

ತುಮಕೂರು: ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅವರು ತಮ್ಮ ತವರು ಜಿಲ್ಲೆ ತುಮಕೂರನ್ನು ಬೆಂಗಳೂರಿಗೆ ವಿಲೀನಗೊಳಿಸಿ ಅದನ್ನು “ಬೆಂಗಳೂರು ನಾರ್ಥ್” ಎಂದು ಮರುನಾಮಕರಣ ಮಾಡುವುದಾಗಿ ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಹೇಳಿದ್ದು ಕೇವಲ ಒಂದು ಕನ್ಸೆಪ್ಟ್ ಮಾತ್ರ. ತುಮಕೂರಿನ ಹೆಸರನ್ನಾಗಲಿ, ಗಡಿಗಳನ್ನಾಗಲಿ ಬದಲಾಯಿಸುವುದಿಲ್ಲ. ತುಮಕೂರು ಹಾಗೆಯೇ ಇರುತ್ತದೆ,” ಎಂದರು.
ತುಮಕೂರನ್ನು ಬೆಂಗಳೂರು ಪ್ರದೇಶದ ಭಾಗವಾಗಿ ಪರಿಗಣಿಸಿದರೆ ವಿದೇಶಿ ಹೂಡಿಕೆದಾರರು ವಿಶೇಷವಾಗಿ ಅಮೆರಿಕಾ, ಬ್ರಿಟನ್ ಮುಂತಾದ ದೇಶಗಳವರು ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಬಹುದು ಎಂಬ ಉದ್ದೇಶ ಮಾತ್ರ ಇತ್ತು. ಏನನ್ನೂ ಬದಲಾಯಿಸುವುದಿಲ್ಲ. ಒಂದು ಕಡ್ಡಿಯನ್ನೂ ಕದಲಿಸುವುದಿಲ್ಲ ಎಂದು ಪರಮೇಶ್ವರ್ ಅವರು ಹೇಳಿದರು.
ಮಂಗಳವಾರ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪರಮೇಶ್ವರ, ತುಮಕೂರು ಬೆಂಗಳೂರು ನಗರಕ್ಕೆ ಕೇವಲ ಸುಮಾರು 60 ಕಿಮೀ ದೂರದಲ್ಲಿದೆ ಎಂದು ಹೇಳಿದ್ದರು.
ಅಲ್ಲದೆ “ರಾಮನಗರವನ್ನು ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಸೌತ್ ಎಂದು ಮಾಡಿರುವಂತೆ, ತುಮಕೂರನ್ನು ಬೆಂಗಳೂರು ನಾರ್ಥ್ ಎಂದು ಘೋಷಿಸಬೇಕು” ಎಂದು ಹೇಳಿದ್ದರು. ಈ ಹೇಳಿಕೆಗೆ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು.
ಬಿಜೆಪಿ ಸಂಸದ ಪಿಸಿ ಮೋಹನ್ (P C Mohan) ಅವರು ಸಾಮಾಜಿಕ ಜಾಲತಾಣ X ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, “ಈ ದರದಲ್ಲಿ ಮಂಗಳೂರು ‘ಬೆಂಗಳೂರು ಬೀಚ್ಫ್ರಂಟ್’, ಕಲಬುರಗಿ ‘ಬೆಂಗಳೂರು ಫಾರ್ ಈಸ್ಟ್’, ಕೊಡಗು ‘ಬೆಂಗಳೂರು ಹಿಲ್ ಸ್ಟೇಷನ್’ ಆಗಬಹುದು” ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ದೆಹಲಿ NCR ಪ್ರದೇಶದಲ್ಲಿ ನೋಯ್ಡಾ ಮತ್ತು ಗುರುಗ್ರಾಮ್ ನಗರಗಳನ್ನು ಹೆಸರು ಬದಲಿಸದೇ ಒಳಗೊಂಡಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.
“ತುಮಕೂರಿನ ಅಭಿವೃದ್ಧಿ, ಹೂಡಿಕೆ ಮತ್ತು ಕೈಗಾರಿಕೆಗಳ ಬೆಳವಣಿಗೆಯ ಉದ್ದೇಶ ಮಾತ್ರ ಇದಾಗಿದೆ. ಬೇರೆ ಯಾವುದೇ ಉದ್ದೇಶ ಇಲ್ಲ,” ಎಂದು ಅವರು ಪುನರುಚ್ಚರಿಸಿದರು.
Advertisement