ಕಾವೇರಿ ಕಿಚ್ಚಿನ ನಡುವೆಯೇ ಕೊಡಗಿನಲ್ಲಿ ಭಾರಿ ಮಳೆ: ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ! ಹಾರಂಗಿ ಭರ್ತಿ, Video

ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯು ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ತೊಂದರೆಗಳನ್ನು ಉಂಟುಮಾಡುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ವಾಹನಗಳ ಸಂಚಾರವನ್ನು ತಡೆಯುತ್ತಿದೆ.
Heavy rains in Kodagu
ಕೊಡಗಿನಲ್ಲಿ ಭಾರಿ ಮಳೆ
Updated on

ಕೊಡಗು: ರಾಜ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದ ನಡುವೆಯೇ ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದು ರಾಜ್ಯದ ರೈತರಲ್ಲಿ ಕೊಂಚ ನೆಮ್ಮದಿ ತಂದಿದೆ.

ಹೌದು.. ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕಾವೇರಿ ಹಾಗೂ ಹಟ್ಟಿಹೊಳೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಸ್ನಾನಘಟ್ಟ ಜಲಾವೃತಗೊಂಡಿವೆ.

ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ದೈನಂದಿನ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

ರಸ್ತೆಗಳ ಮೇಲೆ ನೀರು ನಿಂತಿದ್ದು, ಭೂಕುಸಿತದ ಭಯ, ಮರಗಳು ಬಿದ್ದು, ನದಿಗಳ ಮಟ್ಟ ಹೆಚ್ಚಳದಿಂದ ಜಿಲ್ಲಾಡಳಿತ ಎಚ್ಚರಿಕೆಯಲ್ಲಿ ಇದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇನ್ನಷ್ಟು ಮಳೆಯ ಮುನ್ಸೂಚನೆ ನೀಡಿದ್ದು, ಜಿಲ್ಲೆಯ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯು ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ತೊಂದರೆಗಳನ್ನು ಉಂಟುಮಾಡುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ವಾಹನಗಳ ಸಂಚಾರವನ್ನು ತಡೆಯುತ್ತಿದೆ. ಮಣ್ಣು ರಸ್ತೆಗಳ ಮೇಲೆ ಹರಿದಿದೆ. ಬಿದ್ದ ಮರಗಳು ಸಂಚಾರಕ್ಕೆ ಅಡ್ಡಿಯಾಗಿವೆ. ಸೇತುವೆಗಳ ಹತ್ತಿರ ನೀರಿನ ಹರಿವು ಹೆಚ್ಚಾಗಿದೆ. ತೋಟ ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ.

Heavy rains in Kodagu
ಆಲಮಟ್ಟಿ, ಕಬಿನಿ ಜಲಾಶಯ ಭರ್ತಿ! KRS ಪರಿಸ್ಥಿತಿ ಏನು? ಇಲ್ಲಿದೆ ರಾಜ್ಯದ ಪ್ರಮುಖ ಆಣೆಕಟ್ಟುಗಳಲ್ಲಿ ನೀರಿನ ವಿವರ

ಭೂಕುಸಿತದ ಭೀತಿ

ಕೊಡಗು ಜಿಲ್ಲೆ ಪಶ್ಚಿಮ ಘಟ್ಟಗಳ ಭಾಗವಾಗಿರುವುದರಿಂದ, ನಿರಂತರ ಮಳೆಯ ಸಮಯದಲ್ಲಿ ಭೂಕುಸಿತದ ಅಪಾಯ ಹೆಚ್ಚುತ್ತದೆ. ವಿಶೇಷವಾಗಿ ಪರ್ವತಗಳ ಅಂಚಿನಲ್ಲಿರುವ ಮನೆಗಳು, ಕಾಫಿ ತೋಟಗಳು, ಪರ್ವತ ಪ್ರದೇಶದ ರಸ್ತೆಗಳು, ಅಪಾಯದ ಮಟ್ಟದಲ್ಲಿ ಹೆಚ್ಚು ಇವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದಕ್ಕೆ ಇಂಬು ನೀಡುವಂತೆ ಮಡಿಕೇರಿಯಲ್ಲಿ ಮನೆಯ ಕಾಂಪೌಂಡ್ ಗೋಡೆ ಕುಸಿತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಶಾಲಾ-ಕಾಲೇಜುಗಳಿಗೆ ರಜೆ!

ಇನ್ನು ಭಾರಿ ಮಳೆಯ ಕಾರಣದಿಂದ, ಜಿಲ್ಲಾಡಳಿತವು ವಿದ್ಯಾರ್ಥಿಗಳನ್ನು ರಕ್ಷಿಸಲು ಶಾಲೆಗಳಿಗೆ ರಜೆ ಘೋಷಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ, ಜಿಲ್ಲೆಯ ಕೆಲವು ಭಾಗಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಳೆ ಮುಂದುವರಿದರೆ ಇನ್ನಷ್ಟು ಮಳೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾರಂಗಿ ಜಲಾಶಯ ಭರ್ತಿ, ಅಪಾರ ಪ್ರಮಾಣದ ನೀರು ಬಿಡುಗಡೆ

ಇದೇ ವೇಳೆ ಹಾರಂಗಿ ಜಲಾಶಯಕ್ಕೂ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಬಹುತೇಕ ಜಲಾಶಯ ಇಂದೇ ಭರ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಬರೊಬ್ಬರಿ 10 ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗುವಂತೆ ಮನವಿ ಮಾಡಿದ್ದಾರೆ.

ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆ ಇದೆ, ಕೃಷಿ ಭೂಮಿಗಳಿಗೆ ಹಾನಿ, ರಸ್ತೆ ಸಂಪರ್ಕ ಕಡಿತವಾಗುವ ಅಪಾಯ, ಆದ್ದರಿಂದ ಜನರು ನದಿಗಳ ಹತ್ತಿರ ಹೋಗಬಾರದು ಎಂದು ಸಲಹೆ ನೀಡಲಾಗಿದೆ. ಜಿಲ್ಲಾಡಳಿತವು ಮಳೆ ಪರಿಸ್ಥಿತಿಯನ್ನು ಎದುರಿಸಲು ಕ್ರಮಗಳನ್ನು ಕೈಗೊಂಡಿದೆ.

ಹವಾಮಾನ ಇಲಾಖೆ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಲ್ಲಿ ಕೊಡಗು ಮತ್ತು ಮಲೆನಾಡು ಪ್ರದೇಶದ ಇತರ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

X
Kannada Prabha
www.kannadaprabha.com