

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಜೋಡಿ ಕೊಲೆ ನಡೆದಿದ್ದು, ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಜ್ಞಾನ್ ನಗರದಲ್ಲಿ ಬುಧವಾರ ಬೆಳಗ್ಗೆ ಟೆಕ್ಕಿಯೊಬ್ಬ ತನ್ನ ತಂದೆ, 60 ವರ್ಷದ ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಮತ್ತು ಹೆತ್ತ ತಾಯಿ, 55 ವರ್ಷದ ದಂತ ವೈದ್ಯೆಯನ್ನು ಇರಿದು ಕೊಂದಿದ್ದಾನೆ.
ಮೃತರನ್ನು ನವೀನ್ ಚಂದ್ರ ಭಟ್ ಮತ್ತು ಅವರ ಪತ್ನಿ ದಂತವೈದ್ಯೆ ಡಾ. ಶ್ಯಾಮಲಾ ಭಟ್ ಎಂದು ಗುರುತಿಸಲಾಗಿದ್ದು, ಅವರ ಮಗ, ಆರೋಪಿ ರೋಹನ್ ಚಂದ್ರ ಭಟ್(33)ನನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಆದರ್ಶ್ ವಿಸ್ಟಾದ ವಿಲ್ಲಾ ಸಂಖ್ಯೆ 112 ರಲ್ಲಿ ಬುಧವಾರ ಬೆಳಗ್ಗೆ 7.30 ರ ಸುಮಾರಿಗೆ ರೋಹನ್ ತನ್ನ ಹೆತ್ತವರನ್ನು ಅಡುಗೆಮನೆಯ ಚಾಕುವಿನಿಂದ ಮಾರಾಣಾಂತಿಕ ಹಲ್ಯೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬೆಳಗ್ಗೆ 8.15 ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆಮನೆಯವರು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ. ಮಾಧವಿ ನಾಯರ್ ನೀಡಿದ ದೂರಿನ ಆಧಾರದ ಮೇಲೆ, ರೋಹನ್ ವಿರುದ್ಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಶವಗಳನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ದಂಪತಿಯ ಮಗಳು ಅಮೆರಿಕದಿಂದ ಆಗಮಿಸುತ್ತಿದ್ದು, ಅವರು ಬಂದ ನಂತರ ಶವಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement