

ಮಂಗಳೂರಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿ ಸಂದೀಪ್ ನಾಯಕ್ ಸಮಯಪ್ರಜ್ಞೆ ಹಾಗೂ ಧೈರ್ಯ ಪ್ರದರ್ಶಿಸಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲು ಸಂಖ್ಯೆ 10107ಕ್ಕೆ ಹತ್ತಲು ಪ್ರಯತ್ನಿಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ಆಯತಪ್ಪಿ, ಚಲಿಸುತ್ತಿದ್ದ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರಕ್ಕೆ ಬಿದ್ದಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಸಂದೀಪ್ ನಾಯಕ್ ಸ್ಥಳಕ್ಕೆ ಧಾವಿಸಿ ಪ್ರಯಾಣಿಕನನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ. ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಗಂಭೀರ ಅನಾಹುತವೊಂದು ತಪ್ಪಿದೆ.
ಚಲಿಸಲು ಆರಂಭಿಸಿದ್ದ ರೈಲನ್ನು ಓಡಿಬಂದು ಹತ್ತಲು ಪ್ರಯಾಣಿಕನೊಬ್ಬ ಯತ್ನಿಸುತ್ತಿದ್ದ. ಕಾಲು ಜಾರಿ ಪ್ಲಾಟ್ಫಾರ್ಮ್ ಹಾಗೂ ರೈಲಿನ ನಡುವೆ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕಿದ್ದ. ಇನ್ನೇನು ರೈಲಿನಡಿ ಸಿಲುಕಿ ತುಂಡಾಗಬೇಕು ಎನ್ನುವಷ್ಟರಲ್ಲಿ, ಕರ್ತವ್ಯದಲ್ಲಿದ್ದ ಪಾಯಿಂಟ್ಸ್ಮ್ಯಾನ್ ಓರ್ವರು ಕ್ಷಣಾರ್ಧದಲ್ಲಿ ಆತನನ್ನು ಎಳೆದು ಪ್ರಾಣ ಉಳಿಸಿದ್ದಾರೆ.
ನಿನ್ನೆ ಬೆಳಗ್ಗೆ 11.11ಕ್ಕೆ ಸುರತ್ಕಲ್ ನಿಲ್ದಾಣಕ್ಕೆ ಬಂದಿದ್ದ ಮಡ್ಗಾಂವ್–ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಎಕ್ಸ್ಪ್ರೆಸ್ (ರೈಲು ಸಂಖ್ಯೆ 10107) ಮಧ್ಯಾಹ್ನ 12.12ಕ್ಕೆ ಪ್ರಯಾಣ ಬೆಳೆಸಲು ಸಿದ್ಧವಾಗಿತ್ತು. ಹಸಿರು ನಿಶಾನೆ ಸಿಕ್ಕು ರೈಲು ನಿಧಾನವಾಗಿ ಚಲಿಸಲು ಆರಂಭಿಸುತ್ತಿದ್ದಂತೆ, ಓಡಿಬಂದ ಪ್ರಯಾಣಿಕನೊಬ್ಬ ಹತ್ತುವ ಆತುರದಲ್ಲಿ ಆಯತಪ್ಪಿ ಪ್ಲಾಟ್ಫಾರ್ಮ್ ಮತ್ತು ರೈಲಿನ ಬೋಗಿಯ ನಡುವಿನ ಕಿರಿದಾದ ಜಾಗಕ್ಕೆ ಬೀಳುವ ಹಂತಕ್ಕೆ ತಲುಪಿದ್ದ.
ಸಮಯಪ್ರಜ್ಞೆ ಮೆರೆದ ಪಾಯಿಂಟ್ಸ್ಮ್ಯಾನ್ ಸಂದೀಪ್
ಪ್ರಯಾಣಿಕ ರೈಲಿನಡಿ ಸಿಲುಕುವುದನ್ನು ಗಮನಿಸಿದ ಕರ್ತವ್ಯನಿರತ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್, ತಮ್ಮ ಪ್ರಾಣದ ಹಂಗು ತೊರೆದು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ರೈಲಿನ ವೇಗ ಹೆಚ್ಚುವ ಮುನ್ನವೇ ಆತನನ್ನು ಬಲವಾಗಿ ಹಿಂದಕ್ಕೆ ಎಳೆದು ಪ್ಲಾಟ್ಫಾರ್ಮ್ಗೆ ಬೀಳಿಸಿದ್ದಾರೆ.
ಸಂದೀಪ್ ಅವರ ಈ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಸ್ವಲ್ಪ ಹೊತ್ತಿನ ಆತಂಕದ ಬಳಿಕ, ಮಧ್ಯಾಹ್ನ 12.16ಕ್ಕೆ ರೈಲನ್ನು ಸುರಕ್ಷಿತವಾಗಿ ಮುಂದಿನ ನಿಲ್ದಾಣಕ್ಕೆ ಕಳುಹಿಸಲಾಯಿತು.
ಕರ್ತವ್ಯ ಜೊತೆಗೆ ಮಾನವೀಯತೆ ಮೆರೆದು ಪ್ರಯಾಣಿಕನ ಜೀವ ಉಳಿಸಿದ ಸಂದೀಪ್ ನಾಯಕ್ ಅವರ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಧೈರ್ಯಶಾಲಿ ಕೃತ್ಯವನ್ನು ಮೆಚ್ಚಿದ ಕೊಂಕಣ ರೈಲ್ವೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು, 10,000 ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.