

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಫ್ಲೈಓವರ್ ಕೆಳಭಾಗದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬುಧವಾರ ಭಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.
ಜೆಸಿಬಿ ಯಂತ್ರಗಳ ಮೂಲಕ ಬೀದಿ ಬದಿ ವ್ಯಾಪಾರಿಗಳು ನಿರ್ಮಿಸಿದ್ದ ತಾತ್ಕಾಲಿಕ ಮಳಿಗೆಗಳು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ ಪರಿಣಾಮ ಹಲವರು ತಮ್ಮ ಜೀವನೋಪಾಯ ಕಳೆದುಕೊಳ್ಳುವ ಆತಂಕದಲ್ಲಿ ಕಣ್ಣೀರಿಟ್ಟರು.
ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಸಾರ್ವಜನಿಕ ಸ್ಥಳಗಳನ್ನು ಮರುಸ್ವಾಧೀನಪಡಿಸಿಕೊಳ್ಳುವ ಕುರಿತ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮಾರುಕಟ್ಟೆ ಆವರಣದಲ್ಲಿ ನೂರಾರು ಬೀದಿ ವ್ಯಾಪಾರಿಗಳು ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ, ಸಿಟಿ ಮಾರ್ಕೆಟ್ ಜಂಕ್ಷನ್ನಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿತ್ತು ಎಂದು ಹೇಳಿದ್ದಾರೆ.
ಕೆಲವು ವಾರಗಳ ಹಿಂದೆ ಜಿಬಿಎ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ, ಪಾದಚಾರಿ ಮಾರ್ಗ ಹಾಗೂ ಮುಖ್ಯರಸ್ತೆಯಲ್ಲಿ ಯಾವುದೇ ರೀತಿಯ ವ್ಯಾಪಾರ ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಇದೀಗ ಬೀದಿ ವ್ಯಾಪಾರಿಗಳು ಹಾಗೂ ಅವರ ಮುಖಂಡರು ಜಿಬಿಎ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, 4x4 ಅಡಿ ಗಾತ್ರದ ಗುರುತಿಸಲಾದ ಜಾಗವನ್ನು ಕೆಲ ವ್ಯಾಪಾರಿಗಳಿಗೆ ಮೀಸಲಿಡುವ ಕುರಿತು ಚರ್ಚೆ ನಡೆದಿದೆ. ಆದರೆ, ಇದರಿಂದ ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಹಾಗೂ ವ್ಯಾಪಾರಿಗಳಿಗೆ ದಿನದ ಕೆಲವೇ ಗಂಟೆಗಳ ಕಾಲ ವ್ಯಾಪಾರ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಆದರೆ, ಜಿಬಿಎ ಸಂಚಾರ ಎಂಜಿನಿಯರಿಂಗ್ ವಿಭಾಗ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿಲ್ಲ. ಬದಲಾಗಿ, ಸಿಟಿ ಮಾರ್ಕೆಟ್ ಸಂಕೀರ್ಣದ ಖಾಲಿ ಇರುವ ಎರಡನೇ ಮಹಡಿಯಲ್ಲಿ ಸುಮಾರು 1 ಲಕ್ಷ ಚದರ ಅಡಿ ಜಾಗವನ್ನು ಬಳಸಿಕೊಳ್ಳುವಂತೆ ಪ್ರಸ್ತಾಪಿಸಿದೆ.
ಈ ಜಾಗದ ಬಳಕೆಗಾಗಿ ಈಗಾಗಲೇ ಆಸಕ್ತರಿಗೆ (Expression of Interest) ಆಹ್ವಾನಿಸಲಾಗಿದ್ದು, ಆಗಸ್ಟ್ 10 ಕೊನೆಯ ದಿನಾಂಕವಾಗಿದೆ. ಆಸಕ್ತ ಸಂಸ್ಥೆಗಳು ರೂ.3 ಕೋಟಿ ಠೇವಣಿ ಇಟ್ಟು, ಗುರುತಿಸಲಾದ ಮಳಿಗೆಗಳನ್ನು ಬೀದಿ ವ್ಯಾಪಾರಿಗಳಿಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ಹಂಚಿಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಸಿಟಿ ಮಾರ್ಕೆಟ್ ವ್ಯಾಪಾರಿಗಳ ಸಂಘ ಈ ಪ್ರಸ್ತಾವನೆಯನ್ನು ವಿರೋಧಿಸಿದೆ. ಪಾದಚಾರಿ ಮಾರ್ಗದಲ್ಲೇ ಗುರುತಿಸಲಾದ ಜಾಗ ನೀಡಿದರೆ ಅತಿಕ್ರಮಣಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾಗರ್ ವೆಲ್ಫೇರ್ ಅಸೋಸಿಯೇಷನ್ ಕಾರ್ಯದರ್ಶಿ ಹುಮಾಯೂನ್ ಪಾಷಾ ಮಾತನಾಡಿ, "ಮಾರುಕಟ್ಟೆಯಲ್ಲಿ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ನಡೆಯುತ್ತಿದೆ. ಬೀದಿ ವ್ಯಾಪಾರಿಗಳು ಪ್ರತಿದಿನ ರೂ.30ರಿಂದ ರೂ.50ರವರೆಗೆ ಹಣ ನೀಡಿ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಮಾರುಕಟ್ಟೆ ಸಂಕೀರ್ಣದೊಳಗೆ ಬಾಡಿಗೆ ಪಾವತಿಸುವ ಅಂಗಡಿ ಮಾಲೀಕರಿಗೆ ಗ್ರಾಹಕರು ಬರುತ್ತಿಲ್ಲ. ನಾವು ಮುಂಗಡ ಹಾಗೂ ಬಾಡಿಗೆ ಪಾವತಿಸಿದರೂ ನಷ್ಟ ಅನುಭವಿಸಬೇಕಾಗಿದೆ," ಎಂದು ಆರೋಪಿಸಿದ್ದಾರೆ.