

ಗದಗ: ಈ ಬಾರಿ ಯುಗಾದಿ ಹಬ್ಬದ ಮುನ್ನ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಹೂ ಬೆಳೆ ಬೆಳೆದಿದ್ದ ಗದಗದರೈತರಿಗೆ ಅಕಾಲಿಕ ಮಳೆ ಭಾರೀ ಹೊಡೆತ ನೀಡಿದೆ.
ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆ ಹೂ ಬೆಳೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡಿದ್ದು, ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗಡಗ ಜಿಲ್ಲೆಯ ಲಕ್ಕುಂಡಿ, ಕನವಿ, ಹೊಸೂರು, ಡಂಬಲ್, ಕಡಕೋಳ ಸೇರಿದಂತೆ ಹಲವಾರು ಗ್ರಾಮಗಳು ಹೂ ಬೆಳೆಗಾಗಿ ಪ್ರಸಿದ್ಧವಾಗಿವೆ. ಇಲ್ಲಿ ಬೆಳೆಯುವ ಚೆಂಡು ಮಲ್ಲಿಗೆ,ಸೇವಂತಿಗೆ ಮತ್ತು ಮಲ್ಲಿಗೆ ಹೂಗಳು ಪ್ರತಿದಿನವೂ ಧಾರವಾಡ, ಬೆಳಗಾವಿ ಹಾಗೂ ರಾಜ್ಯದ ಇತರೆ ಮಾರುಕಟ್ಟೆಗಳಿಗೆ ಸಾಗಾಟವಾಗುತ್ತವೆ.
ವಿಶೇಷವಾಗಿ ಯುಗಾದಿ ಹಬ್ಬದ ಸಮಯದಲ್ಲಿ ಈ ಹೂಗಳಿಗೆ ಭಾರೀ ಬೇಡಿಕೆ ಇರುತ್ತದೆ. ಆದರೆ, ಅಕಾಲಿಕ ಮಳೆಯ ಪರಿಣಾಮವಾಗಿ ಹೂಗಳ ಗುಣಮಟ್ಟ ಕುಸಿದು, ಮಾರುಕಟ್ಟೆಗೇ ಕಳುಹಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
ಮಳೆಯ ಜೊತೆಗೆ ಬಂದ ಬಿರುಗಾಳಿಯಿಂದ ಹೂ ಗಿಡಗಳು ನೆಲಕ್ಕುರುಳಿವೆ. ನೀರು ನಿಂತಿರುವುದರಿಂದ ಗಿಡಗಳ ಬೇರುಗಳು ಕೊಳೆತು ಹೋಗಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ.
ಇನ್ನೂ ಹೂ ಬಿಡದ ಮೊಗ್ಗುಗಳೇ ಕುಸಿದು ಹೋಗಿರುವುದರಿಂದ ಮುಂದಿನ ದಿನಗಳಲ್ಲೂ ಉತ್ಪಾದನೆ ಕಡಿಮೆಯಾಗುವ ಭೀತಿ ಇದೆ. ಈಗಾಗಲೇ ಕಟಾವು ಮಾಡಿದ್ದ ಹೂಗಳು ಕೂಡ ಮಳೆ ನೀರಿಗೆ ತೋಯ್ದು ಹಾಳಾಗಿವೆ.
ಇದರಿಂದ ಈ ಹಂಗಾಮಿನಲ್ಲಿ ಉತ್ತಮ ಲಾಭದ ನಿರೀಕ್ಷೆಯಿಂದ ರೈತರು ಹೆಚ್ಚು ಹೂ ಬೆಳೆದಿದ್ದರು. ಬೀಜ, ರಸಗೊಬ್ಬರ, ಕೀಟನಾಶಕ, ಕಾರ್ಮಿಕ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಹೂಡಿಕೆ ಮಾಡಲಾಗಿತ್ತು. ಕೆಲವರು ಬ್ಯಾಂಕ್ಗಳಿಂದ ಹಾಗೂ ಖಾಸಗಿ ಸಾಲದಾರರಿಂದ ಸಾಲ ಪಡೆದು ಬೆಳೆ ಬೆಳೆದಿದ್ದರು. ಆದರೆ ಬೆಳೆ ಹಾನಿಯಿಂದ ಆದಾಯ ಸಂಪೂರ್ಣ ಕುಸಿದಿರುವುದರಿಂದ ಸಾಲ ತೀರಿಸುವುದೇ ದೊಡ್ಡ ಸವಾಲಾಗಿದೆ.
ಯುಗಾದಿ ಸಮಯದಲ್ಲಿ ಹೂಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಭರವಸೆ ಇತ್ತು. ಆದರೆ, ಈ ಮಳೆಯೇ ನಮ್ಮ ಎಲ್ಲಾ ನಿರೀಕ್ಷೆಗಳನ್ನು ಹಾಳು ಮಾಡಿದೆ. ಒಂದು ಹಂಗಾಮಿನ ಸಂಪೂರ್ಣ ಆದಾಯ ಕಳೆದುಕೊಂಡಿದ್ದೇವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೆಜಿಗೆ 300 ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆಯನ್ನು 150 ರೂ.ಗೆ ಮಾರಾಟ ಮಾಡಲಾಯಿತು. ಯುಗಾದಿಯ ಸಮಯದಲ್ಲಿ, ಮಲ್ಲಿಗೆ ಸಾಮಾನ್ಯವಾಗಿ ಕೆಜಿಗೆ 500-700 ರೂ.ಗಳ ಬೆಲೆ ಇರುತ್ತದೆ, ಆದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಅದು ನೆಲಕ್ಕೆ ಕುಸಿದಿದೆ. ಬೇರೆ ಯಾವುದೇ ದಿನದಲ್ಲಿ ಕೆಜಿಗೆ 350 ರೂ.ಗೆ ಮಾರಾಟವಾದ ಚೆಂಡು ಹೂವನ್ನು 100 ರೂ.ಗೆ ನೀಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ ಹೂವಿನ ಮಾರುಕಟ್ಟೆಯ ಅಂಗಡಿ ಮಾಲೀಕ ಬಾಷಾಸಾಬ್ ಮಲ್ಲಸಮುದ್ರ ಅವರು ಮಾತನಾಡಿ, ಯುಗಾದಿಯಂತಹ ಹಬ್ಬಗಳ ಸಮಯದಲ್ಲಿ ನಮಗೆ ಉತ್ತರ ಕರ್ನಾಟಕದಾದ್ಯಂತ ಅನೇಕ ಆರ್ಡರ್ಗಳು ಬರುತ್ತಿದ್ದವು. ಆದರೆ, ಈ ಬಾರಿ ಹೂವಿನ ಗುಣಮಟ್ಟ ಕುಸಿದು ಬೆಲೆಯೂ ಕುಸಿದಿದೆ. ಈ ಬಾರಿ ಹೂವು ಬೆಳೆಗಾರರು ಭಾರಿ ನಷ್ಟವನ್ನು ಅನುಭವಿಸಿದರು ಎಂದು ಹೇಳಿದ್ದಾರೆ.
ಕಡಕೋಲ್ನ ಆಕಾಶ್ ಭಜಂತ್ರಿ ಮಾತನಾಡಿ, ಯುಗಾದಿಗೆ ಒಂದು ದಿನ ಮೊದಲು ನಾವು ಚೆಂಡು ಹೂ ಮತ್ತು ಸೇವಂತಿಗೆ ಮಾರಾಟ ಮಾಡಲು ಯೋಜಿಸಿದ್ದೆವು, ಆದರೆ, ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗಿದ್ದು, ಅದು ಹೂವುಗಳ ಮೇಲೆ ಪರಿಣಾಮ ಬೀರಿತು. ಈ ಬಾರಿ ಕಪ್ಪತಗುಡ್ಡ ಪ್ರದೇಶದಾದ್ಯಂತ ಹೂ ಬೆಳೆಗಾರರು ನಷ್ಟ ಅನುಭವಿಸಿದ್ದಾರೆಂದು ಹೇಳಿದ್ದಾರೆ.
ಬೆಳೆ ವಿಮೆ ಇದ್ದರೂ ಪರಿಹಾರ ಸಿಗುವುದು ವಿಳಂಬವಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಇದೀಗ ರೈತರು ಸರ್ಕಾರದ ತುರ್ತು ನೆರವಿಗಾಗಿ ಎದುರು ನೋಡುತ್ತಿದ್ದಾರೆ.
ಬೆಳೆ ಹಾನಿಯನ್ನು ಪರಿಗಣಿಸಿ ಸರ್ಕಾರ ತಕ್ಷಣ ಪರಿಹಾರ ಘೋಷಣೆ ಮಾಡಬೇಕು, ಸಾಲ ಮನ್ನಾ ಅಥವಾ ಬಡ್ಡಿ ವಿನಾಯಿತಿ ನೀಡಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.
ಈ ನಡುವೆ ಸ್ಥಳೀಯ ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಂದಾಜು ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರವೇ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಹವಾಮಾನ ಬದಲಾವಣೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಅಕಾಲಿಕ ಮಳೆ, ತಾಪಮಾನ ಏರಿಳಿತ, ಬಿರುಗಾಳಿ ಇವುಗಳು ಕೃಷಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಹೊಸ ಕೃಷಿ ವಿಧಾನಗಳು, ರಕ್ಷಣೆ ಕ್ರಮಗಳು ಹಾಗೂ ತಂತ್ರಜ್ಞಾನಗಳ ಬಳಕೆ ಅಗತ್ಯವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಬೆಳೆ ನಷ್ಟ ನಿರ್ಣಯಿಸಲು ಸಮೀಕ್ಷೆಗೆ ಬಿಜೆಪಿ ಒತ್ತಾಯ
ಈ ನಡುವೆ ಬೆಳೆ ನಷ್ಟವನ್ನು ನಿರ್ಣಯಿಸಲು ಶೀಘ್ರ ಸಮೀಕ್ಷೆ ನಡೆಸುವಂತೆ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ ನಾಡಿನ ಅನ್ನದಾತಾರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದ್ದು, 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಾವಿರಾರು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಗದಗ ಜಿಲ್ಲೆಯಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಅವರ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಗ್ರಹಿಸಿದ್ದಾರೆ.
ಧಾರವಾಡ, ಹಾವೇರಿ, ಗದಗ, ಕಲಬುರಗಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಸುಮಾರು 10 ಜಿಲ್ಲೆಗಳಲ್ಲಿ ಜೋಳ, ಕಡಲೆ, ಗೋಧಿ ಹಾಗೂ ಮೆಕ್ಕೆಜೋಳದ ಬೆಳೆಗಳು ನೆಲಕಚ್ಚಿವೆ. ಇತ್ತ ಹಳೇ ಮೈಸೂರು ಭಾಗದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾವು, ದ್ರಾಕ್ಷಿ, ಹಲಸು ಹಾಗೂ ಕಲ್ಲಂಗಡಿ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದಾರೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಬೆಳೆ ಕಣ್ಣೆದುರೇ ನಾಶವಾಗುತ್ತಿರುವುದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಮಳೆ ಹಾನಿಗೊಳಗಾದ ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ಬೆಳೆ ನಷ್ಟದ ನಿಖರ ವರದಿಯನ್ನು ಪಡೆಯಬೇಕು. ಯಾವುದೇ ವಿಳಂಬ ಮಾಡದೆ ಸಂಕಷ್ಟದಲ್ಲಿರುವ ರೈತರಿಗೆ ಎಕರೆವಾರು ವೈಜ್ಞಾನಿಕ ಪರಿಹಾರವನ್ನು ವಿತರಿಸಬೇಕು. ಅಕಾಲಿಕ ಮಳೆಯಿಂದ ಉಂಟಾದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಗೆ ತಕ್ಷಣದ ವಿಶೇಷ ಪ್ಯಾಕೇಜ್ ಘೋಷಿಸಬೇಕು.
ಸಂಕಷ್ಟದಲ್ಲಿರುವ ಅನ್ನದಾತನ ಕೈ ಹಿಡಿಯುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕು. ಈ ಹಿಂದೆ ನೆರೆ, ಬರ ಸಂದರ್ಭದಲ್ಲಿ ಬೆಳೆ ಹಾನಿ ಸಮೀಕ್ಷೆ, ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಿದಂತೆ ಈ ಬಾರಿಯೂ ಮಾಡಿದರೆ, ರೈತರ ಹಿತ ಕಾಯುವಲ್ಲಿ ನಿರ್ಲಕ್ಷ್ಯ ವಹಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದ ಎಚ್ಚರಿಕೆ ನೀಡಿದ್ದಾರೆ.
Advertisement