

ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಸೇವೆಯನ್ನು ಹಂತ ಹಂತವಾಗಿ ಪುನರಾರಂಭಿಸುವ ಅರಣ್ಯ ಸಚಿವ ಈಶ್ವರ್ ಖಂದ್ರೆ ಅವರ ನಿರ್ಧಾರಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಕಳೆದ ವರ್ಷದ ನವೆಂಬರ್ 7ರಿಂದ ಸ್ಥಗಿತಗೊಂಡಿದ್ದ ಸಫಾರಿ ಸೇವೆ ಮತ್ತೆ ಆರಂಭವಾಗಲಿದೆ ಎಂಬ ಸರ್ಕಾರದ ಘೋಷಣೆಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಫಾರಿ ಆರಂಭವಾಗಿದ್ದ ಅವಧಿಯಲ್ಲಿ ವನ್ಯಜೀವಿಗಳು ಅರಣ್ಯ ಗಡಿ ಗ್ರಾಮಗಳತ್ತ ಹೆಚ್ಚಾಗಿ ಚಲಿಸಿದ ಪರಿಣಾಮ ಮಾನವ–ವನ್ಯಜೀವಿ ಸಂಘರ್ಷ ತೀವ್ರಗೊಂಡಿತ್ತು. ಈ ಸಂಘರ್ಷಗಳಲ್ಲಿ ಕನಿಷ್ಠ ನಾಲ್ವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅರಣ್ಯ ಗಡಿ ಗ್ರಾಮಗಳಲ್ಲಿ ರೈತರು ಮತ್ತು ಗ್ರಾಮಸ್ಥರು ಈಗಲೂ ಆನೆ, ಚಿರತೆ ಹಾಗೂ ಇತರೆ ವನ್ಯಜೀವಿಗಳಿಂದ ಬೆಳೆ ನಾಶ ಮತ್ತು ಜೀವಭಯವನ್ನು ಎದುರಿಸುತ್ತಿದ್ದಾರೆ.
ಇದೀಗ ಸಫಾರಿ ಪುನರಾರಂಭದಿಂದ ಅರಣ್ಯದೊಳಗಿನ ಚಲನವಲನ ಹೆಚ್ಚಾಗಿ, ವನ್ಯಜೀವಿಗಳು ಹೊರಗಡೆಗೆ ಸರಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ರೈತರ ಕಳವಳ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಸಫಾರಿ ಪುನರಾರಂಭವನ್ನು ಹಂತ ಹಂತವಾಗಿ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ನಡೆಸಲಾಗುತ್ತದೆ. ಮಾನವ–ವನ್ಯಜೀವಿ ಸಂಘರ್ಷ ತಡೆಗೆ ತಂತ್ರಜ್ಞಾನ ಬಳಕೆ, ಗಸ್ತು ಮತ್ತು ಪರಿಹಾರ ವ್ಯವಸ್ಥೆಗಳನ್ನು ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪರಿಸರ ತಜ್ಞರು ಮಾತನಾಡಿ, ಸಫಾರಿ ಪ್ರವಾಸೋದ್ಯಮ ಮತ್ತು ಸ್ಥಳೀಯ ಜನಜೀವನ ನಡುವೆ ಸಮತೋಲನ ಅಗತ್ಯ. ಅರಣ್ಯ ಗಡಿ ಗ್ರಾಮಗಳಿಗೆ ಸೌರ ವಿದ್ಯುತ್ ಬೇಲಿ, ಮುನ್ನೆಚ್ಚರಿಕೆ ವ್ಯವಸ್ಥೆಗಳು, ವೇಗಗತಿ ಪರಿಹಾರ ಪಾವತಿ ಮತ್ತು ಸಮುದಾಯ ಪಾಲ್ಗೊಳ್ಳುವಿಕೆ ಯೋಜನೆಗಳು ಸಂಘರ್ಷ ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement