ಕರ್ನಾಟಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ.. 3 ತಿಂಗಳಲ್ಲಿ 1,000 ಮಂದಿ ಪತ್ತೆ: ಸಚಿವ Priyank Kharge ಹೇಳಿದ್ದೇನು?

ಕರ್ನಾಟಕದಲ್ಲಿ ಕಳೆದ 3 ತಿಂಗಳಿನಿಂದ ನಡೆಸುತ್ತಿರುವ ಕಟ್ಟುನಿಟ್ಟಿನ ತಪಾಸಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ ಹಾಗೂ ಆಫ್ರಿಕಾದಿಂದ ಬಂದಿರುವ ಶಂಕಿತ ಅಕ್ರಮ ವಲಸಿಗರು ಸೇರಿದಂತೆ ಸುಮಾರು 1,000 ಮಂದಿ..
Karnataka Minister Priyank Kharge
ಸಚಿವ ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಕಳೆದ 3 ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಸಾವಿರ ಮಂದಿ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಕ್ರಮ ವಲಸಿಗರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕರ್ನಾಟಕದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಕಟ್ಟುನಿಟ್ಟಿನ ತಪಾಸಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ ಹಾಗೂ ಆಫ್ರಿಕಾದಿಂದ ಬಂದಿರುವ ಶಂಕಿತ ಅಕ್ರಮ ವಲಸಿಗರು ಸೇರಿದಂತೆ ಸುಮಾರು 1,000 ಮಂದಿಯನ್ನು ಗುರುತಿಸಲಾಗಿದೆ' ಎಂದು ತಿಳಿಸಿದರು.

'ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ. ಈ ಕಾರ್ಯಾಚರಣೆ ತಾತ್ಕಾಲಿಕವಾಗಿ ನಡೆಸಿ ನಿಲ್ಲಿಸುವುದಲ್ಲ, ನಿರಂತರವಾಗಿ ಮುಂದುವರಿಯಲಿದೆ' ಎಂದು ಸ್ಪಷ್ಟಪಡಿಸಿದರು.

“ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರ ಕುರಿತು ಶೋಧ ನಡೆಸಲಾಗುತ್ತಿದೆ. ಅವರು ಬಾಂಗ್ಲಾದೇಶ ಅಥವಾ ಆಫ್ರಿಕಾದಿಂದ ಬಂದವರಾಗಿರಬಹುದು. ನಾವು ಕಟ್ಟುನಿಟ್ಟಾಗಿ ಹಾಗೂ ಗಂಭೀರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಕಳೆದ ಮೂರು ತಿಂಗಳಲ್ಲಿ ಸುಮಾರು 1,000 ವಲಸಿಗರನ್ನು ಗುರುತಿಸಲಾಗಿದೆ. ಅವರೆಲ್ಲರೂ ಉತ್ತರ ಭಾರತದಿಂದ ಬರುತ್ತಿದ್ದಾರೆ” ಎಂದು ಅವರು ಹೇಳಿದರು.

Karnataka Minister Priyank Kharge
Operation Mukta: ಅಕ್ರಮ ವಲಸಿಗರ ಪತ್ತೆಗೆ ಬೆಂಗಳೂರಿನಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ; Video

BSF ಜೊತೆ ಸರ್ಕಾರ ಸಮನ್ವಯ

ಅಕ್ರಮ ವಲಸಿಗರ ಪತ್ತೆ ವಿಚಾರದಲ್ಲಿ ರಾಜ್ಯದ ಕಾನೂನು ಜಾರಿ ಸಂಸ್ಥೆಗಳು ಗಡಿ ಭದ್ರತಾ ಪಡೆ (BSF) ಹಾಗೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRO) ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿವೆ ಎಂದು ಖರ್ಗೆ ತಿಳಿಸಿದರು.

“ನಾವು ಈಗಾಗಲೇ BSF ಹಾಗೂ FRO ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ವಿಚಾರದಲ್ಲಿ ಶೇ.100ರಷ್ಟು ಗಮನ ಹರಿಸುತ್ತಿದ್ದೇವೆ. ಒಂದು ವಾರ ಕಾರ್ಯಾಚರಣೆ ನಡೆಸಿ ನಂತರ ನಿಲ್ಲಿಸುವ ಕೆಲಸ ಇದಲ್ಲ. ಇದನ್ನು ನಿರಂತರವಾಗಿ ಮುಂದುವರಿಸಬೇಕು. ಅಗತ್ಯವಿದ್ದರೆ ಪ್ರತ್ಯೇಕ ತಂಡ ರಚಿಸುತ್ತೇವೆ. ಮುಖ್ಯವಾಗಿ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಮಗೆ ಸಹಕಾರ ನೀಡಬೇಕು” ಎಂದು ಅವರು ಹೇಳಿದರು.

ರಾಜ್ಯಕ್ಕೆ ಅಕ್ರಮ ವಲಸಿಗರು ಯಾವ ಮಾರ್ಗದ ಮೂಲಕ ಪ್ರವೇಶಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನೂ ಪ್ರಿಯಾಂಕ್ ಖರ್ಗೆ ಎತ್ತಿದರು. ಅಂತರರಾಷ್ಟ್ರೀಯ ಗಡಿ ಭದ್ರತೆ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು.

“ನಮ್ಮ ರಾಜ್ಯಕ್ಕೆ ಯಾವುದೇ ಅಂತರರಾಷ್ಟ್ರೀಯ ಗಡಿ ಇಲ್ಲ. ಬಾಂಗ್ಲಾದೇಶ, ನೇಪಾಳ ಅಥವಾ ಬೇರೆ ಯಾವುದೇ ದೇಶದೊಂದಿಗೆ ನಾವು ಗಡಿ ಹಂಚಿಕೊಂಡಿಲ್ಲ. ಆದರೆ ಅವರು ರಾಜ್ಯಕ್ಕೆ ಬರುತ್ತಿದ್ದರೆ, ಎಲ್ಲಿಂದ ಬರುತ್ತಿದ್ದಾರೆ? ತ್ರಿಪುರ, ಅಸ್ಸಾಂ ಅಥವಾ ಪಶ್ಚಿಮ ಬಂಗಾಳದ ಮೂಲಕ ಬರುತ್ತಿದ್ದಾರೆಯೇ? ಗಡಿ ಭದ್ರತೆ ಕೇಂದ್ರ ಸರ್ಕಾರದ ಜವಾಬ್ದಾರಿ. ನನ್ನ ಅಭಿಪ್ರಾಯದಲ್ಲಿ, ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಜನರು ಇಷ್ಟು ದೂರ ಬರುತ್ತಿದ್ದಾರೆ ಎಂದರೆ ಅಂತರರಾಷ್ಟ್ರೀಯ ಗಡಿಗಳು ಮಾತ್ರವಲ್ಲ, ರಾಜ್ಯಗಳ ನಡುವಿನ ಗಡಿಗಳೂ ದುರ್ಬಲವಾಗಿವೆ ಎಂದರ್ಥ” ಎಂದು ಖರ್ಗೆ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಕೆಲವು ಪ್ರವೃತ್ತಿಗಳ ಕುರಿತು ಮಾತನಾಡಿದ ಅವರು, ಅಕ್ರಮ ವಲಸಿಗರ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ನಿಂದನೆ ಅಥವಾ ಗಲಾಟೆಗೆ ಇಳಿಯುವ ಬದಲು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

“ಇತ್ತೀಚೆಗೆ ಕೆಲವರು ಕೊಳೆಗೇರಿಗಳಿಗೆ ತೆರಳಿ, ಅಲ್ಲಿರುವವರು ಯಾವ ದೇಶ ಅಥವಾ ರಾಜ್ಯದವರು ಎಂದು ಕೇಳಿ, ವಿಡಿಯೋ ಮಾಡಿ ಸರ್ಕಾರವನ್ನು ತಮಗೆ ಬೇಕಾದಂತೆ ನಿಂದಿಸುವ ಪ್ರವೃತ್ತಿ ಆರಂಭವಾಗಿದೆ. ನಿಮ್ಮ ಬಳಿ ಮಾಹಿತಿ ಇದ್ದರೆ ಮುಂದೆ ಬಂದು ನಮ್ಮ ಅಧಿಕಾರಿಗಳಿಗೆ ನೀಡಿ. ಸಾಮಾಜಿಕ ಜಾಲತಾಣದ ಹೀರೋ ಆಗುವ ಪ್ರಯತ್ನದಲ್ಲಿ ನೀವು ನಿಜಕ್ಕೂ ಅಂತರರಾಷ್ಟ್ರೀಯ ಮಾಫಿಯಾವನ್ನು ಬಲಪಡಿಸುತ್ತಿದ್ದೀರಾ?” ಎಂದು ಅವರು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com