

ಬೆಂಗಳೂರು: ಮಹಿಳೆ ಜತೆ ಸಹ ಜೀವನ ನಡೆಸುತ್ತಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ವ್ಯಕ್ತಿ. ಈ ಸಂಬಂಧ ಮೃತನ ಪಾಲಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇ 5ರಂದು ಠಾಣೆ ವ್ಯಾಪ್ತಿಯ ಶ್ರೀಗಂಧನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗಮೂಲದ ತಿಪ್ಪೇಸ್ವಾಮಿಗೆ ದಾವಣಗೆರೆ ಮೂಲದ ಮಹಿಳೆ ಪ್ರಿಯಾಂಕಾ ಇಬ್ಬರೂ ಇನ್ಸ್ಟಾಗ್ರಾಂ ಮೂಲಕ ಪರಿಚಿತರಾಗಿ ನಂತರ ಒಂದೇ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆ ಹೆಚ್ಚು ರೀಲ್ಸ್ ಮಾಡುತ್ತಿದ್ದರಿಂದ ಆಕೆಯನ್ನು ತಿಪ್ಪೇಸ್ವಾಮಿ ಪರಿಚಯಿಸಿಕೊಂಡಿದ್ದನು.
ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ತಿಪ್ಪೇಸ್ವಾಮಿ ಜತೆ ಕಳೆದ ಎರಡು ತಿಂಗಳಿನಿಂದ ಸಹ ಜೀವನ ನಡೆಸುತ್ತಿದ್ದಳು.
ಶ್ರೀಗಂಧನಗರದಲ್ಲಿರುವ ಬಾಡಿಗೆ ಮನೆ ಮಾಲೀಕರಿಗೆ ದಂಪತಿ ಎಂದು ಸುಳ್ಳು ಹೇಳಿಕೊಂಡು ವಾಸಿಸುತ್ತಿದ್ದರು. ಆದರೆ, ಕೆಲ ದಿನಗಳಿಂದ ತಿಪ್ಪೇಸ್ವಾಮಿ ಮತ್ತು ಆ ಮಹಿಳೆ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು.
ಈ ವೇಳೆ ಮಹಿಳೆ, ನನ್ನನ್ನು ನೋಡಿಕೊಳ್ಳಲು ನಿನಗೆ ಸಾಧ್ಯವಿಲ್ಲ. ನನ್ನನ್ನು ಬಿಟ್ಟು ಬಿಡು ಎಂದು ತಿಪ್ಪೇಸ್ವಾಮಿಗೆ ಹೇಳಿದ್ದಳು ಎನ್ನಲಾಗಿದೆ. ಅದರಿಂದ ಮನನೊಂದ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.
ಆದರೆ, ತಿಪ್ಪೇಸ್ವಾಮಿ ಕುಟುಂಬ ಸದಸ್ಯರು ಇದು ಆತ್ಮಹತ್ಯೆಯಲ್ಲ ಇದರ ಹಿಂದೆ ಮಹಿಳೆಯ ಪಾತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಮಹಿಳೆ ಪರಾರಿಯಾಗಿದ್ದಾಳೆ. ಹೀಗಾಗಿ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿವೆ.
ತಿಪ್ಪೇಸ್ವಾಮಿ ಸಾವು ಆತ್ಮಹತ್ಯೆಯೋ ಅಥವಾ ಬೇರೆ ಕಾರಣವಿದೆಯೋ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಆತ್ಮಹತ್ಯೆ ಆಲೋಚನೆಗಳಿರುವವರು ಸಹಾಯಕ್ಕಾಗಿ ಆರೋಗ್ಯ ಸಹಾಯವಾಣಿ 104 ಅಥವಾ ಸ್ನೇಹಾ ಅವರ ಆತ್ಮಹತ್ಯೆ ತಡೆ ಸಹಾಯವಾಣಿ 044-24640050 ಅನ್ನು ಸಂಪರ್ಕಿಸಬಹುದು)
Advertisement