

ರಾಮನಗರ: ಬಿಡದಿ ಹೋಬಳಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಭೂಮಿ ಕೊಡಲು ಒಪ್ಪಿರುವ ಯೋಜನಾ ಪ್ರದೇಶದ ವಡೇರಹಳ್ಳಿ ಮತ್ತು ಕೆಂಪಯ್ಯನಪಾಳ್ಯದ 10 ಭೂಮಾಲೀಕರಿಗೆ ನಗರದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಕಚೇರಿಯಲ್ಲಿ 19.69 ಕೋಟಿ ಪರಿಹಾರದ ಚೆಕ್ ವಿತರಿಸಲಾಗಿದೆ.
ಯೋಜನೆಗೆ ಭೂಮಿ ಕೊಡಲು ಒಪ್ಪಿದವರಿಗೆ ಪರಿಹಾರ ವಿತರಣೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ಜೂನ್ 19ರಂದು ಚಾಲನೆ ನೀಡಿದ್ದರು. ಜೂನ್ 24ರವರೆಗೆ 17 ಭೂ ಮಾಲೀಕರಿಗೆ 13.01 ಕೋಟಿ ರು ಪರಿಹಾರ ವಿತರಿಸಲಾಗಿತ್ತು’ ಎಂದು ಚೆಕ್ ವಿತರಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು ಗಾಣಕಲ್ಲು ತಿಳಿಸಿದ್ದಾರೆ.
ವಡೇರಹಳ್ಳಿ 3 ಹಾಗೂ ಕೆಂಪಯ್ಯನಪಾಳ್ಯ 7 ಮಂದಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ. ರೈತರಿಗೆ ವಿತರಿಸಿರುವ ಪರಿಹಾರದಲ್ಲಿ ಭೂ ಪರಿಹಾರ, ಮರಮಾಲ್ಕಿ ಪರಿಹಾರ ಹಾಗೂ ಪ್ರತಿ ಭೂ ಮಾಲೀಕನಿಗೆ ಜೀವನಾಂಶಕ್ಕಾಗಿ 5 ಲಕ್ಷ ರು. ಇಡುಗಂಟು ಸೇರಿದೆ. ಈ ಪೈಕಿ ಕೆಂಪಯ್ಯನಪಾಳ್ಯದ ಶುಭ ಎಂಬುವರು ಗರಿಷ್ಠ 10.72 ಕೋಟಿ ಪರಿಹಾರ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಜಿಬಿಡಿಎ ನೀಡಿದ ಭೂಸ್ವಾಧೀನ ಪರಿಹಾರದ ಚೆಕ್ ಅನ್ನು ಸುಳ್ಳು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರೈತ ಹೋರಾಟಗಾರರೆಂದು ಹೇಳಿಕೊಳ್ಳುತ್ತಿರುವ ಕೆಲವರು ಹಾಗೂ ಜೆಡಿಎಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಾಕಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಮೊದಲ ದಿನ 7 ರೈತರಿಗೆ ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಲಾಯಿತು. ಅದರಲ್ಲಿ ದಿನಾಂಕ 19.06.2026 ಎಂದು ನಮೂದಾಗಿದೆ. ಆ ದಿನಾಂಕವನ್ನು 19.06.2024 ಎಂದು ತಿದ್ದಲಾಗಿದೆ. ಇಂತಹ ಕೀಳುಮಟ್ಟದ ಅಪಪ್ರಚಾರಕ್ಕೆ ಯಾರೂ ಇಳಿಯಬಾರದು ಎಂದರು.