‘FIR ದಾಖಲಿಸಿದರೂ ಹೆದರಬೇಡಿ, NICE ರಸ್ತೆ ಟೋಲ್ ಕಟ್ಟಬೇಡಿ’: ಕೇಂದ್ರ ಸಚಿವ HD ಕುಮಾರಸ್ವಾಮಿ

ಟೋಲ್ ಸಂಗ್ರಹದ ವಿಚಾರದಲ್ಲಿ NICE ಕಂಪನಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಎಚ್ ಡಿ ಕುಮಾರಸ್ವಾಮಿ ತೀವ್ರ ಆರೋಪ ಮಾಡಿದ್ದು, NICE ರಸ್ತೆ ಟೋಲ್ ಸಂಗ್ರಹದ ಹೆಸರಿನಲ್ಲಿ “ಹಗಲು ದರೋಡೆ” ನಡೆಯುತ್ತಿದೆ..
Union Minister HD Kumaraswamy
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ನೈಸ್ ರಸ್ತೆ ವಿಚಾರವಾಗಿ ತಮ್ಮ ಸಮರ ಮುಂದುವರೆಸಿರುವ ಕೇಂದ್ರ ಸಚಿವ HD ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ NICE ರಸ್ತೆಯಲ್ಲಿ ಟೋಲ್ ಪಾವತಿಸಬೇಡಿ ಎಂದು ಮತ್ತೊಮ್ಮೆ ವಾಹನ ಸವಾರರಿಗೆ ಕರೆ ನೀಡಿದ್ದಾರೆ.

ಟೋಲ್ ಸಂಗ್ರಹದ ವಿಚಾರದಲ್ಲಿ NICE ಕಂಪನಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಎಚ್ ಡಿ ಕುಮಾರಸ್ವಾಮಿ ತೀವ್ರ ಆರೋಪ ಮಾಡಿದ್ದು, NICE ರಸ್ತೆ ಟೋಲ್ ಸಂಗ್ರಹದ ಹೆಸರಿನಲ್ಲಿ “ಹಗಲು ದರೋಡೆ” ನಡೆಯುತ್ತಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಟೋಲ್ ಪಾವತಿಸದಿದ್ದರೆ FIR ದಾಖಲಿಸುವುದಾಗಿ ಅಧಿಕಾರಿಗಳು ಬೆದರಿಸಿದರೂ ವಾಹನ ಸವಾರರು ಹೆದರಬಾರದು. FIR ದಾಖಲಿಸಿದರೂ ಹೆದರಬೇಡಿ. ಕೈಮುಗಿದು ಮನವಿ ಮಾಡುತ್ತೇನೆ, ಯಾವುದೇ ಕಾರಣಕ್ಕೂ ಟೋಲ್ ಪಾವತಿಸಬೇಡಿ” ಎಂದು ಕುಮಾರಸ್ವಾಮಿ ಮನವಿ ಮಾಡಿದರು.

Union Minister HD Kumaraswamy
ತಕ್ಷಣವೇ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ನಿಲ್ಲಿಸಿ: ಸಿಎಂ ಡಿ.ಕೆ ಶಿವಕುಮಾರ್ ಗೆ ಎಚ್.ಡಿ ಕುಮಾರಸ್ವಾಮಿ ಪತ್ರ

‘ತೀರ್ಪಿನ ದಿನವೇ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು’

NICE ಕಂಪನಿಯ ವಿರುದ್ಧ ಸಿಂಗಲ್ ಬೆಂಚ್ ತೀರ್ಪು ನೀಡಿದ ದಿನವೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದರು. ನ್ಯಾಯಾಲಯದ ತೀರ್ಪು ಹಾಗೂ ಫ್ರೇಮ್‌ವರ್ಕ್ ಒಪ್ಪಂದದ ನಿಯಮಗಳನ್ನು NICE ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದರು. ರಾಜ್ಯ ಸರ್ಕಾರದ ಅನುಮತಿ ಪಡೆಯದೇ ಟೋಲ್ ದರಗಳನ್ನು ಸುಮಾರು 7 ರಿಂದ 8 ಪಟ್ಟು ಹೆಚ್ಚಿಸಲಾಗಿದೆ ಎಂದು ದೂರಿದರು.

ಅಕ್ರಮ ಟೋಲ್ ದರ ಏರಿಕೆಯ ವಿಚಾರವನ್ನು ಸಿಂಗಲ್ ಬೆಂಚ್ ಹಾಗೂ ಡಿವಿಷನ್ ಬೆಂಚ್ ಎರಡೂ ಗಮನಿಸಿವೆ. ಆದರೂ ತೀರ್ಪು ಬಂದ ಒಂದು ತಿಂಗಳಾದರೂ ಸರ್ಕಾರ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು. “ಸರ್ಕಾರ ಮತ್ತು NICE ಕಂಪನಿ ನಡುವೆ ಏನು ಸಂಬಂಧ?” ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಅಕ್ರಮವಾಗಿ 2,000 ಕೋಟಿ ಸಂಗ್ರಹ

NICE ರಸ್ತೆಯಲ್ಲಿ ಟೋಲ್ ಹೆಸರಿನಲ್ಲಿ ಸುಮಾರು ₹2,000 ಕೋಟಿ ಅಕ್ರಮವಾಗಿ ಸಂಗ್ರಹಿಸಲಾಗಿದೆ. ಫ್ರೇಮ್‌ವರ್ಕ್ ಒಪ್ಪಂದದ ಪ್ರಕಾರ, 111 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಿ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸುವವರೆಗೆ ಟೋಲ್ ಸಂಗ್ರಹಿಸಲು ಅವಕಾಶವಿಲ್ಲ. ಹಾಗಿದ್ದರೂ ಈ ಷರತ್ತುಗಳನ್ನು ಪೂರೈಸದೆ NICE ಕಂಪನಿ ಟೋಲ್ ಸಂಗ್ರಹ ಮುಂದುವರಿಸುವುದು ಹೇಗೆ? ಟೋಲ್ ದರಗಳನ್ನು ಹೆಚ್ಚಿಸಲು ಯಾವ ಆಧಾರವಿದೆ? ಎಂದು ಅವರು ಪ್ರಶ್ನಿಸಿದರು.

‘ಅಕ್ರಮ ಟೋಲ್ ವಿರುದ್ಧ ಧ್ವನಿ ಎತ್ತಿ’

ಸಾರ್ವಜನಿಕರು ಅಕ್ರಮ ಟೋಲ್ ಸಂಗ್ರಹದ ವಿರುದ್ಧ ಧ್ವನಿ ಎತ್ತಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು. ಈ ಹಿಂದೆ ಕೂಡ NICE ರಸ್ತೆ ಟೋಲ್ ಪಾವತಿಸದಂತೆ ಕುಮಾರಸ್ವಾಮಿ ಕರೆ ನೀಡಿದ್ದರು.

ಇದಾದ ಬಳಿಕ ಹಲವು ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿತ್ತು. ಟೋಲ್ ಸಂಗ್ರಹದ ಕಾನೂನುಬದ್ಧತೆಯನ್ನೇ ಕೆಲ ಪ್ರಯಾಣಿಕರು ಪ್ರಶ್ನಿಸಿದ್ದರು.

ಇದೀಗ ಕುಮಾರಸ್ವಾಮಿ ಮತ್ತೆ “ಟೋಲ್ ಪಾವತಿಸಬೇಡಿ” ಎಂದು ಕರೆ ನೀಡಿರುವುದು NICE ರಸ್ತೆ ಟೋಲ್ ವಿವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com