisement