'ಸುರಕ್ಷಿತ ಪಾದಚಾರಿ ಮಾರ್ಗ' ಅಭಿಯಾನ: ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವು ಆರಂಭಿಸಿದ GBA, Video

ಗ್ರೇಟರ್ ಬೆಂಗಳೂರು ಅಥಾರಿಟಿಯ ವ್ಯಾಪ್ತಿಯ 5 ನಗರ ನಿಗಮಗಳ ವ್ಯಾಪ್ತಿಯಲ್ಲಿರುವ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವುಗೊಳಿಸಲು ಸಮಗ್ರ ಕಾರ್ಯಯೋಜನೆ ರೂಪಿಸಿ ವಿಶೇಷ ಅಭಿಯಾನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
Bengaluru Footpath Clearance Drive Begins
ಬೆಂಗಳೂರಿನಲ್ಲಿ ಪಾದಾಚಾರಿ ಮಾರ್ಗಗಳ ಅತಿಕ್ರಮಣ ತೆರವು ಕಾರ್ಯಾಚರಣೆ
Updated on

ಬೆಂಗಳೂರು: 'ಸುರಕ್ಷಿತ ಪಾದಚಾರಿ ಮಾರ್ಗ' (Safe Footpath Campaign) ಅಭಿಯಾನದ ಅಂಗವಾಗಿ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ನಗರದ ವಿವಿಧ ಭಾಗಗಳಲ್ಲಿನ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವು ಕಾರ್ಯವನ್ನು ಬುಧವಾರ ಬೆಳಗ್ಗೆಯಿಂದ ಆರಂಭಿಸಿದೆ.

ಜೂನ್ 29ರಂದು ಕರ್ನಾಟಕದ ಸಚಿವ ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಅಥಾರಿಟಿಯ ವ್ಯಾಪ್ತಿಯ ಐದು ನಗರ ನಿಗಮಗಳ ವ್ಯಾಪ್ತಿಯಲ್ಲಿರುವ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವುಗೊಳಿಸಲು ಸಮಗ್ರ ಕಾರ್ಯಯೋಜನೆ ರೂಪಿಸಿ ವಿಶೇಷ ಅಭಿಯಾನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆ ಈ ಕಾರ್ಯಾಚರಣೆ ಆರಂಭವಾಗಿದೆ.

ಈ ಅಭಿಯಾನದಡಿ ಟ್ರಿನಿಟಿ ಜಂಕ್ಷನ್‌ನಿಂದ ಎಂಜಿ ರೋಡ್ ಪಾರ್ಕ್‌ವರೆಗೆ, 100 ಅಡಿ ಇಂದಿರಾನಗರ ರಸ್ತೆಯಿಂದ ದೊಮ್ಮಲೂರು ಫ್ಲೈಓವರ್‌ವರೆಗೆ, ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ರೈಲ್ವೆ ಸೇತುವೆಯವರೆಗೆ, ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ, ಜಯನಗರದ 8ನೇ ಮತ್ತು 9ನೇ ಮುಖ್ಯರಸ್ತೆ (ಕನಕಪಾಳ್ಯ ರಸ್ತೆದಿಂದ 15ನೇ ಕ್ರಾಸ್‌ವರೆಗೆ) ಹಾಗೂ ಆರ್‌ವಿ ರಸ್ತೆಯ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್‌ವರೆಗೆ ಅತಿಕ್ರಮಣ ತೆರವು ಕಾರ್ಯ ನಡೆಯಲಿದೆ.

Bengaluru Footpath Clearance Drive Begins
'ಮೇಕೆದಾಟು ಪಾದಯಾತ್ರೆಯಲ್ಲಿ ನಾನು ಸುಸ್ತಾಗಿ ವಾಲಿಕೊಂಡು ನಡೆದ ವಿಡಿಯೊ ಹಾಕಿ ಕುಡುಕ ಎಂದು ಬರೆದು ಮಜಾ ತಗೊಂಡ್ರು, ಫೇಕ್ ನ್ಯೂಸ್ ನಶೆ ಹತ್ತಿಸಿಕೊಳ್ಳಬೇಡಿ: CM ಡಿ ಕೆ ಶಿವಕುಮಾರ್

ಸುಪ್ರೀಂ ಕೋರ್ಟ್ ಆದೇಶ

ಸಚಿವರ ಮಾಹಿತಿ ಪ್ರಕಾರ, ಈ ಅಭಿಯಾನವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಹಾಗೂ ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆಯ ನಿಯಮಾವಳಿಗಳಿಗೆ ಅನುಗುಣವಾಗಿ ಜಾರಿಗೊಳಿಸಲಾಗುತ್ತಿದೆ.

ಬೆಳಗ್ಗೆ 9:30ಕ್ಕೆ ಶುರುವಾದ ಈ ಕಾರ್ಯಾಚರಣೆಗೆ ಜೆಸಿಬಿಗಳನ್ನು ಬಳಸಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರ ಬೆಂಗಾವಲು ಸಹ ಒದಗಿಸಲಾಗಿದೆ.

ಜಯನಗರದಲ್ಲಿ ಕಾರ್ಯಾಚರಣೆ

ಜಯನಗರದ ಅಶೋಕ ಪಿಲ್ಲರ್ ಸಮೀಪದಿಂದ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಅಂಗಡಿಗಳು ಮತ್ತು ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳಿಂದ ಒತ್ತುವರಿ ಮಾಡಲಾಗಿದ್ದ ಫುಟ್​ಪಾತ್‌ಗಳನ್ನು ತೆರವುಗೊಳಿಸಲಾಗುತ್ತಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 153 ರಲ್ಲಿ, ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ ಈ ತೆರವು ನಡೆಯುತ್ತಿದೆ.

ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿ, ಭವಿಷ್ಯದಲ್ಲಿ ಮತ್ತೆ ಒತ್ತುವರಿ ಮಾಡದಂತೆ ನಿಗಾ ವಹಿಸಲು ಜಿಬಿಎ ಎಚ್ಚರಿಕೆ ವಹಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com