

ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ದೇಶದಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಎಲ್'ಪಿಜಿ ಸಿಲಿಂಡರ್ಗಳ ಅಕ್ರಮ ಸಂಗ್ರಹ ಮಾಡುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದ ಅಡೆತಡೆಗಳ ಹೊರತಾಗಿಯೂ ದೇಶೀಯ LPG ಪೂರೈಕೆ ಸಮರ್ಪಕವಾಗಿ ಉಳಿದಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಪ್ರಮುಖ ತೈಲ ಕಂಪನಿಗಳೊಂದಿಗೆ ದಾಸ್ತಾನುಗಳನ್ನು ರಾಜ್ಯ ಸರ್ಕಾರ ಪರಿಶೀಲನೆ ನಡೆಸಿದ್ದು, ಗ್ರಾಹಕರು ಭಯಭೀತರಾಗದಂತೆ ಮನವಿ ಮಾಡಿದೆ.
ಸಾರ್ವಜನಿಕ ಸಂಸ್ಥೆಗಳಿಗೆ ನಿರಂತರ LPG ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತೈಲ ಕಂಪನಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಪರಿಸ್ಥಿತಿ ಮೇಲೆ ನಿಗಾವಹಿಸಲು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಸಾಗಾಟ ನಡೆಸಿದರೆ ಅತ್ಯಾವಶ್ಯಕ ವಸ್ತುಗಳ ಕಾಯ್ದೆ–1955 ಸೇರಿದಂತೆ ಸಂಬಂಧಿತ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಎಚ್ಚರಿಕೆ ನೀಡಿದೆ.
ಏತನ್ಮಧ್ಯೆ ಬೆಂಗಳೂರು ನಗರದಲ್ಲಿ ಕೈಗಾರಿಕೆಗಳು ಮತ್ತು ಹೋಟೆಲ್ಗಳಿಗೆ ಪೂರೈಸಲಾಗುತ್ತಿರುವ ಪೈಪ್ ನ್ಯಾಚುರಲ್ ಗ್ಯಾಸ್ (PNG) ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲ ಎಂದು GAIL Gas Limited ಮಾಹಿತಿ ನೀಡಿದೆ.
ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (BCIC) ಆಯೋಜಿಸಿದ್ದ “ನೈಸರ್ಗಿಕ ಅನಿಲ ಪೂರೈಕೆ ಮುನ್ನೋಟ ಮತ್ತು ಕೈಗಾರಿಕಾ ಸಿದ್ಧತೆ” ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ನಗರದಲ್ಲಿ PNG ಸರಬರಾಜು ಸ್ಥಿರವಾಗಿದ್ದು ಕೈಗಾರಿಕೆಗಳು, ಹೋಟೆಲ್ಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಯಾವುದೇ ವ್ಯತ್ಯಯದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
Advertisement