

ದಾವಣಗೆರೆ: ಭಾರೀ ಮಳೆ ವೇಳೆ ಸಿಡಿಲು ಬಡಿದು ಕುರಿಗಾಹಿಯೊಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲ್ಲೂಕಿನ ಮುದಹದಡಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರನ್ನು ದುಂಡಪ್ಪ ಬಿ. ಗವನಾಳ್ ಅಲಿಯಾಸ್ ಅಜಯ್ (19) ಎಂದು ಗುರುತಿಸಲಾಗಿದೆ. ಈತ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಮರಡಿ ಗ್ರಾಮದ ನಿವಾಸಿಯಾಗಿದ್ದು, ಇತರ ಕುರಿಗಾಹಿಗಳೊಂದಿಗೆ ಈ ಪ್ರದೇಶಕ್ಕೆ ಬಂದು ಕುರಿಗಳನ್ನು ಮೇಯಿಸುತ್ತಿದ್ದರು.
ಮಳೆ ಹಾಗೂ ಗುಡುಗು-ಮಿಂಚು ಆರಂಭವಾದಾಗ ಆಶ್ರಯಕ್ಕಾಗಿ ಅಜಯ್ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಕೆಲ ದಿನಗಳಿಂದ ತೀವ್ರ ಬಿಸಿಲಿನ ವಾತಾವರಣ ಇದ್ದರೂ ಗುರುವಾರ ವ್ಯಾಪಕ ಮಳೆಯಾಗಿದೆ. ದಾವಣಗೆರೆ, ಹೊನ್ನಾಳಿ, ಹರಿಹರ, ನ್ಯಾಮತಿ ಮತ್ತು ಚನ್ನಗಿರಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಗಾಳಿ ಹಾಗೂ ಮಳೆಯಿಂದ ತೆಂಗು ಮತ್ತು ಭತ್ತ ಸೇರಿದಂತೆ ಕೊಯ್ಲಿಗೆ ಸಿದ್ಧವಾಗಿದ್ದ ಬೆಳೆಗಳಿಗೆ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.
Advertisement