

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾರಾಂತ್ಯ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆಯಾಗುತ್ತಿದೆ. ನಗರದ ಹಲವು ಭಾಗಗಳಲ್ಲಿ ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ವಾರಾಂತ್ಯ ರಜೆ ಹೊರಹೋಗುವ ಪ್ಲಾನ್ ಹಾಕಿಕೊಂಡಿದ್ದವರ ಮೂಡ್ ಹಾಳಾಗಿದೆ.
ಆದರೆ ಹಲವು ದಿನಗಳಿಂದ ಬಿಸಿಲು, ಸೆಖೆಯಿಂದ ಬಳಲುತ್ತಿದ್ದವರಿಗೆ ತಂಪಾದ ವಾತಾವರಣದ ಅನುಭವ ನೀಡಿದೆ. ಕಳೆದ ಕೆಲವು ದಿನಗಳಿಂದ ಸಾಧಾರಣ ಬಿಸಿಲಿನಿಂದ ಕೂಡಿದ್ದ ರಾಜಧಾನಿಯಲ್ಲಿ, ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದೆ. ವಿದ್ಯಾರಣ್ಯಪುರ, ಕೆಂಗೇರಿ ಶಾಂತಿನಗರ, ರಿಚ್ಮಂಡ್ ಟೌನ್, ಮೆಜೆಸ್ಟಿಕ್, ಕಾರ್ಪೊರೇಷನ್ ಮತ್ತು ಸುತ್ತಮುತ್ತಲಿನ ಹತ್ತಿರದ ಜಾಗಗಳಲ್ಲಿ ಮಳೆಯ ಸಿಂಚನವಾಗುತ್ತಿದೆ. ನೆಟ್ಟಿಗರು ತಮ್ಮ ಪ್ರದೇಶಗಳ ಸುತ್ತಮುತ್ತ ಮಳೆಯಾಗುತ್ತಿರುವ ಸ್ಟೇಟಸ್ ಗಳನ್ನು ಹಾಕುತ್ತಿರುತ್ತಾರೆ.
ವಾಹನ ಸವಾರರ ಪರದಾಟ,ಸಂಚಾರ ಸಮಸ್ಯೆ
ವಾರಾಂತ್ಯ ಆರಂಭದ ದಿನವಾದ ಇಂದು ಮುಂಜಾನೆಯೇ ಮಳೆ ಶುರುವಾಗಿರುವುದರಿಂದ ಕಚೇರಿಗೆ ಹೋಗುವವರು ಮತ್ತು ಅಗತ್ಯ ಕೆಲಸಗಳಿಗಾಗಿ ಹೊರಟಿದ್ದ ವಾಹನ ಸವಾರರು ಕೊಂಚ ಪರದಾಡುವಂತಾಯಿತು. ಆದರೆ, ಸುಡುವ ಬಿಸಿಲಿಗೆ ಬಸವಳಿದಿದ್ದ ಜನರಿಗೆ ಈ ಜಿಟಿ ಜಿಟಿ ಮಳೆ ಸದ್ಯ ನೆಮ್ಮದಿ ತಂದಿದ್ದು, ನಗರದಾದ್ಯಂತ ಹಿತಕರ ಹಾಗೂ ತಂಪಾದ ಹವಾಮಾನ ನಿರ್ಮಾಣವಾಗಿದೆ.
ಮುಂದಿನ ಕೆಲವು ಗಂಟೆಗಳ ಕಾಲ ನಗರದ ಹಲವೆಡೆ ಇದೇ ರೀತಿಯ ಸಾಧಾರಣ ಅಥವಾ ಜಿಟಿ ಜಿಟಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ.
Advertisement