'ಚೀನಾವನ್ನು ಪ್ರಶ್ನಿಸುವ ಧೈರ್ಯ ಮೋದಿಯವರಿಗಿಲ್ಲ': ಪ್ರಿಯಾಂಕ್ ಖರ್ಗೆ; Video

ಭಾರತೀಯ ಸೇನೆ ಗಸ್ತು ನಡೆಸುತ್ತಿದ್ದ ಪ್ರಮುಖ ಸ್ಥಳಗಳನ್ನು ನೀವು ಕಳೆದುಕೊಂಡಿದ್ದೀರಿ. ಆದರೂ ಅವರ ವಿರುದ್ಧ ಧ್ವನಿ ಎತ್ತುವ ಧೈರ್ಯ ನಿಮಗಿಲ್ಲ. ರೂಪಾಯಿ ಹೊಸ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಬ್ರಿಕ್ಸ್‌ಗೂ ಮುನ್ನ ಕೇಂದ್ರದ ವಿದೇಶಾಂಗ ನೀತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಬ್ರಿಕ್ಸ್ ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಪ್ರಶ್ನಿಸಿದ್ದಾರೆ. ಭಾರತೀಯ ರೂಪಾಯಿ ಕುರಿತಂತೆ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ, ಚೀನಾದಿಂದ ಎದುರಾಗುತ್ತಿರುವ ಸವಾಲುಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರದ ವಿದೇಶಾಂಗ ನೀತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಕಾಣುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪ್ರಧಾನಿ ಗುಜರಾತ್‌ನಲ್ಲಿ ಜೋಕಾಲಿಯಲ್ಲಿ ಕುಳಿತರು, ಮಹಾಬಲಿಪುರಂನಲ್ಲಿ ಮಾತುಕತೆ ನಡೆಸಿದರು. ಅದರ ನಂತರ ಏನಾಯಿತು? ಅವರು ಅರುಣಾಚಲ ಪ್ರದೇಶವನ್ನು ತಮ್ಮ ಭೂಭಾಗಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಭಾರತದ ಇತರ ಪ್ರದೇಶಗಳನ್ನೂ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ನಮ್ಮ ಗಡಿಯೊಳಗೆ ಗ್ರಾಮಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಚೀನಾ ಸರ್ಕಾರ ಮಾಡುತ್ತಿರುವುದು ತಪ್ಪು ಎಂದು ಹೇಳುವಷ್ಟು ಧೈರ್ಯ ಪ್ರಧಾನಿಗೆ ಇಲ್ಲ ಏಕೆ ಎಂದು ಪ್ರಶ್ನಿಸಿದರು.

ಭಾರತೀಯ ಸೇನೆ ಗಸ್ತು ನಡೆಸುತ್ತಿದ್ದ ಪ್ರಮುಖ ಸ್ಥಳಗಳನ್ನು ನೀವು ಕಳೆದುಕೊಂಡಿದ್ದೀರಿ. ಸೇನೆಗೆ ಸೇರಿದ ಪ್ರಮುಖ ಪ್ರದೇಶಗಳನ್ನೂ ಕಳೆದುಕೊಂಡಿದ್ದೀರಿ. ಆದರೂ ಅವರ ವಿರುದ್ಧ ಧ್ವನಿ ಎತ್ತುವ ಧೈರ್ಯ ನಿಮಗಿಲ್ಲ” ಎಂದು ಅವರು ಹೇಳಿದರು.

Priyank Kharge
ಮೋದಿಯವರ 56 ಇಂಚಿನ ಎದೆಗಾರಿಕೆ ಕಾಂಗ್ರೆಸ್ ಪಕ್ಷದ ವಿರುದ್ಧ ತೋರಿಸುವುದಕ್ಕಷ್ಟೇ ಸೀಮಿತವೇ? RSS ಹಿಟ್​​ಲಿಸ್ಟ್​​ನಲ್ಲಿ ನಾನೇ ಮೊದಲು; ಪ್ರಿಯಾಂಕ್ ಖರ್ಗೆ

ಈ 56 ಇಂಚಿನ ಎದೆ ಕಾಂಗ್ರೆಸ್‌ಗೆ ತೋರಿಸುವುದಕ್ಕಷ್ಟೇನಾ, ದೇಶದ ಶತ್ರುಗಳಿಗೂ ತೋರಿಸುವುದಕ್ಕಲ್ಲವೇ ಎಂದು ಪ್ರಶ್ನಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವರೇ ‘ನನಗಿಂತ ದೊಡ್ಡವರೊಂದಿಗೆ ಜಗಳವಾಡಲು ಹೋಗಬೇಕೇ ಎಂದು ಹೇಳುವಂತಹ ಪರಿಸ್ಥಿತಿ ಇದೆ ಎಂದು ಟೀಕಿಸಿದರು.

ಇದೇ ವೇಳೆ, ವಂದೇ ಮಾತರಂ ಕುರಿತಂತೆ ನಡೆಯುತ್ತಿರುವ ವಿವಾದದ ಬಗ್ಗೆ ಖರ್ಗೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು. ರಾಷ್ಟ್ರಗೀತೆಯನ್ನು ಹೇಗೆ ಹಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಬಿಜೆಪಿಗೆ ಇದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿಯವರು ತಾವು ಸರ್ದಾರ್ ವಲ್ಲಭಭಾಯಿ ಪಟೇಲ್‌ಗಿಂತ ದೊಡ್ಡವರು ಎಂದು ಭಾವಿಸುತ್ತಾರೆಯೇ? ನೆಹರು, ಗಾಂಧಿ ಅಥವಾ ಸುಭಾಷ್ ಚಂದ್ರ ಬೋಸ್‌ಗಿಂತಲೂ ದೊಡ್ಡವರೇ? ಏನು ಹಾಡಬೇಕು ಎಂಬುದನ್ನು ನಿರ್ಧರಿಸಿದವರು ಅವರೇ. ಬಿಜೆಪಿಯವರು ಅವರಿಗಿಂತ ಮೇಲಿನವರೇ? ಎಂದು ಅವರು ಪ್ರಶ್ನಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಕೊಡುಗೆಯೇನು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಆರ್‌ಎಸ್‌ಎಸ್ ಮತ್ತು ವಿನಾಯಕ ದಾಮೋದರ ಸಾವರ್ಕರ್ ವಿರುದ್ಧವೂ ಅವರು ಆರೋಪಗಳನ್ನು ಮಾಡಿದರು.

ಇದೇ ವೇಳೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬ್ರಿಕ್ಸ್ ಬಿಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿ, ಬ್ರಿಕ್ಸ್ ರಾಷ್ಟ್ರಗಳೊಳಗಿನ ಹೆಚ್ಚಿನ ಆರ್ಥಿಕ ಚಟುವಟಿಕೆ ಹಾಗೂ ಆರ್ಥಿಕ ಭದ್ರತೆಯು ಹೆಚ್ಚಿನ ಸ್ವಾವಲಂಬನೆಗೆ ನೆರವಾಗಲಿದೆ ಎಂದು ಹೇಳಿದರು.

ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವುದು, ವಾಣಿಜ್ಯ ಸಂಬಂಧಗಳನ್ನು ವೈವಿಧ್ಯಗೊಳಿಸುವುದು ಹಾಗೂ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಅಗತ್ಯವನ್ನು ಜೈಶಂಕರ್ ಒತ್ತಿ ಹೇಳಿದರು.

ಬ್ರಿಕ್ಸ್ ಶೃಂಗಸಭೆಯ ಪ್ರಮುಖ ಕಾರ್ಯಕ್ರಮ ನಾಳೆ ಆರಂಭವಾಗಲಿದ್ದು, ಶೃಂಗಸಭೆಯ ಅಧ್ಯಕ್ಷ ರಾಷ್ಟ್ರವಾಗಿರುವ ಭಾರತದ ಉಪಕ್ರಮಗಳು ಹಾಗೂ ಬ್ರಿಕ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ನಾಯಕರು ಚರ್ಚಿಸುವ ನಿರೀಕ್ಷೆಯಿದೆ.

ವ್ಯಾಪಾರ, ಹಣಕಾಸು, ಇಂಧನ ಭದ್ರತೆ, ಡಿಜಿಟಲ್ ತಂತ್ರಜ್ಞಾನ, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು ಹಾಗೂ ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆಗಳು ಪ್ರಮುಖ ಚರ್ಚಾ ವಿಷಯಗಳಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com