

ಬೆಂಗಳೂರು: ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಕೆಲವೊಂದು ಅಮಾನವೀಯ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಎಸ್ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಚಿಕ್ಕಬಳ್ಳಾಪುರ) ಕಾಲೇಜು ಸಿಬ್ಬಂದಿ 14 ನಾಯಿಗಳನ್ನು ನಂದಿಬೆಟ್ಟದ ಬಳಿ ಎಸೆದು ಹೋಗಿದ್ದಾರೆ. ಈ ಪೈಕಿ 13 ಮರಿಗಳನ್ನು ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸದಸ್ಯರು ರಕ್ಷಣೆ ಮಾಡಿದ್ದಾರೆ.
ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸಂಸ್ಥಾಪಕ ವಿಕಾಶ್ ಎ. ಬಾಫ್ನಾ ಅವರು ಮಾತನಾಡಿ, ನಾಯಮರಿಗಳು 20 ದಿನಗಳ ಹಿಂದೆ ಜನಿಸಿದ್ದು, ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಹೆಸರನ್ನು ಹೊಂದಿರುವ ವಾಹನದ ಭದ್ರತಾ ಸಿಬ್ಬಂದಿ ಸೇರಿ ಮೂವರು ಈ ನಾಯಿ ಮರಿಗಳನ್ನು ಎಸೆದು ಹೋಗುತ್ತಿರುವುದನ್ನು ಪ್ರಯಾಣಿಕನೊಬ್ಬ ನೋಡಿದ್ದಾನೆಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ರಕ್ಷಣೆಗೆ ಧಾವಿಸಲಾಗಿತ್ತು. ನಾಯಿಮರಿಗಳನ್ನು ಬೆಂಗಳೂರು-ಹೈದರಾಬಾದ್ ಹೆದ್ದಾರಿ (NH44) ಬಳಿ ಎಸೆಯಲಾಗಿತ್ತು. ಪೊದೆಗಳ ಮಧ್ಯೆ ನಾಯಿಗಳನ್ನು ಎಸೆದಿದ್ದರು. ರಕ್ಷಣೆ ಬಹಳ ಕಷ್ಟಕರವಾಗಿತ್ತು. 14 ಮರಿಗಳ ಪೈಕಿ 13 ಮರಿಗಳನ್ನು ರಕ್ಷಣೆ ಮಾಡಲಾಗಿದೆ. ಒಂದು ಮರಿ ಪತ್ತೆಯಾಗಿಲ್ಲ. 13 ಮರಿಗಳ ಪೈಕಿ ಒಂದು ನಾಯಿಮರಿ ವಾಹನದ ಹೊಡೆತಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದೆ.
ಗಾಯಗೊಂಡ ನಾಯಿಮರಿಗೆ ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸೌಲಭ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 12 ನಾಯಿಗಳನ್ನು ಕಾಲೇಜು ಕಾಂಪೌಂಡ್ನಲ್ಲಿರುವ ತಾಯಿಯೊಂದಿಗೆ ಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕಾಲೇಜು ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಈ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ನಾಯಿಮರಿಗಳ ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆಂದು ಬಫ್ನಾ ಅವರು ಹೇಳಿದ್ದಾರೆ.
Advertisement