

ಬೆಂಗಳೂರು: ತೀವ್ರ ಬೆಸಿಗೆಯಿಂದ ಬಳಲಿದ್ದ ಉದ್ಯಾನನಗರಿ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದು, ಸಂಜೆ ನಗರಾದ್ಯಂತ ಭಾರಿ ಮಳೆಯಾಗಿದೆ.
ನಗರದ ವಿವಿಧೆಡೆ ಗಾಳಿ ಸಹಿತ ಭಾರಿ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ನದಿಯಂತಾಗಿದ್ದವು. ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಸಮಸ್ಯೆಗೆ ಸಿಲುಕುವಂತಾಯಿತು. ರಸ್ತೆ ಬದಿಗಳಲ್ಲೇ ಬೈಕ್ ನಿಲ್ಲಿಸಿ ಬಸ್ ನಿಲ್ದಾಣಗಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಸವಾರರು ನಿಂತ ದೃಶ್ಯಗಳು ಕಂಡುಬಂತು.
ಬೆಂಗಳೂರಿನ ವಸಂತನಗರ, ಸಿಟಿ ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ. ನಗರ, ಬನಶಂಕರಿ, ಕೋಣನಕುಂಟೆ, ಹೆಬ್ಬಾಳ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಚಂದ್ರಾಲೇಔಟ್, ಇಂದಿರಾ ನಗರ, ಲಗ್ಗೆರೆ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಮಣ್ಯ ನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಕೆಆರ್ ಸರ್ಕಲ್ ಅಂಡರ್ ಪಾಸ್ ಬಂದ್
ಇತ್ತ ಮುಂಜಾಗ್ರತಾ ಕ್ರಮವಾಗಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಬಂದ್ ಮಾಡಲಾಗಿದೆ. ಮಳೆ ಹಿನ್ನೆಲೆ ನೀರು ಸಂಗ್ರಹಣೆ ಸಾಧ್ಯತೆ ಇರುವ ಕಾರಣ ಮುಂಜಾಗ್ರತ ಕ್ರಮವಾಗಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ರಾಜ್ಯಾದ್ಯಂತ ಇನ್ನೂ 5 ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಹಲವೆಡೆ ಮುಂದಿನ ದಿನಗಳಲ್ಲಿ ಭಾರಿ ಮಳೆಯ ನಿರೀಕ್ಷೆಯಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮಳೆಯ ನಿರೀಕ್ಷೆ ಇದ್ದು, ಗಂಟೆಗೆ 40-50 ಕಿ.ಮೀ. ಗಾಳಿ, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಮೂರು ದಿನ ನಗರದಲ್ಲಿ 75ರಿಂದ 115 ಮಿಲಿ ಮಿಟರ್ವರೆಗೆ ಜೋರು ಮಳೆ ಸುರಿಯಬಹುದು. ಮೇ 19, 20ರಂದು ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ತಾಪಮಾನ ಗಣನೀಯ ಇಳಿಕೆ
ಮುಂದಿನ 5 ದಿನ ವರುಣ ತಂಪೆರೆಯುವ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರ್ಭಟಿಸುತ್ತಿರುವ ಪೂರ್ವ ಮುಂಗಾರು ಮಳೆ (Pre Monsoon Rain 2026) ರಾಜಧಾನಿಯಲ್ಲಿ ಸಕ್ರಿಯವಾಗಲಿದೆ.
ಇಂದು (ಮೇ 18)ರಂದು ಸಂಜೆ ನಗರದ ಕೆಲವೆಡೆ ಹಗುರ ಮಳೆ ಆಗುವ ನಿರೀಕ್ಷೆ ಇದೆ. ನಾಳೆ ಮೇ 19ರಿಂದ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಆರಂಭ
ಇನ್ನು ತಮಿಳುನಾಡಿನ ಕರಾವಳಿ, ಅರಬ್ಬಿ ಸಮುದ್ರದ ಭಾಗದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಈ ವೈಪರೀತ್ಯಗಳು ಕೇವಲ ಕರಾವಳಿಗೆ ಸೀಮಿತವಾಗದೇ ಅಂಡಮಾನ್, ನಿಕೋಬಾರ್ ದ್ವೀಪಗಳವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಸ್ತರಿಸಿವೆ.
ಕಿಲೋ ಮಿಟರ್ ಗಟ್ಟಲೇ ಸಮುದ್ರಮಟ್ಟದಿಂದ ಎತ್ತರದಲ್ಲಿವೆ. ಇದು ಮುಂಗಾರು ಮಳೆ ಆರಂಭದ ಮುನ್ಸೂಚನೆ ಎಂದಿರುವ ಹವಾಮಾನ ಇಲಾಖೆ ಮೇ 26ರಂದು ಕೇರಳಕ್ಕೆ ಮುಂಗಾರು ಮಳೆ (Monsoon Rain 2026) ಆಗಮಿಸುವುದಾಗಿ ತಿಳಿಸಿದೆ.
ಈ ವೈಪರಿತ್ಯಗಳ ಪ್ರಭಾವದಿಂದಾಗಿ ಬೆಂಗಳೂರು ನಗರ ಸೇರಿದಂತೆ ವಿವಿಧ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ 5 ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.
Advertisement