ಸಮುದ್ರ ಅಲೆಯಿಂದ ವಿದ್ಯುತ್ ತಯಾರಿಸುವ ಮೂಲಮಾದರಿ ಸಾಧನ ಅಭಿವೃದ್ಧಿ: ಬೆಂಗಳೂರು ಮೂಲದ ಎಂಜಿನಿಯರ್ ಸಾಧನೆ
ಮಂಗಳೂರು: ಬೆಂಗಳೂರು ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಮೂಲಮಾದರಿ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ತರಂಗ ಶಕ್ತಿ ಪರಿವರ್ತಕಗಳಿಗಿಂತ ಹೆಚ್ಚಿನ ದಕ್ಷತೆಯನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ. ಈ ಸಾಧನವನ್ನು ಭಾನುವಾರ ರಾತ್ರಿ ಮಂಗಳೂರಿನ ಸುರತ್ಕಲ್ನಲ್ಲಿರುವ ಲೈಟ್ಹೌಸ್ ಬೀಚ್ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ನೆಲಮಂಗಲದ ಉದ್ಯಮಿ ಮತ್ತು ಶ್ರೀ ಮಾರುತಿ ಎನರ್ಜಿ ಸಿಸ್ಟಮ್ಸ್ನ ಮಾಲೀಕರಾದ ಕೆ. ವಿಶ್ವನಾಥ್ ಅವರು 2015 ರಲ್ಲಿ ತರಂಗ ಶಕ್ತಿ ಪರಿವರ್ತನೆಯೊಂದಿಗೆ ಪ್ರಯೋಗವನ್ನು ಪ್ರಾರಂಭಿಸಿದರು.
ಗೋಕರ್ಣ ಮತ್ತು ಮುರುಡೇಶ್ವರ ಸೇರಿದಂತೆ ಕರಾವಳಿ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಸುಮಾರು ಒಂದು ದಶಕದ ಸಂಶೋಧನೆ ಮತ್ತು 15 ಬಾರಿ ಪ್ರಯೋಗ ಮಾಡಿದ ನಂತರ, ಸುರತ್ಕಲ್ ಬೀಚ್ನಲ್ಲಿ ತಮ್ಮ ಮೂರನೇ ಪ್ರಯೋಗದ ಸಮಯದಲ್ಲಿ ಪ್ರಗತಿ ಕಂಡಿದ್ದಾರೆ.
ಪ್ರತಿಯೊಂದು ಪ್ರಯೋಗವು ತರಂಗ ಶಕ್ತಿ ಪರಿವರ್ತಕದ ವಿಭಿನ್ನ ವಿನ್ಯಾಸವನ್ನು ಒಳಗೊಂಡಿತ್ತು ಎಂದು ಸಾಧನ ಅಭಿವೃದ್ದಿಪಡಿಸಿದ ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾದ ವಿಶ್ವನಾಥ್ ಹೇಳುತ್ತಾರೆ.
ಹೇಗೆ ಕೆಲಸ ಮಾಡುತ್ತದೆ?
1-ಕಿಲೋವ್ಯಾಟ್ ಮೂಲಮಾದರಿ ಸಾಧನವು 300 ರಿಂದ 400 ವ್ಯಾಟ್ಗಳನ್ನು ನೀಡುತ್ತದೆ. ಇದರ ಬೆಲೆ ಸುಮಾರು 4 ಲಕ್ಷ ರೂಪಾಯಿ ಆಗಿದೆ. ವಿದ್ಯುತ್ ಉತ್ಪಾದಿಸುವ ಮೊದಲು ತರಂಗ ಚಲನೆಯನ್ನು ಹೈಡ್ರಾಲಿಕ್ ಅಥವಾ ನ್ಯೂಮ್ಯಾಟಿಕ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಂಪ್ರದಾಯಿಕ ತರಂಗ ಶಕ್ತಿ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಇದು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ, ಒಟ್ಟಾರೆ ದಕ್ಷತೆಯನ್ನು ಸುಧಾರಿಸುತ್ತದೆ.
ಇದು ಸುಮಾರು ಆರು ಅಡಿ ಆಳದಲ್ಲಿ ನೀರಿನೊಳಗೆ ಮುಳುಗಿರುವ ಫ್ಲ್ಯಾಪ್-ಪ್ರಕಾರದ ಯಂತ್ರವ್ಯವಸ್ಥೆಯನ್ನು ಬಳಸುತ್ತದೆ. ಒಳಬರುವ ಅಲೆಗಳೊಂದಿಗೆ ಫ್ಲ್ಯಾಪ್ ಮುಂದೆ-ಹಿಂದೆ ದೋಲಾಯಮಾನವಾಗುತ್ತದೆ. ಈ ದೋಲನ ಚಲನೆಯನ್ನು ಭ್ರಮಣಶಕ್ತಿಯಾಗಿ ಪರಿವರ್ತಿಸಲಾಗುತ್ತದೆ, ನಂತರ ಅದನ್ನು ವಿದ್ಯುತ್ಶಕ್ತಿಯಾಗಿ ರೂಪಾಂತರಿಸಲಾಗುತ್ತದೆ.
ತಮ್ಮ ಮೂಲಮಾದರಿಯ ಸಾಮರ್ಥ್ಯವನ್ನು 1 kW ನಿಂದ 25 kW ಗೆ ಹಾಗೂ ಅಂತಿಮವಾಗಿ 250 kW ಗೆ ಹೆಚ್ಚಿಸುವ ಯೋಜನೆ ಇದೆ ಎಂದು ವಿಶ್ವನಾಥ್ ಹೇಳುತ್ತಾರೆ. ತಮ್ಮ ಸಾಧನದ ಪೇಟೆಂಟ್ ಗೆ ಚೆನ್ನೈಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

