

ಬೆಂಗಳೂರು: ಬೆಂಗಳೂರಿನಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಶೇ.30ರಷ್ಟು ಮಂದಿ ಪಾದಚಾರಿಗಳೇ ಆಗಿದ್ದು, ಸುರಕ್ಷಿತ ಫುಟ್ಪಾತ್ ನಿರ್ಮಾಣದ ಮೂಲಕ ಇಂತಹ ಸಾವುಗಳನ್ನು ತಡೆಯಬಹುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜುಲೈ 1ರಿಂದ ನಗರದಲ್ಲಿ ‘ಸೇಫ್ ಫುಟ್ಪಾತ್ ಕ್ಯಾಂಪೇನ್’ ಆರಂಭಿಸಲಾಗುತ್ತಿದ್ದು, ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ಫುಟ್ಪಾತ್ಗಳ ದುರಸ್ತಿ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಫುಟ್ಪಾತ್ಗಳ ಸ್ಥಿತಿ ಮತ್ತು ಅತಿಕ್ರಮಣ ಕುರಿತು ನಡೆದ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸುಮಾರು 2,000 ಕಿಲೋಮೀಟರ್ ಉದ್ದದ ಫುಟ್ಪಾತ್ಗಳನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಫುಟ್ಪಾತ್ಗಳ ಮೇಲೆ ಅಳವಡಿಸಿರುವ ಹಾಳಾದ ಸ್ಲ್ಯಾಬ್ಗಳು, ಕರ್ಬ್ ಸ್ಟೋನ್ಗಳು, ಎತ್ತರ-ತಗ್ಗು ವ್ಯತ್ಯಾಸಗಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಶೀಘ್ರವಾಗಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಗರದ ಸುಮಾರು 1.5 ಕೋಟಿ ಜನರ ಆಸ್ತಿಯಾಗಿರುವ ಫುಟ್ಪಾತ್ಗಳನ್ನು ಅಂಗಡಿ ಮಾಲೀಕರು ಅತಿಕ್ರಮಿಸಬಾರದು. “ಸುರಕ್ಷಿತ ಫುಟ್ಪಾತ್ ನಿರ್ಮಾಣವು ನಗರದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಗೌರವಿಸಿ ಅತಿಕ್ರಮಣ ತೆರವು ಕಾರ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಪಾದಚಾರಿ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಅದನ್ನು ಜಾರಿಗೊಳಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ನಗರದ ಹಲವೆಡೆ ಅಂಗಡಿಗಳ ಸರಕುಗಳು, ಜಾಹೀರಾತು ಫಲಕಗಳು ಮತ್ತು ಇತರ ವಸ್ತುಗಳನ್ನು ಫುಟ್ಪಾತ್ ಮೇಲೆ ಇಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಜುಲೈ 1ರವರೆಗೆ ಸ್ವಯಂಪ್ರೇರಿತವಾಗಿ ಅತಿಕ್ರಮಣ ತೆರವುಗೊಳಿಸಲು ಅವಕಾಶ ನೀಡಲಾಗಿದೆ.
“ಜುಲೈ 1ರ ನಂತರವೂ ಅತಿಕ್ರಮಣ ಮುಂದುವರಿದರೆ, ಪಾಲಿಕೆ ಸಿಬ್ಬಂದಿಯೇ ತೆರವುಗೊಳಿಸಿ ನಿಯಮಾನುಸಾರ ಭಾರೀ ದಂಡ ವಿಧಿಸಲಿದ್ದಾರೆ” ಎಂದು ಎಚ್ಚರಿಸಿದರು.
ಫುಟ್ಪಾತ್ಗಳ ಮೇಲೆ ವಾಹನ ನಿಲುಗಡೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಫುಟ್ಪಾತ್ಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ಅವುಗಳನ್ನು ಟೋಯಿಂಗ್ ಮಾಡಲಾಗುತ್ತದೆ.
ಇದಲ್ಲದೆ, ಜುಲೈ 1ರಿಂದ ನಗರದ ರಸ್ತೆ ಬದಿಗಳಲ್ಲಿ ದೀರ್ಘಕಾಲ ನಿಲ್ಲಿಸಲಾಗಿರುವ ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸುವ ಕಾರ್ಯ ಆರಂಭವಾಗಲಿದ್ಜು, ಸ್ಟಿಕ್ಕರ್ ಅಂಟಿಸಿದ ಬಳಿಕ 7 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರವೂ ವಾಹನಗಳನ್ನು ತೆರವುಗೊಳಿಸದಿದ್ದರೆ ಜುಲೈ 10ರಿಂದ ಅವುಗಳನ್ನು ಟೋಯಿಂದ್ ಮಾಡಿ ಹರಾಜು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮಹೇಶ್ವರ್ ರಾವ್, ಸಂಚಾರ ಪೊಲೀಸ್ ಇಲಾಖೆಯ ಜಂಟಿ ಆಯುಕ್ತ ಕಾರ್ತಿಕ್ ರೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.