ಬೆಂಗಳೂರು: ಪಾರ್ಟಿಯಲ್ಲಿ ಕೇರಳದ ಯುವತಿಗೆ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನ ಆರೋಪ, ಕೇಸು ದಾಖಲು

ಸಂತ್ರಸ್ತೆ ಕೇರಳ ಮೂಲದವರಾಗಿದ್ದು, ಬೆಂಗಳೂರಿನ ಒಂದು ಕಫೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Representional image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ನಡೆದ ಪಾರ್ಟಿಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಬಳಿಕ ಆ ವ್ಯಕ್ತಿ ಹಾಗೂ ಅವನ ಸಹಚರರು ತನ್ನ ಸ್ನೇಹಿತರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸಂತ್ರಸ್ತೆ ಕೇರಳ ಮೂಲದವರಾಗಿದ್ದು, ಬೆಂಗಳೂರಿನ ಒಂದು ಕಫೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಮ್ಮ ದೂರಿನಲ್ಲಿ, ಮೇ 11ರ ರಾತ್ರಿ ಕೆಲಸ ಮುಗಿದ ಬಳಿಕ ತಾನು ಹಾಗೂ ಇತರರು ಕೆಫೆ ಮಾಲೀಕ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ನಗರದ ಮಡಿವಾಳ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೂರಿನಲ್ಲಿ, ತಾನು ಕೆಲಸ ಮಾಡುತ್ತಿದ್ದ ಕೆಫೆಯ ಮಾಲೀಕ ಹಾಗೂ ಸ್ನೇಹಿತನೊಬ್ಬ ಮತ್ತೊಬ್ಬ ಸ್ನೇಹಿತನೊಂದಿಗೆ ಊಟ ತರಲು ಹೊರಗೆ ಹೋದಾಗ, ಮದ್ಯದ ಅಮಲಿನಲ್ಲಿದ್ದ ಹೈನಾಸ್ ಎಂಬ ಆರೋಪಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಅವನು ತನ್ನ ಕೈಗಳನ್ನು ಹಿಡಿದು ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಿದ್ದಾನೆ. ಬಳಿಕ ಇಬ್ಬರು ಸ್ನೇಹಿತರು ಮಧ್ಯಪ್ರವೇಶಿಸಿ ತನ್ನನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ವೀಡಿಯೋ ಹೇಳಿಕೆಯಲ್ಲಿ, ತಾನು ಆರೋಪಿಗೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿ ಸ್ಪಷ್ಟವಾಗಿ “ಬೇಡ” ಎಂದು ಹೇಳಿದ್ದರೂ, ಆತ ಬಲವಂತವಾಗಿ ಲೈಂಗಿಕ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಅವನು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ. ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ. ನನ್ನ ಬಟ್ಟೆ ಎಳೆದನು ಎಂದು ಅವರು ಆರೋಪಿಸಿದ್ದಾರೆ. ತಮ್ಮ ಸ್ನೇಹಿತರು ಮಧ್ಯಪ್ರವೇಶಿಸಿದಾಗ, ಆರೋಪಿ ಆಕ್ರಮಣಕಾರಿ ಸ್ವಭಾವ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದೂ ಅವರು ಹೇಳಿದ್ದಾರೆ.

ಯಾರಿಗಾದರೂ ಕರೆ ಮಾಡಿ ಸಹಾಯ ಕೇಳಿದರೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ ಎಲ್ಲರನ್ನೂ ಕೊಲ್ಲುತ್ತೇನೆ ಎಂದು ಬಿಯರ್ ಬಾಟಲಿಯಿಂದ ಬೆದರಿಕೆ ಹಾಕಿದ ಎಂದು ಅವರು ಹೇಳಿದ್ದಾರೆ.

ಎಫ್‌ಐಆರ್ ಪ್ರಕಾರ, ಬಳಿಕ ಆರೋಪಿ ಮದ್ಯದ ಬಾಟಲಿಯನ್ನು ಹಿಡಿದು ದೂರುದಾರ್ತಿ ಹಾಗೂ ಅವರ ಸ್ನೇಹಿತರಿಗೆ ಜೀವ ಬೆದರಿಕೆ ಹಾಕಿದ್ದಾನೆ.

ಮೇ 12ರಂದು ರಾತ್ರಿ ಸುಮಾರು 12.30ಕ್ಕೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗಲೂ, ಕೆಲ ಆರೋಪಿಗಳು ಠಾಣೆಯ ಹೊರಗಡೆ ಮತ್ತೆ ಬೆದರಿಕೆ ಹಾಕಿದ್ದಾರೆ ಎಂದು ಪೀಡಿತೆ ಆರೋಪಿಸಿದ್ದಾರೆ. ಪ್ರಾಥಮಿಕ ದೂರು ಪ್ರಕ್ರಿಯೆಯಲ್ಲಿಯೂ ತಮಗೆ ಸಮರ್ಪಕ ಬೆಂಬಲ ಸಿಗಲಿಲ್ಲ ಎಂದು ಯುವತಿ ತಮ್ಮ ವೀಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನನಗೆ ನ್ಯಾಯ ಸಿಗಬೇಕು ಎಂಬ ನಂಬಿಕೆ ಇದೆ. ಇದು ಕೇವಲ ವ್ಯಕ್ತಿಗಳ ನಡುವಿನ ಸಂಘರ್ಷವಲ್ಲ. ಒಬ್ಬ ಯುವತಿಗೆ ಅವಳ ಒಪ್ಪಿಗೆಯಿಲ್ಲದೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಲೈಂಗಿಕ ಕ್ರಿಯೆಗೆ ತಳ್ಳಿದ ಪ್ರಕರಣ ಎಂದು ಅವರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಮತ್ತಷ್ಟು ವಿವರವಾಗಿ, ಮೇ 14ರಂದು ಆರೋಪಿ ಸಹಚರನಾದ ಸುರೇಶ್ ಸೇರಿದಂತೆ ಸುಮಾರು ಒಂಬತ್ತು ಅಪರಿಚಿತರು ಪೀಡಿತೆಯ ಕೆಲಸದ ಸ್ಥಳದ ಬಳಿ ತಿರುಗಾಡಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಮೇ 15ರಂದು, ಸುರೇಶ್ ಹಾಗೂ ಇತರರು ತಮ್ಮ ಪರಿಚಿತರ ಮನೆ ಮೇಲೆ ದಾಳಿ ನಡೆಸಿ ಗಂಭೀರ ಗಾಯಗಳನ್ನುಂಟು ಮಾಡಿದ್ದಾರೆ ಎಂಬ ಮಾಹಿತಿ ಸಂತ್ರಸ್ತೆಗೆ ಲಭಿಸಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಪುನಃ ಪುನಃ ಬೆದರಿಕೆ ಬಂದ ಕಾರಣ, ತಾನು ಹಾಗೂ ತನ್ನ ಸ್ನೇಹಿತೆಯೊಬ್ಬರು ಸುರಕ್ಷತೆಗಾಗಿ ಬೆಂಗಳೂರನ್ನು ಬಿಟ್ಟು ಕೇರಳಕ್ಕೆ ಹಿಂತಿರುಗಿದ್ದೇವೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.

ಪೀಡಿತೆಯ ದೂರಿನ ಆಧಾರದ ಮೇಲೆ, ಮೇ 18ರಂದು ಆರೋಪಿಗಳು ಹಾಗೂ ಅವರ ಸಹಚರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳು 115(1) (ಉದ್ದೇಶಪೂರ್ವಕ ಹಲ್ಲೆ), 118(1) (ಆಯುಧ ಅಥವಾ ಅಪಾಯಕಾರಿ ವಿಧಾನಗಳಿಂದ ಗಾಯಗೊಳಿಸುವುದು), 62 (ಅತ್ಯಾಚಾರ ಯತ್ನ), 64 (ಅತ್ಯಾಚಾರಕ್ಕೆ ಶಿಕ್ಷೆ), 74 (ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದ ದಾಳಿ), 351(1) (ಜೀವ ಬೆದರಿಕೆ) ಹಾಗೂ 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದು, ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com