

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಅಡ್ಡ ಬಂದಿದ್ದೂ ಅಲ್ಲದೆ, ಕಾರು ಚಾಲಕನ ಮೇಲೆಯೇ ಆಟೋ ಚಾಲಕನೊಬ್ಬ ಆಟಾಟೋಪ ತೋರಿರುವ ಘಟನೆಯೊಂದು ನಗರದ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.
ಮಾರ್ಚ್ 25 ರಂದು ರಾತ್ರಿ 8.20 ರ ಸುಮಾರಿಗೆ ರಾಜಸ್ಥಾನದ ಅಜ್ಮೀರ್ ಮೂಲದ ಶ್ರೀರಾಜ್ ಭಾರದ್ವಾಜ್ ಮತ್ತು ಅವರ ಸಹೋದ್ಯೋಗಿ ಸರ್ಜಾಪುರ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಚಾಲಕ ಇದ್ದಕ್ಕಿದ್ದಂತೆ ಬಲ ಬದಿಗೆ ಬಂದಿದ್ದಾನೆ. ಈ ವೇಳೆ ಹಿಂದೆ ಬರುತ್ತಿದ್ದ ಕಾರಿಗೆ ಸಮಸ್ಯೆಯಾಗಿದ್ದು, ಚಾಲಕ ಹಾರ್ನ್ ಮಾಡುತ್ತಿದ್ದಂತೆಯೇ ಆಟೋ ಚಾಲಕ ಆಕ್ರೋಶಗೊಂಡಿದ್ದಾನೆ. ಬಳಿಕ ಕಾರು ಚಾಲಕನೇ ಸಮಾಧಾನಗೊಂಡು ಮುಂದೆ ಸಾಗಿದ್ದರೂ, ಸುಮ್ಮನಾಗದ ಆಟೋ ಚಾಲಕ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾನೆ. ಅಲ್ಲದೆ, ಕಾರಿನ ಮೇಲೆ ಕಲ್ಲು ಎತ್ತು ಹಾಕಿ, ವಾಹನವನ್ನು ಹಾನಿಗೊಳಿಸಿದ್ದಾನೆ. ಇದರ ಬೆನ್ನಲ್ಲೇ ಕಾರು ಚಾಲಕ ಪೊಲೀಸರಿಗೆ ಕರೆಮಾಡಿ, ಆಟೋ ಸಂಖ್ಯೆಯನ್ನು ಹೇಳಿ, ದೂರು ದಾಖಲಿಸಿದ್ದಾರೆ.
ಇನ್ನು ಘಟನೆ ಬೆನ್ನಲ್ಲೇ ಭಾರದ್ವಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಆಟೋ ಚಾಲಕ ಇದ್ದಕ್ಕಿಂತೆ ಪಥ ಬದಲಾಯಿಸಿದ್ದ. ಇದರಿಂದ ಎರಡೂ ವಾಹನಗಳು ಟಚ್ ಆಗಿತ್ತು. ಆದರೆ, ವಾಹನಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಇದಾದ ಬಳಿಕ ಆಟೋ ಚಾಲಕ ನಮ್ಮ ಬೆನ್ನಟ್ಟಿದ್ದ. ನಮ್ಮ ಕಾರನ್ನು ಹಲವಾರು ಬಾರಿ ತಡೆಯಲು ಪ್ರಯತ್ನಿಸುತ್ತಿದ್ದ. ಕಾರಿನ ಮೇಲೆ ಕಲ್ಲು ಎತ್ತು ಹಾಕಿ, ಕಾರಿನ ಒಳಗೆ ನುಗ್ಗಲು ಯತ್ನಿಸಿದ್ದ. ನಾವು ಯಾವುದೇ ಪ್ರತಿಕ್ರಿಯೆ ನೀಡದೆ, ಸುರಕ್ಷಿತ ಪ್ರದೇಶ ತಲುಪಲು ಪ್ರಯತ್ನಿಸಿದೆವು. RGA ಟೆಕ್ ಪಾರ್ಕ್ಗೆ ತಲುಪಿದೆವು. ಕಚೇರಿ ಸ್ಥಳ ಸುರಕ್ಷಿತವೆಂದು ಭಾವಿಸಿದ್ದೆವು ಆದರೆ, ಅಲ್ಲಿಯೂ ಸುರಕ್ಷಿತವಾಗಿರಲಿಲ್ಲ. ಇಬ್ಬರು ಆಟೋ ಚಾಲಕರು ಅಲ್ಲಿಗೂ ಬಂದು ನಾವು ಕಾರಿನಿಂದ ಇಳಿಯುತ್ತಿದ್ದಂತೆಯೇ ಹಲ್ಲೆ ನಡೆಸಿದರು.
ಇದೇನು ಹೊಸದಲ್ಲ. ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ಈ ರೀತಿಯ ಪರಿಸ್ಥಿತಿ ಎದುರಿಸಿದ್ದಾರೆ. ಆದರೆ, ಮೌನ ತಾಳಿದ್ದಾರೆ. ಈ ಘಟನೆ ಬಳಿಕ ನಾನು ನನ್ನ ಮನಸ್ಸನ್ನು ಬದಲಿಸಿದ್ದೇನೆ. ಬೆಂಗಳೂರು ಬಿಟ್ಟು ಹೋಗುತ್ತೇನೆ, ಮತ್ತೆಂದೂ ಇಲ್ಲಿಗೆ ಬರುವುದಿಲ್ಲ. ಜಾಗರೂಕರಾಗಿರಿ. ಘರ್ಷಣೆಗಳನ್ನು ತಪ್ಪಿಸಿ. ಮುಖ್ಯವಾಗಿ, ನೀವು ಯಾವುದೇ ತಪ್ಪು ಮಾಡಿಲ್ಲ ಎಂಬ ಕಾರಣಕ್ಕೆ ನೀವು ಸುರಕ್ಷಿತರಾಗಿದ್ದೀರಿ ಎಂದು ಭಾವಿಸಬೇಡಿ ಎಂದು ಹೇಳಿದ್ದಾರೆ. ಘಟನೆ ಬೆನ್ನಲ್ಲೇ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ Non-Cognisable Report (NCR) ದಾಖಲಾಗಿದೆ.
ದೂರುದಾರ ವ್ಯಕ್ತಿ ಇನ್ನೂ ತಮ್ಮ ಹೇಳಿಕೆಯನ್ನು ದಾಖಲಿಸಿಲ್ಲ. ನಾವು ಸಂಪರ್ಕಿಸುತ್ತಿದ್ದೇವೆ, ಆದರೆ ಅವರು ಈಗ ರಾಜ್ಯದ ಹೊರಗಿದ್ದಾರೆ. ಆರೋಪಿ ಆಟೋ ಚಾಲಕನನ್ನು ಪತ್ತೆಹಚ್ಚಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಏತನ್ಮಧ್ಯೆ ಆಟೋ ಚಾಲಕ ಕೂಡಾ ಕಾರು ಚಾಲಕನ ಮೇಲೆ ಆರೋಪ ಮಾಡಿದ್ದು, ಕಾರು ಟಚ್ ಆಗಿ ನನ್ನ ವಾಹನಕ್ಕೆ ಹಾನಿಯಾಯಿತು. ಮಾತನಾಡಲು ಕಾರನ್ನು ನಿಲ್ಲಿಸುವಂತೆ ಕೇಳಿದೆ. ಆದರೆ, ಅವರು ವಾಹನ ನಿಲ್ಲಿಸಲಿಲ್ಲ, ಇದು ಘಟನೆಗೆ ಕಾರಣವಾಯಿತು ಎಂದು ಹೇಳಿದ್ದಾರೆ. ಇನ್ನು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.
Advertisement