

ಬೆಂಗಳೂರು: ಕರ್ನಾಟಕ ರಾಜಕೀಯ ವಲಯದಲ್ಲಿ ಐಪಿಎಲ್ ಟಿಕೆಟ್ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿರುವ ನಡುವೆಯೇ ಶಾಸಕರ ಆಗ್ರಹವನ್ನು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಸರ್ಕಾರದ ಒಂದು ಭಾಗ. ಅವರಿಗೂ ಟಿಕೆಟ್ ಕೇಳುವ ಹಕ್ಕಿದೆ ಎಂದು ಹೇಳಿದ್ದಾರೆ.
ನಾವು ಅವರಿಗೆ ಭರವಸೆ ನೀಡಿದ್ದೇವೆ. ಆಟವಾಡುವ ಅವಕಾಶವನ್ನೂ ಕೊಟ್ಟಿದ್ದೇವೆ. ಈ ವಿಷಯದಲ್ಲಿ ನನ್ನ ವೈಯಕ್ತಿಕ ಶಕ್ತಿಯಿಂದ ನೋಡುತ್ತೇನೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಮಾತನಾಡುತ್ತೇನೆ. ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ಯೋಜನೆ ಮಾಡುತ್ತೇವೆ. ಇಂದೇ ಮಾತನಾಡುತ್ತೇನೆ’ ಎಂದು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಹಲವು ಪಕ್ಷಗಳ ಶಾಸಕರು ಈ ವಿಷಯವನ್ನು ಪ್ರಸ್ತಾಪಿಸಿ, ತಮಗೆ ಸಮರ್ಪಕ ಗೌರವ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ್ದರು.
ಪ್ರತಿಯೊಬ್ಬ ಶಾಸಕರಿಗೂ ಕನಿಷ್ಠ ನಾಲ್ಕು ವಿಐಪಿ ಟಿಕೆಟ್ಗಳನ್ನು ನೀಡಬೇಕು ಹಾಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಯುಟಿ.ಖಾದರ್ ಅವರು ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಈ ವಿವಾದದ ನಡುವೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು, ತಮಗೆ ಕೇವಲ ಒಂದು ಟಿಕೆಟ್ ಮಾತ್ರ ನೀಡಲಾಗುತ್ತಿದೆ ಹಾಗೂ ಸರಿಯಾದ ಆಸನ ವ್ಯವಸ್ಥೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಶಾಸಕರಿಗೆ ಪ್ರತ್ಯೇಕ ಲೌಂಜ್ ವ್ಯವಸ್ಥೆಯನ್ನೂ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾರ್ಚ್ 28 ರಂದು ನಡೆಯಲಿರುವ ಐಪಿಎಲ್ 2026 ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುವ ಮುನ್ನ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.
ಇದರ ಬೆನ್ನಲ್ಲೇ ಶಾಸಕರ ನಡೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಟೀಕೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಹುದ್ದೆಯಲ್ಲಿರುವವರು ಉಚಿತ ಟಿಕೆಟ್ಗಾಗಿ ಬೇಡಿಕೆ ಇಡುವುದು ಸರಿಯಲ್ಲ, ಇದು “ವಿಐಪಿ ಮನೋಭಾವದ ಉದಾಹರಣೆ ಎಂದು ಹೇಳಿದ್ದಾರೆ. ಸಾರ್ವಜನಿಕ ಸೇವೆ ಹೊಣೆಗಾರಿಕೆಯಾಗಿದ್ದು, ಸೌಲಭ್ಯವಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
‘ಶಾಸಕರ ಹೇಳಿಕೆ ತಪ್ಪು ಆದರೆ ಈ ಬೇಡಿಕೆ ಅಶ್ಚರ್ಯ ಅನ್ನಿಸುತ್ತಿಲ್ಲ. ಇದು ಅವರ ಆದ್ಯತೆ ಏನು ಎಂಬುವುದನ್ನು ಬಹಿರಂಗಪಡಿಸುತ್ತದೆ. ರಾಜ್ಯದ ನೈಜ ಸಮಸ್ಯೆಗಳು ಗಮನಹರಿಸಬೇಕೆಂದು ಒತ್ತಾಯಿಸುತ್ತಿರುವ ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಈ ರೀತಿ ಪ್ರಸ್ತಾಪಿಸಿರುವುದು ಎಷ್ಟರ ಮಟ್ಟಿಗೆ ಸರಿ” ಎಂದು ಅವರು ಪ್ರಶ್ನಿಸಿದ್ದಾರೆ.
‘ಕೆಎಸ್ಸಿಎ ಅಥವಾ ಯಾವುದೇ ಕ್ರೀಡಾ ಸಂಸ್ಥೆಯು ಶಾಸಕರಿಗೆ ಉಚಿತ ಟಿಕೆಟ್ ಏಕೆ ನೀಡಬೇಕು? ಅವರು ಯಾಕೆ ಶಾಸಕರಿಗೆ ಋಣಿಯಾಗಬೇಕು? ಇದೊಂದು ರೀತಿಯಲ್ಲಿ ಫ್ಯೂಡಲ್ ಚಿಂತನೆಯಾಗಿದೆ. ಕ್ರಿಕೆಟ್ ನೋಡಲು ಉಚಿತ ಟಿಕೆಟ್, ಪ್ರತ್ಯೇಕ ಗ್ಯಾಲರಿ ಬೇಕು ಎಂದು ಬೇಡಿಕೆ ಇಡುತ್ತಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕರೊಂದಿಗೆ ಕುಳಿತುಕೊಳ್ಳಲು ನಿರಾಕರಿಸಿದ ಶಾಸಕರು ತಾವು ಪ್ರತಿನಿಧಿಸುವ ಜನರಿಗಿಂತ ನಾನು ಮೇಲಿದ್ದೇನೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ. ಜನಸಾಮಾನ್ಯರು ಟಿಕೆಟ್ ಖರೀದಿಸಬೇಕಾದರೆ, ಶಾಸಕರು ಕೂಡ ಟಿಕೆಟ್ ಖರೀದಿಸಬೇಕು. ಶಾಸಕರ ಬೇಡಿಕೆ ಹಾಗೂ ನಡೆ ತಪ್ಪು ಹಾಗೂ ಇದನ್ನು ನಾವು ವಿರೋಧಿಸಬೇಕು’ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಟೀಕೆಗೆ ತಿರುಗೇಟು ನೀಡಿರುವ ಡಿಕೆ. ಶಿವಕುಮಾರ್ ಅವರು, ತೇಜಸ್ವಿ ಸೂರ್ಯ ಅವರು ತಮ್ಮ ಪಕ್ಷದ ಸದಸ್ಯರಿಗೆ ಬುದ್ಧಿ ಹೇಳಲಿ, ನಮಗಲ್ಲ" ಎಂದು ಖಡಕ್ ತಿರುಗೇಟು ನೀಡಿದ್ದಾರೆ.
Advertisement