

ಬೆಂಗಳೂರು: ಆನ್ಲೈನ್ ಆಹಾರ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ (Swiggy) ಮತ್ತು ಜೊಮ್ಯಾಟೋ (Zomato)ಗಳಿಗೆ ಬೆಂಗಳೂರಿನ ಹೊಟೆಲ್ ಉದ್ಯಮಗಳು ಮರ್ಮಾಘಾತ ನೀಡಿದ್ದು ಆಗಸ್ಟ್ 15ರಿಂದ ಈ ಎರಡೂ ಆ್ಯಪ್ ಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿವೆ.
ಹೌದು.. ಆ್ಯಪ್ ಆಧಾರಿತ ಆನ್ಲೈನ್ ಆಹಾರ ವಿತರಣಾ ಸಂಸ್ಥೆಗಳಿಂದ ತಮಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ಆರೋಪಿಸಿರುವ ಬೆಂಗಳೂರಿನ ಹೊಟೆಲ್ ಉದ್ಯಮಿಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಆಗಸ್ಟ್ 15ರಿಂದ ಸ್ವಿಗ್ಗಿ ಸೇವೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಗತ್ಯವಿದ್ದರೆ ನಂತರ ಝೊಮ್ಯಾಟೊ (Zomato) ವೇದಿಕೆಯಿಂದಲೂ ಹೊರಬರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ರೆಸ್ಟೋರೆಂಟ್ ಮಾಲೀಕರ ಆರೋಪದ ಪ್ರಕಾರ, ಸ್ವಿಗ್ಗಿ ವಿಧಿಸುತ್ತಿರುವ ಹೆಚ್ಚಿನ ಕಮಿಷನ್, ಭಾರೀ ರಿಯಾಯಿತಿಗಳು ಮತ್ತು ವಿವಿಧ ಹೆಸರಿನಲ್ಲಿ ಮಾಡುತ್ತಿರುವ ಹಣ ಕಡಿತಗಳು ಅವರ ಲಾಭಕ್ಕೆ ದೊಡ್ಡ ಹೊಡೆತ ನೀಡುತ್ತಿವೆ ಎಂದು ಹೇಳಲಾಗಿದೆ.
ಹೊಟೆಲ್-ರೆಸ್ಟೋರೆಂಟ್ ಮಾಲೀಕರ ಬೇಡಿಕೆಗಳೇನು?
ಸ್ವಿಗ್ಗಿಯೊಂದಿಗೆ ನ್ಯಾಯಸಮ್ಮತ ಮತ್ತು ಪಾರದರ್ಶಕ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿರುವ ಹೋಟೆಲ್ ಮಾಲೀಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಪೈಕಿ
ರೆಸ್ಟೋರೆಂಟ್ಗಳ ಅನುಮತಿ ಇಲ್ಲದೆ ಗ್ರಾಹಕರಿಗೆ ರಿಯಾಯಿತಿ ನೀಡಬಾರದು.
ಜಾಹೀರಾತು ಶುಲ್ಕ ಹಾಗೂ ಪಾವತಿ ಗೇಟ್ವೇ ಶುಲ್ಕದಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು.
ಗ್ರಾಹಕರ ದೂರು ಬಂದ ತಕ್ಷಣ ಹಣವನ್ನು ಸ್ವಯಂಚಾಲಿತವಾಗಿ ಕಡಿತ ಮಾಡಬಾರದು.
ಆಹಾರ ತಯಾರಾದ ಬಳಿಕ ಆರ್ಡರ್ ರದ್ದಾದರೆ ಅದರ ನಷ್ಟವನ್ನು ರೆಸ್ಟೋರೆಂಟ್ಗಳ ಮೇಲೆ ಹೊರಿಸಬಾರದು.
ಎಲ್ಲ ಹಣಕಡಿತಗಳ ವಿವರ ಇರುವ ಸಮಗ್ರ ಸೆಟಲ್ಮೆಂಟ್ ವರದಿ ನೀಡಬೇಕು.
ಏಕಪಕ್ಷೀಯ ಒಪ್ಪಂದ ಷರತ್ತುಗಳನ್ನು ರದ್ದುಪಡಿಸಬೇಕು.
ಪ್ರತಿ ರೆಸ್ಟೋರೆಂಟ್ಗೆ ಒಬ್ಬ ವಿಶೇಷ Relationship Manager ನೇಮಿಸಬೇಕು ಎಂದು ಆಗ್ರಹಿಸಿವೆ.
ಆಗಸ್ಟ್ 15ರೊಳಗೆ ಮಾತುಕತೆಗೆ ಆಗ್ರಹ
ಸ್ವಿಗ್ಗಿ ಆಡಳಿತ ಮಂಡಳಿ ರೆಸ್ಟೋರೆಂಟ್ ಪ್ರತಿನಿಧಿಗಳೊಂದಿಗೆ ತಕ್ಷಣ ಮಾತುಕತೆ ನಡೆಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಆಗಸ್ಟ್ 15ರೊಳಗೆ ತೃಪ್ತಿಕರ ಪರಿಹಾರ ಸಿಗದಿದ್ದರೆ, ನಗರದಾದ್ಯಂತ ಸ್ವಿಗ್ಗಿ ಸೇವೆಯನ್ನು ಸ್ಥಗಿತಗೊಳಿಸಿ ವೇದಿಕೆಯಿಂದ ಹೊರಬರುವುದಾಗಿ ಎಚ್ಚರಿಕೆ ನೀಡಿದೆ.
"1 ಲಕ್ಷ ವ್ಯವಹಾರ ಮಾಡಿದರೂ ಕೈಗೆ ಸಿಗೋದು 40 ಸಾವಿರ ಮಾತ್ರ"
ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಸಿ. ರಾವ್ ಈ ಬಗ್ಗೆ ಮಾತನಾಡಿದ್ದು, 'ಸ್ವಿಗ್ಗಿ ವೈಜ್ಞಾನಿಕ ಆಧಾರವಿಲ್ಲದೆ ವಿವಿಧ ರೀತಿಯ ಹಣ ಕಡಿತ ಮಾಡುತ್ತಿರುವುದರಿಂದ ಹೋಟೆಲ್ ಮಾಲೀಕರಿಗೆ ಭಾರೀ ನಷ್ಟವಾಗುತ್ತಿದೆ' ಎಂದು ಆರೋಪಿಸಿದರು.
"ಒಂದು ರೆಸ್ಟೋರೆಂಟ್ 1 ಲಕ್ಷ ರೂ ಮೌಲ್ಯದ ವ್ಯವಹಾರ ಮಾಡಿದರೂ, ಕಮಿಷನ್, ರಿಯಾಯಿತಿ ಮತ್ತು ಇತರ ಕಡಿತಗಳ ಬಳಿಕ ಅದರ ಕೈಗೆ ಸಿಗುವುದು ಸುಮಾರು 40 ಸಾವಿರ ರೂ ಮಾತ್ರ. ಈ ವ್ಯವಸ್ಥೆಯಿಂದ ಹೋಟೆಲ್ ಮಾಲೀಕರು ಮಾತ್ರವಲ್ಲ, ಗ್ರಾಹಕರೂ ತೊಂದರೆ ಅನುಭವಿಸುತ್ತಿದ್ದಾರೆ" ಎಂದು ಹೇಳಿದರು.
3 ಸಂಘಟನೆಗಳ ಜಂಟಿ ಹೋರಾಟ
ಬೆಂಗಳೂರು ಹೋಟೆಲ್ ಅಸೋಸಿಯೇಷನ್, ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಂಡ್ ಬಾರ್ ಅಸೋಸಿಯೇಷನ್ ಈ ವಿಚಾರದಲ್ಲಿ ಒಗ್ಗೂಡಿ ಹೋರಾಟ ನಡೆಸುತ್ತಿವೆ ಎಂದು ರಾವ್ ತಿಳಿಸಿದ್ದಾರೆ.
"ಸ್ವಿಗ್ಗಿ ಅನಗತ್ಯ ಮತ್ತು ಅವೈಜ್ಞಾನಿಕ ಹಣಕಡಿತಗಳನ್ನು ನಿಲ್ಲಿಸಿದರೆ ನಾವು ಪಾಲುದಾರಿಕೆಯನ್ನು ಮುಂದುವರಿಸಲು ಸಿದ್ಧರಿದ್ದೇವೆ. ಇಲ್ಲವಾದರೆ ಆಗಸ್ಟ್ 15ರ ಬಳಿಕ ಸ್ವಿಗ್ಗಿಯಷ್ಟೇ ಅಲ್ಲ, ಝೊಮ್ಯಾಟೊ ವೇದಿಕೆಯಿಂದಲೂ ಹೊರಬರಲಿದ್ದೇವೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.