

ತುಮಕೂರು: ಇಲ್ಲಿನ ಆಭರಣ ವ್ಯಾಪಾರಿಯೊಬ್ಬರ ಮನೆಯಿಂದ ಸುಮಾರು ₹2.25 ಕೋಟಿ ಮೌಲ್ಯದ ಚಿನ್ನ-ಬೆಳ್ಳಿಯ ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆಭರಣ ವ್ಯಾಪಾರಿ ಲಕ್ಷಂ ಗಣಪತ್ ಪವಾರ್ ಮತ್ತು ಅವರ ಕುಟುಂಬವು ಆಗಸ್ಟ್ 29 ಮತ್ತು 30 ರಂದು ತಮ್ಮ ಮಗನ ಮದುವೆಗಾಗಿ ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳ್ಳರು ಕಾಂಪೌಂಡ್ ಗೋಡೆ ಹಾಗೂ ಕಿಟಕಿಗಳ ಗ್ರಿಲ್ ಅನ್ನು ಕತ್ತರಿಸಿ ಮನೆಗೆ ನುಗ್ಗಿದ್ದಾರೆ. ಗುರುತು ಸಿಗದಂತೆ ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನವಾದ ಬೆಲೆಬಾಳುವ ವಸ್ತುಗಳಲ್ಲಿ ಚಿನ್ನದ ಬಿಸ್ಕತ್ತುಗಳು, ಬೆಳ್ಳಿಯ ಬಾರ್ಗಳು ಮತ್ತು ಬೆಳ್ಳಿಯ ನಾಣ್ಯಗಳಲ್ಲದೆ, ಇತರ ಚಿನ್ನ ಮತ್ತು ಬೆಳ್ಳಿಯ ಆಭರಣಗಳೂ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.