

ಬೆಂಗಳೂರು: ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಜನರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ದೇವನಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ದಂಪತಿಯನ್ನು ಕಿರಣ್ ಮತ್ತು ಅವರ ಪತ್ನಿ ಆರತಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಸೇರಿಕೊಂಡು ಕಾಳಿಕಾ ದೇವಿ ಎಂಟರ್ ಪ್ರೈಸಸ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ರೂ. ವಂಚನೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ದಂಪತಿಗಳು, ಸಾವಿರಾರು ಜನರಿಗೆ ಮನೆಯಿಂದಲೇ ಮಾಡಲು ಕೆಲಸ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ಕೊಡುವುದಾಗಿ ರೀಲ್ಸ್ ಮಾಡಿದ್ದರು. ಜನರಿಂದ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿಸಿಕೊಂಡು ಬಳಿಕ ತಲೆಮರೆಸಿಕೊಂಡಿದ್ದರು. ಇಬ್ಬರೂ ಆರೋಪಿಗಳು ಇಂದು ದೇವನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ದಂಪತಿ, ಒಬ್ಬೊಬ್ಬರಿಂದ 2 ಲಕ್ಷದಿಂದ 20 ಲಕ್ಷದವರೆಗೂ ಹಣ ಡೆಪಾಸಿಟ್ ಮಾಡಿಸಿಕೊಂಡಿದ್ದರು. ಮೇಣದ ಬತ್ತಿ, ಡ್ರೈ ಫ್ರೂಟ್ಸ್, ಅಗರಬತ್ತಿ ಪ್ಯಾಕಿಂಗ್ ಕೆಲಸದ ಹೆಸರಲ್ಲಿ ಭಾರಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಚ್ಚಾ ಪದಾರ್ಥಗಳ ಪ್ಯಾಕಿಂಗ್ಗೆ ಒಂದು ತಿಂಗಳಿಗೆ ಒಂದು ಲಕ್ಷ ಡೆಪಾಸಿಟ್ ಮಾಡಿದರೆ, ತಿಂಗಳಿಗೆ 23 ಸಾವಿರ ಹಣ ಕೊಡುವುದಾಗಿ ನಂಬಿಸಿದ್ದರು. ದಂಪತಿ ಮಾತು ನಂಬಿ ಜನ ಸಾಲ ಸೂಲ ಮಾಡಿ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿದ್ದರು ಎನ್ನಲಾಗಿದೆ.
ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ, ಕೋಲಾರ ಸೇರಿದಂತೆ ಹಲವು ಕಡೆ ವಂಚನೆ ಮಾಡಿದ್ದರು. ಹಣ ಕಟ್ಟಿದವರು ಕೆಲಸವೂ ಇಲ್ಲ, ಹಣವು ಇಲ್ಲದೆ ಕಳೆದ ಕೆಲ ತಿಂಗಳಿಂದ ಕಂಗಾಲಾಗಿದ್ದರು.
ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖತರ್ನಾಕ್ ದಂಪತಿಯನ್ನು ಬಂಧಿಸಿದ್ದಾರೆ. ಜನರಿಂದ ಪಡೆದ ಕೋಟಿ ಕೋಟಿ ಹಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.