

ಬೆಂಗಳೂರು: ಕೆನಡಾ ಸರ್ಕಾರದ ಪ್ರತಿನಿಧಿ ಎಂದು ಹೇಳಲಾಗುವ 44 ವರ್ಷದ ಕೆನಡಾದ ಪ್ರಜೆಯೊಬ್ಬರು, ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನಲ್ಲಿರುವ ಪಂಚತಾರಾ ಐಷಾರಾಮಿ ಹೋಟೆಲ್ನ ಥೆರಪಿಸ್ಟ್ ಬಳಿ ಮಸಾಜ್ಗೆ ಹೋಗಿದ್ದಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆನಡಾದ ಮಹಿಳೆ ಸಮ್ಮೇಳನದಲ್ಲಿ ಭಾಗವಹಿಸಲೆಂದು ನಗರಕ್ಕೆ ಬಂದಿದ್ದರು. ಸೂರ್ಯ ಪ್ರತಾಪ್ ರಾಣಾ ಎಂಬ ವ್ಯಕ್ತಿ ಮಹಿಳೆ ಮೇಲಿನ ದೌರ್ಜನ್ಯದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಹೋಟೆಲ್ ಸಿಬ್ಬಂದಿಯೊಂದಿಗೆ ಮಾತನಾಡುವಾಗ ರೆಕಾರ್ಡ್ ಮಾಡಿದ ವಿಡಿಯೋ ಜೊತೆಗೆ ಅವರು ಶುಕ್ರವಾರ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯ ನಿಖರವಾದ ಸ್ಥಳ ಮತ್ತು ಸಂಪರ್ಕ ಸಂಖ್ಯೆಯನ್ನು ಒದಗಿಸುವಂತೆ ಕೋರಿದ್ದಾರೆ.
'ಮಸಾಜ್ ಅವಧಿಯಲ್ಲಿ ಅವರು ಅನುಚಿತವಾಗಿ ವರ್ತಿಸಿದರು. ವೃತ್ತಿಪರ ಮಿತಿಗಳನ್ನು ಮೀರಿದರು. ಒಂದು ಹಂತದಲ್ಲಿ ಬಾಗಿಲು ತೆರೆದುಬಿಟ್ಟರು. ಆಗ ಮೈಮೇಲೆ ಬಟ್ಟೆಗಳು ಇರಲಿಲ್ಲ. ಇದರಿಂದಾಗಿ ತೀವ್ರ ತೊಂದರೆ ಮತ್ತು ಅವಮಾನ ಉಂಟಾಯಿತು. ಈ ಕುರಿತು ಅವರು ಮಾತನಾಡಿದಾಗ, ಮೌನದಿಂದಿರಲು ಬೆದರಿಕೆ ಹಾಕಿದ್ದಾರೆ. ಆಘಾತಕ್ಕೊಳಗಾದ ಅವರು ಸಹಾಯ ಕೋರಿದರು. ಹೋಟೆಲ್ ಮ್ಯಾನೇಜ್ಮೆಂಟ್ ಈ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ನಾವು ಆರೋಪಿ ಜೊತೆಗೆ ಹೋಟೆಲ್ ಮ್ಯಾನೇಜ್ಮೆಂಟ್ ವಿರುದ್ಧ ಮೊಕದ್ದಮೆ ಹೂಡಲಿದ್ದೇವೆ' ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
'ಈ ಘಟನೆ ಎರಡು ದಿನಗಳ ಹಿಂದೆ ನಡೆದಿತ್ತು. ಆರೋಪಿ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲವಂತದ ಪ್ರಕರಣ ದಾಖಲಿಸಲಾಗಿದೆ' ಎಂದು ಡಿಸಿಪಿ (ಕೇಂದ್ರ) ಅಕ್ಷಯ್ ಎಂ ಹಕೆ ಹೇಳಿದ್ದಾರೆ.
ತನಿಖೆ ಕುರಿತು ಮಾಹಿತಿ ಹೊಂದಿರುವ ಮತ್ತೊಬ್ಬ ಅಧಿಕಾರಿ, ಹೋಟೆಲ್ ಸಂತ್ರಸ್ತೆಗೆ ₹7 ಸಾವಿರವನ್ನು ಮರುಪಾವತಿಸಿದೆ. ಮಸಾಜ್ಗಾಗಿ ₹10,000 ಪಾವತಿಸಿರುವುದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.
Advertisement