

ಬೆಂಗಳೂರು: ಮಹಾನಗರದಲ್ಲಿ ಹಿಂದಿವಾಲಗಳ ಹಾವಳಿ ಇನ್ನೂ ನಿಂತಿಲ್ಲ. ಕನ್ನಡಿಗರ ಮೇಲೆ ದರ್ಪ ಮುಂದುವರಿದಿದೆ. ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆದಿದೆ. ನಗರದ ಯಲಹಂಕ ನ್ಯೂ ಟೌನ್ನಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 25 ವರ್ಷದ ಡೆಲಿವರಿ ಬಾಯ್ ಮೇಲೆ ಗುಂಪೊಂದು ನಿಂದಿಸಿ, ದೊಣ್ಣೆಯಿಂದ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತನನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಅವರು ವಿದ್ಯಾಭ್ಯಾಸದ ಜೊತೆಗೆ 'ಕ್ವಿಕ್-ಕಾಮರ್ಸ್' ಡೆಲಿವರಿ ಪ್ಲಾಟ್ಫಾರ್ಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಸವರಾಜ್ ಆರ್ಡರ್ ಒಂದನ್ನು ತಲುಪಿಸಿದ ನಂತರ ಯಲಹಂಕ ನ್ಯೂ ಟೌನ್ನ 4ನೇ ಹಂತದಿಂದ ಸಂತೋಷ್ ನಗರದ ಕಡೆಗೆ ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 4.40 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ, ನಡೆದು ಹೋಗುತ್ತಿದ್ದ ಕೆಲವು ಯುವತಿಯರು ನನನ್ನು ನಿಂದಿಸಿದ್ದಾರೆ ಎಂದು ಎಫ್ ಐಆರ್ ನಲ್ಲಿ ಡೆಲಿವರಿ ಬಾಯ್ ಆರೋಪಿಸಿದ್ದಾರೆ.
ಬಳಿಕ ಯುವತಿಯರ ಬಳಿಗೆ ತೆರಳಿದ ಬಸವರಾಜ್ , ನನಗೆ ಹಿಂದಿ ಭಾಷೆ ಬರುವುದಿಲ್ಲ, ಏಕೆ ನಿಂದಿಸುತ್ತಿದ್ದೀರಿ ಎಂಬುದನ್ನು ಕನ್ನಡದಲ್ಲಿ ಹೇಳುವಂತೆ ಕೇಳಿಕೊಂಡಿದ್ದಾರೆ. ಆ ಯುವತಿಯರು ತಮ್ಮನ್ನು ನಿಂದಿಸಿದ್ದಲ್ಲದೆ, ತಮ್ಮ ಟೋಪಿಯನ್ನು ಎಳೆದು ಹಲ್ಲೆಗೆ ಯತ್ನಿಸಿದರು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಬಳಿಕ ಅವರು ಪೊಲೀಸ್ ಸಹಾಯವಾಣಿ 112 ಮತ್ತು ತಮ್ಮ ಪರಿಚಯಸ್ಥರಾದ ಅಶೋಕ್ ಅವರಿಗೂ ಕರೆ ಮಾಡಿದ್ದಾರೆ.
ಬಸವರಾಜ್ ಅವರನ್ನು ತಡೆದ ಯುವತಿಯರು ಸ್ಥಳಕ್ಕೆ ಕೆಲವು ಯುವಕರನ್ನು ಕರೆಸಿಕೊಂಡಿದ್ದಾರೆ. ಬಳಿಕ ಸುಮಾರು ನಾಲ್ಕೈದು ಮಂದಿ ಯುವಕ-ಯುವತಿಯರು ಸೇರಿ ಕೈ ಹಾಗೂ ರಸ್ತೆಯಲ್ಲಿದ್ದ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಬೆನ್ನು, ತಲೆ ಮತ್ತು ಮೂಗಿಗೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ಅವರಿಗೆ ರಕ್ತಸ್ರಾವವಾಗಿ ಗಾಯಗಳಾಗಿವೆ" ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಅಶೋಕ್ ಮಧ್ಯಪ್ರವೇಶಿಸಿ ರಕ್ಷಿಸಲು ಬಂದಾಗ, ಅವರ ತಲೆಗೂ ಹೊಡೆಯಲಾಗಿದೆ. ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಬಸವರಾಜ್ ಅವರ ದೂರಿನ ಆಧಾರದ ಮೇಲೆ, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಗುರುತಿಸದ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಾದ 118(1) (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಿತವಾಗಿ ಗಾಯ ಅಥವಾ ತೀವ್ರ ಗಾಯವನ್ನು ಉಂಟುಮಾಡುವುದು), 126(2) (ಅಕ್ರಮ ತಡೆ), 351(2) (ಅಪರಾಧದ ಬೆದರಿಕೆ), 352 (ಶಾಂತಿ ಭಂಗವನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.