

ಬೆಂಗಳೂರು: ಭಾರತ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಅಲ್ಪದಿಂದ ಮಧ್ಯಮ ಮಟ್ಟದ ಮಳೆಯಾಗುವ ಸಾಧ್ಯತೆ ಇದೆ. ಇನ್ನು ರಾಜ್ಯದಾದ್ಯಂತ ಮಳೆ ಚಟುವಟಿಕೆ ಈ ವಾರದ ಅಂತ್ಯದ ವೇಳೆಗೆ ಹೆಚ್ಚಾಗುವ ಸಾಧ್ಯತೆ ಇದ್ದು, ದಕ್ಷಿಣ–ಪಶ್ಚಿಮ ಮಾನ್ಸೂನ್ ಮತ್ತೆ ಚುರುಕಾಗುತ್ತಿದೆ.
IMD ವಿಜ್ಞಾನಿ ಸಿ.ಎಸ್. ಪಾಟೀಲ್ ಅವರ ಪ್ರಕಾರ, ಪ್ರಸ್ತುತ ಮುಂಗಾರು ದುರ್ಬಲ ಹಂತದಲ್ಲಿದೆ. ಮುಂದಿನ ಮೂರು ದಿನಗಳಲ್ಲಿ ಅದು ಮತ್ತೆ ಸಕ್ರಿಯವಾಗುವ ನಿರೀಕ್ಷೆ ಇದೆ. ಇದರಿಂದ ರಾಜ್ಯದ ಹಲವೆಡೆ ಮಳೆಯ ಪ್ರಮಾಣ ಹೆಚ್ಚಲಿದೆ.
ಪ್ರಸ್ತುತ ಮೇಲ್ಮಟ್ಟದಲ್ಲಿ (upper air) ಒಂದು ವೃತ್ತಾಕಾರವಾಗಿ ಗಾಳಿ ಚಲನೆಯಾಗುತ್ತಿದ್ದು (cyclonic circulation) ಈ ಪ್ರದೇಶದ ಹವಾಮಾನ ಮಾದರಿಯನ್ನು ಪ್ರಭಾವಿಸುತ್ತಿದೆ. ಗಾಳಿಗಳು ಮೇಲ್ಮಟ್ಟದಲ್ಲಿ ತಿರುಗುವ ಈ ವ್ಯವಸ್ಥೆ ತೇವಾಂಶವನ್ನು ಮೇಲಕ್ಕೆ ಎತ್ತಿ ಮಳೆಯಾಗಲು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.
ಈ ವೃತ್ತಾಕಾರವಾಗಿ ಗಾಳಿ ಕಡಿಮೆ ಒತ್ತಡದ ಕೇಂದ್ರದ ಸುತ್ತ ತಿರುಗಿ ಸೇರಿಕೊಳ್ಳುವ ಹವಾಮಾನ ವ್ಯವಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲ ಪಡೆಯುವ ಸಾಧ್ಯತೆ ಇದೆ. ಅದರಿಂದ ರಾಜ್ಯದಾದ್ಯಂತ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಅಲ್ಪದಿಂದ ಮಧ್ಯಮ ಪ್ರಮಾಣದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದರೆ, ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಮಾನ್ಸೂನ್ ಬಲಪಡುತ್ತಿದ್ದಂತೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಈ ವಾರದ ಅಂತ್ಯದ ವೇಳೆಗೆ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯ ಸಾಧ್ಯತೆಯನ್ನೂ IMD ಗಮನಿಸುತ್ತಿದೆ.
ಇದರ ಪರಿಣಾಮವಾಗಿ ಹಲವಾರು ಜಿಲ್ಲೆಗಳಲ್ಲಿ ದಾಖಲಾಗಿರುವ ಸರಾಸರಿ ಮೇಲ್ಪಟ್ಟ ತಾಪಮಾನದಿಂದ ಸ್ವಲ್ಪ ಪರಿಹಾರ ಸಿಗುವ ನಿರೀಕ್ಷೆಯಿದೆ.
ಇತ್ತೀಚೆಗೆ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ 38–39 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದೆ. ಆದರೆ ಮಳೆ ಚಟುವಟಿಕೆ ಹೆಚ್ಚಿದಂತೆ ಮತ್ತು ಮೋಡದ ಆವರಣ ವಿಸ್ತರಿಸಿದಂತೆ ರಾಜ್ಯದಾದ್ಯಂತ ತಾಪಮಾನ ಕುಸಿಯುವ ಸಾಧ್ಯತೆ ಇದೆ.
ಪ್ರಸ್ತುತ ಮಾನ್ಸೂನ್ ದುರ್ಬಲವಾಗಿರುವುದು ಕಡಿಮೆ ಒತ್ತಡ (low-pressure gradient) ಕಾರಣವಾಗಿದ್ದು, ಇದರಿಂದ ಗಾಳಿಯ ವೇಗ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಈ ಒತ್ತಡ ವ್ಯತ್ಯಾಸ ಬಲಪಡಲಿದ್ದು, ಮಾನ್ಸೂನ್ ಮತ್ತೆ ಚುರುಕಾಗಲು ಸಹಾಯವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement