ಬೆಂಗಳೂರು: ತರಗತಿಯಿಂದ ಹೊರಹೋಗುವಂತೆ ಶಿಕ್ಷಕರಿಂದ ನಿಂದನೆ; 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ!

ಘಟನೆ ಮಂಗಳವಾರ ನಡೆದಿದ್ದು, ಆತ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತನ್ನ ಸಹೋದರಿಗೆ ಈ ವಿಷಯ ತಿಳಿಸಿದ್ದನು. ವಿದ್ಯಾರ್ಥಿ ಇಲ್ಲಿನ ಮರಿಯಪ್ಪನಪಾಳ್ಯ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
Representative Image
ಪ್ರಾತಿನಿಧಿಕ ಚಿತ್ರAI Generated Illustration
Updated on

ಬೆಂಗಳೂರು: ಶಾಲೆಯಲ್ಲಿ ನಡೆದ ಸಣ್ಣ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಶಿಕ್ಷಕರೊಬ್ಬರು ಶಿಕ್ಷೆ ವಿಧಿಸಿದ ನಂತರ 7ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಈ ಘಟನೆ ಮಂಗಳವಾರ ನಡೆದಿದ್ದು, ಆತ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತನ್ನ ಸಹೋದರಿಗೆ ಈ ವಿಷಯ ತಿಳಿಸಿದ್ದನು. ವಿದ್ಯಾರ್ಥಿ ಇಲ್ಲಿನ ಮರಿಯಪ್ಪನಪಾಳ್ಯ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಅವರು ಹೇಳಿದರು.

ಆತ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕರು ಆ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ, ತರಗತಿಯಿಂದ ಹೊರಗೆ ಹೋಗುವಂತೆ ಆತನಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದುವರೆಗಿನ ವಿಚಾರಣೆಯಲ್ಲಿ ಇದೊಂದು ತರಗತಿಯಲ್ಲಿನ ಸಣ್ಣ ಸಮಸ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಶಾಲೆಯಲ್ಲಿ ಬಾಲಕನಿಗೆ ಕಿರುಕುಳ ನೀಡಲಾಗಿದೆಯೇ ಅಥವಾ ತೀವ್ರ ದೈಹಿಕ ಶಿಕ್ಷೆಗೆ ಗುರಿಪಡಿಸಲಾಗಿದೆಯೇ ಎಂಬ ಬಗ್ಗೆ ಹಾಗೂ ಅವನು ಈ ನಿರ್ಧಾರ ಕೈಗೊಳ್ಳಲು ಕಾರಣವಾದ ಸನ್ನಿವೇಶಗಳ ಕುರಿತು ಕೂಲಂಕಷ ತನಿಖೆ ನಡೆಯುತ್ತಿದೆ.

ಪೋಷಕರು ಇನ್ನೂ ಆಘಾತದಲ್ಲಿರುವುದರಿಂದ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಅವರಿಗೆ ಸಮಾಲೋಚನೆ (ಕೌನ್ಸಿಲಿಂಗ್) ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com