

ಬೆಂಗಳೂರು: ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ ನಿಧನದ ಬೆನ್ವಲ್ಲೇ ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ ಎದುರಾಗಿದ್ದು, ಖ್ಯಾತ ನಿರ್ದೇಶಕ ಪವನ್ ಒಡೆಯರ್ ಗೆ ಮಾತೃವಿಯೋಗವಾಗಿದೆ.
ಹೌದು.. ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ ಜಯಮ್ಮ ನಿನ್ನೆಯಷ್ಟೇ ನಿಧನರಾಗಿದ್ದರು. ಆ ಸುದ್ದಿ ಮಾಸುವ ಬೆನ್ನಲ್ಲೇ ನಿರ್ದೇಶಕ ಪವನ್ ಅವರ ತಾಯಿಯೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪವನ್ ಅವರ ಪತ್ನಿ ಅಪೇಕ್ಷಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಪೇಕ್ಷಾ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ನನ್ನ ಪ್ರೀತಿಯ ಅತ್ತೆ ಗೀತಾ ಒಡೆಯರ್ ಅವರು ನಿಧನರಾಗಿದ್ದಾರೆ. ಅವರು ತಮ್ಮ ಗಟ್ಟಿತನ, ಪ್ರೀತಿಯಿಂದ ಅನೇಕರಿಗೆ ಹತ್ತಿರವಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಬಿಟ್ಟುಹೋದ ಅಮೂಲ್ಯ ನೆನಪುಗಳು ನಮ್ಮೊಂದಿಗಿವೆ. ಅಗಲಿದ ಆತ್ಮಕ್ಕೆ ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದಗಳನ್ನು ನಾವು ಕೋರುತ್ತೇವೆ. ಅವರ ಅಂತ್ಯಕ್ರಿಯೆ ಕುಣಿಗಲ್ನಲ್ಲಿ ನಡೆಯಲಿದೆ’ ಎಂದು ಬರೆದುಕೊಂಡಿದ್ದಾರೆ.
ದೀರ್ಘಕಾಲದ ಅನಾರೋಗ್ಯ
ದೀರ್ಘಕಾಲದ ಅನಾರೋಗ್ಯದಿಂದ ಗೀತಾ ಒಡೆಯರ್ ಬಳಲುತ್ತಿದ್ದರು. ಇಂದು (ಜೂನ್ 17) ಬೆಂಗಳೂರಿನಲ್ಲಿ ಗೀತಾ ಒಡೆಯರ್ ಕೊನೆಯುಸಿರೆಳೆದಿದ್ದಾರೆ. ಗೀತಾ ಒಡೆಯರ್ ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೂಲಗಳ ಪ್ರಕಾರ, ಗೀತಾ ಒಡೆಯರ್ ಮಲ್ಟಿಪಲ್ ಮೈಲೋಮಾ (Multiple Myeloma) ಎಂಬ ಒಂದು ರೀತಿಯ ರಕ್ತದ ಕ್ಯಾನ್ಸರ್ ಹಾಗೂ ಜಿಬಿ ಸಿಂಡ್ರೋಮ್ (Guillain-Barré Syndrome) ಎಂಬ ಅಪರೂಪದ ನರ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಕಳೆದ ಎರಡು ತಿಂಗಳುಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಪವನ್ ಒಡೆಯರ್ ಅವರು ಬೆಂಗಳೂರಿನಲ್ಲಿಯೇ ತಾಯಿಯನ್ನು ಇರಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ವೈದ್ಯಕೀಯ ಪ್ರಯತ್ನಗಳು ಫಲಿಸದೇ ಗೀತಾ ಒಡೆಯರ್ ವಿಧಿವಶರಾಗಿದ್ದಾರೆ.
ಕುಣಿಗಲ್ನಲ್ಲಿ ಅಂತ್ಯಕ್ರಿಯೆ
ಗೀತಾ ಒಡೆಯರ್ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ತುಮಕೂರು ಜಿಲ್ಲೆಯ ಕುಣಿಗಲ್ಗೆ ಕೊಂಡೊಯ್ಯಲಾಗಿದೆ. ಇಂದು (ಜೂನ್ 17) ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಪವನ್ ಭಾವುಕ ಪೋಸ್ಟ್
ಇನ್ನು ತಾಯಿ ನಿಧನಕ್ಕೆ ನಿರ್ದೇಶಕ ಎಕ್ಸ್ ಖಾತೆಯಲ್ಲಿ ಭಾವುಕ ಪೋಸ್ಟ್ ಮಾಡಿದ್ದು, 'ಮಾತು ಹರಿತವಾದರೂ ಕಾಳಜಿ ಬೆಟ್ಟದಷ್ಟು.... ಹೋಗಿ ಬಾ ಗೀತಮ್ಮ...' ಎಂದು ಪೋಸ್ಟ್ ಮಾಡಿದ್ದಾರೆ.
'ಅಮ್ಮ ಹೋಗಿ ಬಾ.. ಕಣ್ಣು ಹೇಡಿ, ಕೈ ರಥ ಅಂತ ಹೇಳುತ್ತಾ ಎಷ್ಟೊಂದು ಕೆಲಸ ಎಂದು ನೋಡೋ ಬದ್ಲು, ಕೆಲಸ ಮಾಡಿ ಮುಗಿಸು ಅಂದ ಗುರು ನೀನು. ಬಡತನದಲ್ಲೂ ಬದುಕು ಕಲಿಸಿಕೊಟ್ಟ ದೇವರು ನೀನು. ನಾನು ಚಿತ್ರರಂಗಕ್ಕೆ ಹೋಗ್ತೀನಿ ಅಂದಾಗ ಬೆನ್ನು ತಟ್ಟಿದ ಸ್ನೇಹಿತೆ. ನನ್ನ ಮೊದಲ ಕಿರು ಚಿತ್ರಕ್ಕೆ ಬಂಡವಾಳ ಹೂಡಿದ ಕರುಣಾಮಯಿ. ಮಾತು ಹರಿತವಾದರೂ ಕಾಳಜಿ ಬೆಟ್ಟದಷ್ಟು.... ಹೋಗಿ ಬಾ ಗೀತಮ್ಮ...' ಎಂದು ಬರೆದುಕೊಂಡಿದ್ದಾರೆ.
Advertisement