

ಬೆಂಗಳೂರು: ಕಳೆದ ವಾರ ನೇಪಾಳ-ಟಿಬೆಟ್ ಗಡಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ, ರಾಜ್ಯದ ಸುಮಾರು 13 ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆ ಇನ್ನೂ ಆಗಬೇಕಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.
'ಸುಮಾರು 13 ಮಂದಿಯ ಪತ್ತೆ ಇನ್ನೂ ಆಗಬೇಕಿದೆ. ನಮ್ಮ ಅಧಿಕಾರಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಸಂಪರ್ಕ ಸಾಧಿಸಲು ನಾವು ನಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದೇವೆ. ಒಂದು ಗುಂಪನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ; ಉಳಿದವರೆಲ್ಲರೂ ಪತ್ತೆಯಾಗಿದ್ದಾರೆ' ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕೆಲಸದ ನಿಮಿತ್ತ ಭಾನುವಾರ ರಾತ್ರಿ ನವದೆಹಲಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಚರ್ಚಿಸಿದ್ದೇನೆ. ಅಲ್ಲಿ ಸಿಲುಕಿಕೊಂಡಿರುವವರ ಪೈಕಿ ಕೆಲವರೊಂದಿಗೆ ನಾನು ಮಾತನಾಡಿದ್ದಾಗಿ ತಿಳಿಸಿದರು.
ನೇಪಾಳ ಹಾಗೂ ಟಿಎಆರ್ನಲ್ಲಿ (Tibet Autonomous Region) ಸಿಲುಕಿಕೊಂಡಿರುವ ಅಥವಾ ನಾಪತ್ತೆಯಾಗಿರುವ ಕರ್ನಾಟಕದ 28 ಮಂದಿಯ ವಿವರಗಳನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಕ್ರೋಢೀಕರಿಸಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿತ್ತು. ಇವರಲ್ಲಿ 23 ಮಂದಿ ಬೆಂಗಳೂರು ನಗರ ಜಿಲ್ಲೆಯವರಾಗಿದ್ದಾರೆ.
ಸಿಕ್ಕಿಹಾಕಿಕೊಂಡಿರುವ ಅಥವಾ ನಾಪತ್ತೆಯಾಗಿರುವವರ ಪೈಕಿ ಹೆಚ್ಚಿನವರು ನೇಪಾಳದ ರಸುವಾ ಜಿಲ್ಲೆಯ ತಿಮುರೆಯಲ್ಲಿ ಇದ್ದರೆ, ಕೆಲವರು ಟಿಬೆಟ್ ಸ್ವಾಯತ್ತ ಪ್ರದೇಶದ (TAR) ದಾರ್ಚೆನ್ನಲ್ಲಿದ್ದರು ಎಂದು ವರದಿಯಾಗಿದೆ.
ಒಟ್ಟು 28 ಮಂದಿಯ ಪೈಕಿ ನಾಲ್ವರು ಸುರಕ್ಷಿತವಾಗಿರುವುದು ಖಚಿತಪಟ್ಟಿದೆ ಮತ್ತು ಉಳಿದ 24 ಮಂದಿಯ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಸರ್ಕಾರ ತಿಳಿಸಿತ್ತು.
ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಸೋಮವಾರದ ವೇಳೆಗೆ 903ಕ್ಕೆ ಏರಿಕೆಯಾಗಿದೆ; ಈ ದುರಂತದ ನಂತರ ಹೆಚ್ಚಿನ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸುಮಾರು 4,250 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮ ಮತ್ತು ಬಂಡೆಗಳ ಕುಸಿತ ಅಥವಾ ಹಿಮಪಾತದಿಂದಾಗಿ ಉಂಟಾದ ಈ ದುರಂತವು, ಆಗಸ್ಟ್ 26 ರಂದು ಉತ್ತರ ಮತ್ತು ಮಧ್ಯ ನೇಪಾಳದ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿತು.