ಬೆಂಗಳೂರು ಸಂಚಾರ ಸುಧಾರಣೆಗೆ ದೊಡ್ಡ ತೊಡಕು: ಕಾನೂನು ಸುಳಿಯಲ್ಲಿ ಸುರಂಗ ರಸ್ತೆ, ಮೆಖ್ರಿ ಕಾರಿಡಾರ್ ಯೋಜನೆಗಳು, BMLTA ನಿಯಮವೇ ಅಡ್ಡಿ..?

ಬಿಎಂಎಲ್‌ಟಿಎ ನಿಯಮಗಳ ಕರಡು 2026ರ ಜನವರಿ 3ರಂದು ಮೊದಲ ಬಾರಿಗೆ ಸಾರ್ವಜನಿಕರ ಮುಂದೆ ಬಂದಿತ್ತು. ಆಗಲೇ 'ಸೇವಿಂಗ್ಸ್ ಕ್ಲಾಸ್' ಬಗ್ಗೆ ಮೊದಲ ಬಾರಿಗೆ ಉಲ್ಲೇಖಿಸಲಾಗಿತ್ತು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಪ್ರಸ್ತಾವಿತ 2.5 ಕಿ.ಮೀ. ಉದ್ದದ ಕಿರು ಸುರಂಗ ರಸ್ತೆ ಯೋಜನೆ ಹಾಗೂ ಮೆಖ್ರಿ ವೃತ್ತದವರೆಗೆ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ಯೋಜನೆ ಕಾನೂನು ತೊಡಕಿನಲ್ಲಿ ಸಿಲುಕುವ ಸಾಧ್ಯತೆ ಎದುರಾಗಿದೆ.

ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಪರಿಶೀಲನೆ ನಡೆಸದೆ ಯೋಜನೆಗಳಿಗೆ ಅನುಮೋದನೆ ನೀಡಿರುವುದು ಮತ್ತು ಬಿಎಂಎಲ್‌ಟಿಎ ಕಾಯ್ದೆಯ ನಿಯಮ 24 (ಸೇವಿಂಗ್ಸ್ ಕ್ಲಾಸ್) ಅನ್ನು ಆಧಾರವಾಗಿಸಿಕೊಂಡಿರುವುದರಿಂದ ಯೋಜನೆಗಳ ಭವಿಷ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ರಾಜ್ಯ ಸರ್ಕಾರ 2025ರ ಡಿಸೆಂಬರ್ 8ರಂದು ಈ ಎರಡೂ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಈ ವೇಳೆಗೆ ಬಿಎಂಎಲ್‌ಟಿಎ ಕಾಯ್ದೆ ಜಾರಿಯಲ್ಲಿದ್ದ ಕಾರಣ, ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಪ್ರಸ್ತಾವಿತ ದೀರ್ಘ ಸುರಂಗ ರಸ್ತೆ ಯೋಜನೆಯಂತೆ ಈ ಯೋಜನೆಗಳೂ ಬಿಎಂಎಲ್‌ಟಿಎ ಪರಿಶೀಲನೆಗೆ ಒಳಪಡಬೇಕಿತ್ತು ಎಂಬ ವಾದ ಕೇಳಿಬಂದಿದೆ.

ಆದರೆ, ಈ ಯೋಜನೆಗಳನ್ನು ಬಿಎಂಎಲ್‌ಟಿಎ ಪರಿಶೀಲನೆಯಿಂದ ವಿನಾಯಿತಿ ನೀಡಲು ಬಳಸಲಾಗಿರುವ ನಿಯಮ 24 ಇದೀಗ ಕಾನೂನು ಸವಾಲು ಎದುರಿಸುತ್ತಿದೆ.

ಗಮನಾರ್ಹ ಸಂಗತಿಯೆಂದರೆ, ಬಿಎಂಎಲ್‌ಟಿಎ ನಿಯಮಗಳ ಕರಡು 2026ರ ಜನವರಿ 3ರಂದು ಮೊದಲ ಬಾರಿಗೆ ಸಾರ್ವಜನಿಕರ ಮುಂದೆ ಬಂದಿತ್ತು. ಆಗಲೇ 'ಸೇವಿಂಗ್ಸ್ ಕ್ಲಾಸ್' ಬಗ್ಗೆ ಮೊದಲ ಬಾರಿಗೆ ಉಲ್ಲೇಖಿಸಲಾಗಿತ್ತು. ನಂತರ ಸಾರ್ವಜನಿಕರ ಆಕ್ಷೇಪಣೆ ಮತ್ತು ಟೀಕೆಗಳ ನಡುವೆಯೂ ಅಂತಿಮ ನಿಯಮಗಳನ್ನು 2026ರ ಜುಲೈ 2ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ನಿಯಮದ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿಯೂ ಅರ್ಜಿ ಸಲ್ಲಿಸಲಾಗಿದೆ.

File photo
ಬೆಂಗಳೂರಿನ ತ್ರೀ ಲೇನ್ ಸುರಂಗ ರಸ್ತೆ ಕಾಮಗಾರಿ: ಗುದ್ದಲಿ ಪೂಜೆ ನೆರವೇರಿಸಿದ CM ಡಿ ಕೆ ಶಿವಕುಮಾರ್, ಇದರ ವೈಶಿಷ್ಟ್ಯತೆಯೇನು?-Video

2023ರ ಮಾರ್ಚ್ 27ರಿಂದ ಬಿಎಂಎಲ್‌ಟಿಎ ಕಾಯ್ದೆ ಜಾರಿಗೆ ಬಂದಿದ್ದು, ಅದರ ನಂತರ ಪ್ರಸ್ತಾಪವಾಗುವ ಪ್ರಮುಖ ನಗರ ಸಾರಿಗೆ ಯೋಜನೆಗಳು ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಬಿಎಂಎಲ್‌ಟಿಎ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್), ಹೆಬ್ಬಾಳ–ಸಿಲ್ಕ್‌ಬೋರ್ಡ್ ಸುರಂಗ ರಸ್ತೆ ಯೋಜನೆ ಕುರಿತು ಈ ಹಿಂದೆ ಹಲವು ಆಕ್ಷೇಪಣೆಗಳನ್ನು ದಾಖಲಿಸಿತ್ತು.

ಆದರೆ, ನಂತರ ಡಲ್ಟ್ ಬಿಬಿಎಂಪಿಗೆ ಪತ್ರ ಬರೆದು, ಬಿಎಂಎಲ್‌ಟಿಎ ಇನ್ನೂ ರಚನೆಯಾಗಿರದ ಕಾರಣ ತಮ್ಮ ಅಭಿಪ್ರಾಯವನ್ನು ಬಿಎಂಎಲ್‌ಟಿಎ ಅಧಿಕೃತ ಅಭಿಪ್ರಾಯ ಎಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಪ್ರಜಾ ವೇದಿಕೆ ಸಂಸ್ಥಾಪಕ ಸದಸ್ಯ ಮುಕುಂದ ಎನ್.ಎಸ್., ನಿಯಮ 24 ಅನ್ನು "ಸ್ವತಃ ತನ್ನ ಉದ್ದೇಶವನ್ನೇ ಹಾಳುಮಾಡುವ ನಿಯಮ" ಎಂದು ಟೀಕಿಸಿದ್ದಾರೆ.

"ನಗರ ಸಾರಿಗೆ ಯೋಜನೆಗಳನ್ನು ಪರಿಶೀಲಿಸುವುದಕ್ಕಾಗಿಯೇ ಬಿಎಂಎಲ್‌ಟಿಎ ಸ್ಥಾಪಿಸಲಾಗಿದೆ. ಅಂತಹ ಪ್ರಾಧಿಕಾರವನ್ನು ಬದಿಗಿಟ್ಟು ಯೋಜನೆಗಳಿಗೆ ವಿನಾಯಿತಿ ನೀಡಿದರೆ, ಕಾಯ್ದೆಯ ಮೂಲ ಉದ್ದೇಶವೇ ಹಾಳಾಗುತ್ತದೆ. ಹೀಗಾಗಿ ಈ ನಿಯಮವನ್ನು ನ್ಯಾಯಾಲಯ ರದ್ದುಗೊಳಿಸುವ ಸಾಧ್ಯತೆ ಇದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಯೋಜನೆಗಳಿಗೆ ನಿಯಮ 24ರ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಒಪ್ಪಿಕೊಂಡಿದೆ.

ಡಲ್ಟ್‌ನ ನಗರ ಯೋಜನೆ ಉಪನಿರ್ದೇಶಕ ಲಕ್ಷ್ಮೀಪತಿ ಅವರು ಮಾತನಾಡಿ, ಕಾಯ್ದೆ ಜಾರಿಯಾದ ಬಳಿಕ ಬಿಎಂಎಲ್‌ಟಿಎ ರಚನೆ ವಿಳಂಬವಾಗಿತ್ತು. ಪ್ರಾಧಿಕಾರ ರಚನೆಗಾಗಿ ಕಾಯುವುದರಿಂದ ಯೋಜನೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಸರ್ಕಾರ ವಿನಾಯಿತಿ ನಿಯಮವನ್ನು ತಂದಿತು. ಅದರ ಆಧಾರದಲ್ಲಿಯೇ ಡಿಸೆಂಬರ್ 2025ರಲ್ಲಿ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿತು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆ, ಕಾನೂನು ಸವಾಲುಗಳ ಪರಿಣಾಮವಾಗಿ ಬೆಂಗಳೂರು ನಗರದ ಮಹತ್ವಾಕಾಂಕ್ಷೆಯ ಕಿರು ಸುರಂಗ ರಸ್ತೆ ಹಾಗೂ ಮೆಖ್ರಿ ಮೇಲ್ಸೇತುವೆ ಯೋಜನೆಗಳು ಮುಂದುವರಿಯುತ್ತವೆಯೇ ಅಥವಾ ನ್ಯಾಯಾಂಗದ ಪರಿಶೀಲನೆಯಿಂದ ಮತ್ತಷ್ಟು ವಿಳಂಬವಾಗುತ್ತವೆಯೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com