

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಕರ್ನಾಟಕ ಸರ್ಕಾರ ತಮಿಳುನಾಡಿನೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆಂದು ಶನಿವಾರ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಯಾವುದೇ ಆಕ್ಷೇಪಣೆಗಳನ್ನು ಮುಂದಿಟ್ಟರೂ ಚರ್ಚೆಗೆ ನಾವು ಸಿದ್ಧ ಎಂದು ಹೇಳಿದರು.
ಮೇಕೆದಾಟು ಯೋಜನೆ ಕಡಿಮೆ ಮಳೆಯಾಗುವ ವರ್ಷಗಳಲ್ಲಿ ನೀರನ್ನು ಸಂಗ್ರಹಿಸಲು ಉದ್ದೇಶಿತ ಸಮತೋಲನ ಜಲಾಶಯ ಯೋಜನೆಯಾಗಿದೆ. “ತಮಿಳುನಾಡು ಸರ್ಕಾರ ಚರ್ಚೆಗೆ ಬಂದರೆ ನಾವು ಕುಳಿತು ಮಾತುಕತೆ ನಡೆಸಲು ಸಿದ್ಧ. ಅವರು ಮುಂದೆ ಬಂದರೆ ಯಾವಾಗ ಬೇಕಾದರೂ ಚರ್ಚೆ ಮಾಡುತ್ತೇವೆಂದು ತಿಳಿಸಿದರು.
ಈ ಯೋಜನೆ ಕರ್ನಾಟಕಕ್ಕೂ ತಮಿಳುನಾಡಿಗೂ ಲಾಭಕರವಾಗಲಿದೆ. ನದಿಯಲ್ಲಿ ನೀರಿನ ಹರಿವನ್ನು ಸಮತೋಲನಗೊಳಿಸಿ, ಕೆಳಭಾಗದ ರಾಜ್ಯವಾದ ತಮಿಳುನಾಡಿಗೆ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ನೀರು ಬಿಡಲು ಇದು ಸಹಾಯಕವಾಗಲಿದೆ. ಈ ಯೋಜನೆಯ ಮುಖ್ಯ ಉದ್ದೇಶ ಬೆಂಗಳೂರು ನಗರದ ಹೆಚ್ಚುತ್ತಿರುವ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸುವುದೇ ಹೊರತು ನೀರಾವರಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಜಲಾಶಯದಿಂದ ಬೆಂಗಳೂರಿಗೆ ಸುಮಾರು 4.75 ಟಿಎಂಸಿ ಅಡಿ ಕುಡಿಯುವ ನೀರು ದೊರೆಯಲಿದ್ದು, ಈ ಯೋಜನೆಯಿಂದ ಸುಮಾರು 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ಹೇಳಿದರು.
ಕಾವೇರಿ ನೀರು ವಿವಾದ ನ್ಯಾಯಮಂಡಳಿಯ ಆದೇಶದಂತೆ ಕರ್ನಾಟಕ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಬಿಡಬೇಕಿರುವ ಬಾಧ್ಯತೆ ಹೊಂದಿದೆ. “ಕಡಿಮೆ ಮಳೆಯಾಗುವ ವರ್ಷಗಳಲ್ಲಿ ಜಲಾಶಯವಿದ್ದರೆ, ತಮಿಳುನಾಡಿಗೆ ಕೊಡಬೇಕಾದ ನೀರನ್ನು ನೀಡುವ ಜವಾಬ್ದಾರಿಯನ್ನು ಕರ್ನಾಟಕ ಸುಲಭವಾಗಿ ನಿಭಾಯಿಸಬಹುದು. ಜೊತೆಗೆ ರಾಜ್ಯದ ಕುಡಿಯುವ ನೀರಿನ ಭದ್ರತೆಯೂ ಖಚಿತವಾಗುತ್ತದೆ,” ಎಂದರು.
ನ್ಯಾಯಮಂಡಳಿಯ ನಿರ್ದೇಶನದ ಪ್ರಕಾರ ಕರ್ನಾಟಕವು ಜೂನ್ ತಿಂಗಳಲ್ಲಿ 19.19 ಟಿಎಂಸಿ ಅಡಿ, ಜುಲೈನಲ್ಲಿ 24 ಟಿಎಂಸಿ ಅಡಿ, ಆಗಸ್ಟ್ನಲ್ಲಿ 45.95 ಟಿಎಂಸಿ ಅಡಿ ಮತ್ತು ಸೆಪ್ಟೆಂಬರ್ನಲ್ಲಿ 36 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಗಿದೆ.
ಪ್ರಸ್ತುತ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಾದ ಕೆಆರ್ಎಸ್ ಮತ್ತು ಕಬಿನಿಯಲ್ಲಿ ಒಟ್ಟು 16 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಿದ ಬಳಿಕ ರಾಜ್ಯದ ಬಳಿ ಕೇವಲ 3 ಟಿಎಂಸಿ ಅಡಿ ನೀರು ಮಾತ್ರ ಉಳಿಯುತ್ತದೆ.
ಮೇಕೆದಾಟು ಯೋಜನೆ ಸಂಗ್ರಹಣೆ ಮತ್ತು ಕುಡಿಯುವ ನೀರಿನ ಉದ್ದೇಶ ಹೊಂದಿದ ಯೋಜನೆಯಾಗಿದ್ದು, ಇದು ಎರಡೂ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಕಾವೇರಿ ನೀರಿನ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
Advertisement