

ನವದೆಹಲಿ: ಕರ್ನಾಟಕ-ಮಹಾರಾಷ್ಟ್ರ ನಡುವಿನ ಬಹುಕಾಲದ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ ಸೇರಿದಂತೆ ಕರ್ನಾಟಕದ ಆಡಳಿತದಲ್ಲಿರುವ 865 ಮರಾಠಿ ಭಾಷಿಕ ಗ್ರಾಮಗಳು ಹಾಗೂ ಪಟ್ಟಣಗಳ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, 2004ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಕರ್ನಾಟಕದ ಆಡಳಿತದಲ್ಲಿರುವ 865 ಮರಾಠಿ ಭಾಷಿಕ ಗ್ರಾಮಗಳು ಹಾಗೂ ಪಟ್ಟಣಗಳ ವಿಚಾರವಾಗಿ ಮಹಾರಾಷ್ಟ್ರ ಈ ಅರ್ಜಿಯನ್ನು ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಮಹಾರಾಷ್ಟ್ರ ಪರ ವಕೀಲರು ಮನವಿ ಸಲ್ಲಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಎರಡೂ ಪಕ್ಷಗಳ ವಾದಗಳು ಹಾಗೂ ದಾಖಲೆಗಳ ಸಲ್ಲಿಕೆ ಪೂರ್ಣಗೊಂಡಿದ್ದು, ಇದೀಗ ವಿಚಾರಣೆಗೆ ಪಟ್ಟಿ ಮಾಡಬಹುದು ಎಂದು ಮಹಾರಾಷ್ಟ್ರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಕರ್ನಾಟಕದಲ್ಲಿರುವ 865 ಮರಾಠಿ ಭಾಷಿಕ ಗ್ರಾಮಗಳ ವಿಚಾರವನ್ನು ಪ್ರಸ್ತಾಪಿಸಿದ ವಕೀಲರು, ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಪುನರ್ರಚನೆ ಮಾಡಲಾಗಿದ್ದರೂ ಈ ಪ್ರದೇಶಗಳು ಕರ್ನಾಟಕದ ಆಡಳಿತದಲ್ಲಿವೆ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಪ್ರಕರಣವನ್ನು ಪರಿಶೀಲಿಸುವುದಾಗಿ ತಿಳಿಸಿದರು. ಆದರೆ, “ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದ ವಾದದ ಪ್ರಕಾರ, ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಹಲವು ಮರಾಠಿ ಭಾಷಿಕ ಪ್ರದೇಶಗಳು ಪ್ರಸ್ತುತ ಕರ್ನಾಟಕದ ಆಡಳಿತದಲ್ಲಿವೆ.
ಕರ್ನಾಟಕದ ನಿಯಂತ್ರಣ ಮತ್ತು 1956 ರ ಕಾನೂನಿನ ನಿಬಂಧನೆಗಳನ್ನು ಪ್ರಶ್ನಿಸಿ ಮಹಾರಾಷ್ಟ್ರವು ಸುಪ್ರೀಂ ಕೋರ್ಟ್ನಲ್ಲಿ ಮೂಲ ಮೊಕದ್ದಮೆ ಹೂಡಿತ್ತು.
1956ರ ರಾಜ್ಯ ಪುನರ್ರಚನಾ ಕಾಯ್ದೆಯಡಿ ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಗಡಿಗಳನ್ನು ಮರುನಿಗದಿಪಡಿಸಲಾಗಿತ್ತು.
ಕನ್ನಡ ಭಾಷಿಕರ ಬಹುಮತದ ಆಧಾರದ ಮೇಲೆ ಬೆಳಗಾವಿಯನ್ನು ಅಂದಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ) ಸೇರಿಸಲಾಗಿತ್ತು. ಆದರೆ, ಸುತ್ತಮುತ್ತಲಿನ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರದಲ್ಲಿಯೇ ಉಳಿದಿದ್ದವು.