

ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ನಿರಂತರವಾಗಿ ಹೇಳಿಕೊಂಡು ಬರುತ್ತಿದೆ. ಆದರೆ ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಸಿಗುತ್ತಿದ್ದ ಅನುದಾನಕ್ಕಿಂತ ಕೇವಲ ಒಂದು ವರ್ಷದಲ್ಲೇ ಕರ್ನಾಟಕಕ್ಕೆ ಶೇ.76ಕ್ಕೂ ಹೆಚ್ಚು ಅನುದಾನ ಕರ್ನಾಟಕಕ್ಕೆ ದೊರೆಯುತ್ತಿದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಬಿಜೆಪಿ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಹಣಕಾಸು ಆಯೋಗದ ಅಂಕಿಅಂಶಗಳನ್ನೇ ಇಂದು ನಿಮ್ಮ ಮುಂದಿಡುತ್ತಿದ್ದೇನೆ, 2014ರಿಂದ 2026ರ ನಡುವೆ 4 ಲಕ್ಷ ಕೋಟಿ ರೂಪಾಯಿ ತೆರಿಗೆ ಕರ್ನಾಟಕಕ್ಕೆ ನೀಡಲಾಗಿದೆ. ಅದು 2014ಕ್ಕಿಂತ ಹಿಂದೆ ಯುಪಿಎ ಅವಧಿಯಲ್ಲಿ ನೀಡಿದ್ದಕ್ಕಿಂತ 5 ಪಟ್ಟು ಹೆಚ್ಚಾಗಿದೆ ಎಂದರು. ಕರ್ನಾಟಕಕ್ಕೆ ಸಿಕ್ಕಿದ್ದು 82 ಸಾವಿರ ವರ್ಸಸ್ 4 ಲಕ್ಷ ಕೋಟಿ ರೂಪಾಯಿ, ಅನುದಾನ ಮತ್ತು ಸಹಾಯ 2.71 ಲಕ್ಷ ಕೋಟಿ 2014ರಿಂದ 2026ರ ಮಧ್ಯೆ ಆದರೆ ಯುಪಿಎಯ 10 ವರ್ಷದ ಅವಧಿಯಲ್ಲಿ 60 ಸಾವಿರ ಕೋಟಿ ರೂಪಾಯಿ ಎಂದರು.
ಪ್ರಧಾನಿ ಮೋದಿಯವರು, ರಾಜ್ಯಗಳು ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಹೊಂದುವುದಿಲ್ಲ ಎಂಬ ಪರಿಕಲ್ಪನೆ ಹೊಂದಿರುವವರು, ಹೀಗಾಗಿ ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡುತ್ತಿದ್ದೇವೆ. 18 ಸಾವಿರ ಕೋಟಿಗಿಂತಲೂ ಅಧಿಕ ಹಣವನ್ನು ಹಣಕಾಸು ಆಯೋಗದ ಶಿಫಾರಸು ಇಲ್ಲದಿದ್ದರೂ ರಾಜ್ಯಗಳಿಗೆ ನೀಡಿದ್ದೇವೆ, ಅದು ಕರ್ನಾಟಕಕ್ಕೂ ಸಿಕ್ಕಿದೆ ಎಂದರು.
ಪ್ರಸ್ತುತ ಹಣಕಾಸು ವರ್ಷದಲ್ಲಿ 63 ಸಾವಿರ ಕೋಟಿ ರೂಪಾಯಿ ಆದಾಯ ಹಂಚಿಕೆ ಕರ್ನಾಟಕಕ್ಕೆ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ಅಂಕಿಅಂಶ ನೀಡಿದರು. 10 ವರ್ಷಗಳಲ್ಲಿ ಯುಪಿಎ ಸರ್ಕಾರ ನೀಡಿದ್ದನ್ನು ನಾವು ಈಗ ಶೇಕಡಾ 76ರಷ್ಟು ಹೆಚ್ಚು ನಾವು ಕರ್ನಾಟಕಕ್ಕೆ ನೀಡುತ್ತಿದ್ದೇವೆ ಎಂದರು.
ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕರು ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಲು ಜನರು ನೀಡಿರುವ ಕೊಡುಗೆಯನ್ನು ಕಡೆಗಣಿಸುತ್ತಿದ್ದು, ಅನುಮಾನಗಳನ್ನು ಸೃಷ್ಟಿಸುವ ಮೂಲಕ ನಾಗರಿಕರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
Advertisement