

ಮಂಗಳೂರು: ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಂಚಿ ಬಳಿಯ ಮೊಂತಿಮರೂಪಡ್ಪುವಿನಲ್ಲಿ ಇಂದು ಬೆಳಿಗ್ಗೆ 17 ವರ್ಷದ ಬಾಲಕಿಯ ಮೇಲೆ ಆಕೆಯ ಸಂಬಂಧಿಯೊಬ್ಬ ಚೂರಿಯಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ತನ್ನ ಕಾಲೇಜಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಆರೋಪಿ 28 ವರ್ಷದ ಮೊಹಮ್ಮದ್ ಜವಾರ್ ಹಲ್ಲೆ ನಡೆಸಿದ್ದಾನೆ. ಬಸ್ ನಿಲ್ದಾಣದ ಬಳಿ ಆರೋಪಿ ದಿನಸಿ ಅಂಗಡಿ ನಡೆಸುತ್ತಿದ್ದನು.
ಪೊಲೀಸರ ಪ್ರಕಾರ, ಆರೋಪಿಯು ಸಾರ್ವಜನಿಕರ ಮುಂದೆ ಮಾರಕಾಸ್ತ್ರದಿಂದ ಅಪ್ರಾಪ್ತೆಯ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ವೇಳೆ ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಜವಾರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಸ್ಥಳೀಯರು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಗೆ ಹಲವು ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ನಂತರ ಆರೋಪಿ ಬಂಟ್ವಾಳ ಗ್ರಾಮಾಂತರ ಪೊಲೀಸರ ಮುಂದೆ ಶರಣಾಗಿದ್ದಾನೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಸಂಬಂಧಿ ಮೊಹಮ್ಮದ್ ಇಕ್ಬಾಲ್ ಪ್ರಕಾರ, ಜವಾರ್ ಕೆಲವು ಸಮಯದಿಂದ ಹುಡುಗಿಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಎರಡು ಅಥವಾ ಮೂರು ಬಾರಿ ಮದುವೆ ಪ್ರಸ್ತಾಪ ಮಾಡಿದ್ದರು ಬಾಲಕಿ ಒಪ್ಪದಿದ್ದಾಗ ಆತ ನೇರವಾಗಿ ಆಕೆಯ ಕುಟುಂಬವನ್ನು ಸಂಪರ್ಕಿಸಿದ್ದನು. ಹುಡುಗಿ ಅಪ್ರಾಪ್ತಳಾಗಿದ್ದರಿಂದ ಕುಟುಂಬವು ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಅಲ್ಲದೆ ಮುಂದೆ ತಮ್ಮ ಮಗಳನ್ನು ಹಿಂಬಾಲಿಸಿದರೇ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಜವಾರ್ ಗೆ ಎಚ್ಚರಿಕೆ ನೀಡಿದ್ದರು.
ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಕೋಪಗೊಂಡಿದ್ದ ಜವಾರ್ ಅಪ್ರಾಪ್ತೆಯನ್ನು ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾನೆ ಎಂದು ಇಕ್ಬಾಲ್ ಆರೋಪಿಸಿದ್ದಾರೆ. ಆರೋಪಿ ಮೊದಲು ಆಕೆಯ ಕತ್ತು ಸೀಳಲು ಪ್ರಯತ್ನಿಸಿದನು. ನಂತರ ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ಚುಚ್ಚಿದ್ದಾನೆ. ಪರಿಣಾಮ ಏಳು ಆಳವಾದ ಗಾಯಗಳಾಗಿದೆ ಎಂದು ತಿಳಿಸಿದ್ದಾರೆ.