ಬಡವರ ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಕಳ್ಳಸಾಗಣೆ; ಮಹಾರಾಷ್ಟ್ರ ಮಾರ್ಗವಾಗಿ ದುಬೈ, ಸಿಂಗಾಪುರಕ್ಕೆ ಸಾಗಣೆ..!

ಅಕ್ಕಿ ಸಾಗಣೆಗಾಗಿ ಬಳಸಲಾಗುತ್ತಿದ್ದ ದಾಖಲೆಗಳು ನಕಲಿಯಾಗಿದ್ದು, ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ನಕಲಿ ಮುದ್ರೆಯನ್ನು ಬಳಸಿ ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು.
Representational image
ಸಾಂದರ್ಭಿಕ ಚಿತ್ರ
Updated on

ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯಡಿ ಬಡ ಕುಟುಂಬಗಳಿಗೆ ವಿತರಿಸಲಾಗುವ ಅಕ್ಕಿಯನ್ನೇ ಕಾಳಸಂತೆ ಜಾಲ ಮಹಾರಾಷ್ಟ್ರದ ಮೂಲಕ ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿರುವ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುವ ಈ ಅಕ್ಕಿಯನ್ನು ಪಾಲಿಶ್ ಮಾಡಿ ದುಬೈ, ಸಿಂಗಾಪುರ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಇತ್ತೀಚೆಗೆ ಗದಗ ನಗರದ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಪೊಲೀಸರು ಪರಿಶೀಲಿಸಿದ ವೇಳೆ ಸುಮಾರು 32 ಟನ್ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಲಾರಿ ಚಾಲಕ, ಈ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಸಾಗಿಸಿ ಅಲ್ಲಿಂದ ಮುಂದಕ್ಕೆ ಕಳುಹಿಸಬೇಕಿತ್ತು ಎಂದು ಹೇಳಿದ್ದಾನೆ.

ತನಿಖೆ ವೇಳೆ ಮತ್ತೊಂದು ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಅಕ್ಕಿ ಸಾಗಣೆಗಾಗಿ ಬಳಸಲಾಗುತ್ತಿದ್ದ ದಾಖಲೆಗಳು ನಕಲಿಯಾಗಿದ್ದು, ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ನಕಲಿ ಮುದ್ರೆಯನ್ನು ಬಳಸಿ ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕೊಪ್ಪಳ ಜಿಲ್ಲೆಯ ರೈತರು ಕೂಡ ಅನ್ನಭಾಗ್ಯ ಅಕ್ಕಿಯನ್ನು ದುಬೈ ಮತ್ತು ಸಿಂಗಾಪುರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

Representational image
ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ; ರಾಮ ನಮ್ಮ ಬಳಿ ಇಲ್ಲವೇ? ಸಿಎಂ ಡಿ.ಕೆ ಶಿವಕುಮಾರ್

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಯಾದಗಿರಿಯಲ್ಲಿ ರೂ.1.17 ಕೋಟಿ ಮೌಲ್ಯದ ಅನ್ನಭಾಗ್ಯ ಅಕ್ಕಿ ಚೀಲಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ತನಿಖೆಯಲ್ಲಿ ಆ ಅಕ್ಕಿಯನ್ನು ವಿದೇಶಗಳಿಗೆ ರಫ್ತು ಮಾಡಲು ಸಿದ್ಧತೆ ನಡೆಸಲಾಗಿತ್ತು ಎಂಬುದು ಬಹಿರಂಗವಾಗಿತ್ತು.

ಗದಗ ಪೊಲೀಸರು ಕಳೆದ ಕೆಲವು ವರ್ಷಗಳಿಂದ ಈ ಜಾಲದ ಮೇಲೆ ನಿರಂತರ ನಿಗಾ ವಹಿಸಿ ಹಲವು ಬಾರಿ ಟನ್‌ಗಟ್ಟಲೆ ಅಕ್ಕಿಯನ್ನು ವಶಪಡಿಸಿಕೊಂಡಿದ್ದರೂ, ಕಳ್ಳಸಾಗಣೆ ಮಾತ್ರ ನಿಂತಿಲ್ಲ.

ಅಕ್ಕಿ ಕಳ್ಳಸಾಗಣೆ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಏಜೆಂಟ್‌ಗಳನ್ನು ಒಳಗೊಂಡ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಗದಗ ಜಿಲ್ಲೆಯ ರೈತರ ಪ್ರಕಾರ, ಗದಗ, ಹುಬ್ಬಳ್ಳಿ ಹಾಗೂ ಕೊಪ್ಪಳ ಭಾಗದ ಕಾಳಸಂತೆ ದಂಧೆಕೋರರು ಮಹಾರಾಷ್ಟ್ರದ ಸಗಟು ವ್ಯಾಪಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಮಹಾರಾಷ್ಟ್ರದ ಏಜೆಂಟ್‌ಗಳು ವಿಶೇಷವಾಗಿ ಪಾಲಿಶ್ ಮಾಡಿದ ಅಕ್ಕಿಗೆ ಬೇಡಿಕೆ ಇಡುತ್ತಾರೆ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಮೊದಲು ಗಂಗಾವತಿ ಹಾಗೂ ಸುತ್ತಮುತ್ತಲಿನ ಅಕ್ಕಿ ಗಿರಣಿಗಳಿಗೆ ಸಾಗಿಸಿ ಪಾಲಿಶ್ ಮಾಡಲಾಗುತ್ತದೆ. ಬಳಿಕ ಮಹಾರಾಷ್ಟ್ರಕ್ಕೆ ಕಳುಹಿಸಿ ಅಲ್ಲಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಅನ್ನಭಾಗ್ಯ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಹಲವು ಪ್ರಕರಣಗಳನ್ನು ಪತ್ತೆಹಚ್ಚಿ ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ, ಕಳ್ಳಸಾಗಣೆ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com