

ಬೆಂಗಳೂರು: 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 1 ಕೋಟಿ ರೂಪಾಯಿ ಮೌಲ್ಯದ ಜಮೀನು ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ವಂಚಕರ ಜಾಲವನ್ನು ಹೊಸಕೋಟೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಸೂತ್ರಧಾರ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಯಲಚೇನಹಳ್ಳಿ ನಿವಾಸಿ ಹಾಗೂ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಶಶಿಕುಮಾರ್, ನಾಗೇಶ್, ಪ್ರಮೀಳಾ, ಅಂಬುಜಾ ಹಾಗೂ ವೆಂಕಟರವಣಪ್ಪ ಎಂದು ಗುರುತಿಸಲಾಗಿದೆ.
ಪ್ರಮುಖ ಆರೋಪಿ ಶಶಿಕುಮಾರ್ ಹೊಸಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಹಲವು ಜನರ ವಿಶ್ವಾಸ ಗಳಿಸಿಕೊಂಡು, ರೂ.1 ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ ರೂ.10 ಲಕ್ಷಕ್ಕೆ ಖರೀದಿಸಬಹುದು ಎಂದು ಹೇಳುತ್ತಿದ್ದ.
ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಆರ್ಥಿಕವಾಗಿ ಸ್ಥಿರವಾಗಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದ ಆತ, ವಿವಿಧ ಸ್ಥಳಗಳಿಗೆ ಕರೆದೊಯ್ದು ಆ ಜಮೀನುಗಳು ಬೇನಾಮಿ ಆಸ್ತಿಗಳಾಗಿವೆ ಎಂದು ಹೇಳುತ್ತಿದ್ದ ಎನ್ನಲಾಗಿದೆ.
ಕೆಲವು ಪ್ರಕರಣಗಳಲ್ಲಿ ಈ ಬೇನಾಮಿ ಆಸ್ತಿಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸಂಬಂಧಿಸಿದ್ದವು ಎಂದು ಆತ ಹೇಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಸ್ನೇಹಿತರು ಹಾಗೂ ಸ್ಥಳೀಯ ನಿವಾಸಿಗಳ ವಿಶ್ವಾಸ ಗಳಿಸಿಕೊಂಡಿದ್ದ ಶಶಿಕುಮಾರ್, ಇದೇ ನಂಬಿಕೆಯ ಆಧಾರದ ಮೇಲೆ ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ ತಿಂಗಳು ಶಶಿಕುಮಾರ್ ವಿರುದ್ಧ ವಂಚನೆ ಆರೋಪದಡಿ ದೂರು ದಾಖಲಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ತನಿಖೆ ವೇಳೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಇತರ ಆರೋಪಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ಉಳಿದ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳು ವಂಚನೆಯಿಂದ ಪಡೆದ ಹಣವನ್ನು ವಾಹನಗಳು ಹಾಗೂ ಜಮೀನು ಖರೀದಿಸಲು ಬಳಸಿದ್ದಾರೆ ಎನ್ನಲಾಗಿದೆ.
ಹಣ ಹಿಂದಿರುಗಿಸುವಂತೆ ಸಂತ್ರಸ್ತರು ಒತ್ತಾಯಿಸಿದಾಗ ಬೌನ್ಸರ್ಗಳ ಮೂಲಕ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ. ವಂಚನೆಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ಪೊಲೀಸರು ಪರಿಶೀಲಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.