

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಮೊನ್ನೆ ಶನಿವಾರ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯಿತು. ಅಂದು ಬೆಳಗಿನ ಉಪಾಹಾರವನ್ನು ಮಂಗಳೂರಿನ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಮುಖ್ಯಮಂತ್ರಿಗಳು ಅಲ್ಲಿನ ಯುವ ಕಂಟೆಂಟ್ ಕ್ರಿಯೇಟರ್ಸ್ ಗಳ ಜೊತೆ ಮಾತನಾಡುತ್ತಾ, ಹರಟುತ್ತಾ ಸವಿದಿದ್ದರು.
ಆಗ ಒಬ್ಬರು ಯುವತಿ ಮಂಗಳೂರು ಫುಡ್ ಗೆ ವರ್ಲ್ಡ್ ಫೇಮಸ್, ಇಲ್ಲಿನ ಫುಡ್ ನ್ನು ನೀವು ಈ ಹಿಂದೆ ಟೇಸ್ಟ್ ಮಾಡಿದ್ದೀರಾ, ಯಾವುದಾದರೂ ಒಂದು ಮಂಗಳೂರು ಫುಡ್ ಇಡೀ ಕರ್ನಾಟಕದಲ್ಲಿ ಸಿಗ್ಬೇಕು ಅಂದ್ರೆ ಅದು ಯಾವುದು ಸರ್ ಎಂದು ಕೇಳಿದ್ದರು.
ಥಟ್ಟನೇ ಮುಖ್ಯಮಂತ್ರಿಗಳು ನಗುತ್ತಾ ಕಾಣೆ ಫಿಶ್, ನೀವು ಕಾಣೆ ಫಿಶ್ ಟೇಸ್ಟ್ ಗೆ ಯಾವುದನ್ನೂ ಮ್ಯಾಚ್ ಮಾಡೋಕೆ ಆಗಲ್ಲ ಅಂದರು. ಆಗ ಅಲ್ಲಿದ್ದ ಯುವಕ-ಯುವತಿಯರೆಲ್ಲಾ ನಕ್ಕರು. ಆದರೆ ನಾನೀಗ ಪ್ಯೂರ್ ವೆಜಿಟೀರಿಯನ್, ಹಿಂಗಾಗಿ ಈಗೇನೂ ತಿಂದಿಲ್ಲ ಅಂತ ಹೇಳೋದನ್ನು ಮರೀಲಿಲ್ಲ.
ಇದಾಗಿ ಸೋಶಿಯಲ್ ಮೀಡಿಯಾದ ಎಲ್ಲ ಪ್ಲಾಟ್ ಫಾರಂ ಗಳಲ್ಲಿ, ರೀಲ್ಸ್ ಗಳಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಕಾಣೆ ಮೀನು ಇಷ್ಟ ಅಂತ ಹೇಳಿದ್ದು ಸಿಕ್ಕಾಪಟ್ಟೆ ವೈರಲ್ ಆಯ್ತು. ಸಾಮಾಜಿಕ ಜಾಲತಾಣದ ಪ್ರಭಾವಿಗಳು ಇದನ್ನೇ ರೀಲ್ಸ್ ಮಾಡಿ ಹೆಚ್ಚು, ಹೆಚ್ಚು ಹಂಚಿಕೊಂಡಿದ್ದರು. ಸಾವಿರಾರು ಜನ ವೀಕ್ಷಿಸಿದ್ದರು.
ಇದರ ಪ್ರಭಾವವೋ ಏನೋ ಕೆಜಿಗೆ 700 ರಿಂದ 800 ರೂಪಾಯಿ ಇದ್ದ ಕಾಣೆ ಮೀನು ರೇಟು ಈಗ 1100 ರಿಂದ 1200 ರೂಪಾಯಿ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ತ್ಯಾಗರಾಜ್ ಪುಟ್ಟಪ್ಪ ಹೇಳುತ್ತಾರೆ.
ಬೆಂಗಳೂರಿನ ಪದ್ಮನಾಭನಗರದ ಬನಗಿರಿ ಬಡಾವಣೆಯ ಕೆಂಪೇಗೌಡ ಮೆಡಿಕಲ್ ಕಾಲೇಜು ಎದುರಿನ ಫಿಶ್ ಮಾಂಗರ್ಸ್ ಅಂಗಡಿಯ ಮಾಲೀಕ ರೇಟ್ ಹೆಚ್ಚಳದ ಬಗ್ಗೆ ಹೇಳಿದರಂತೆ.
"ಸರ್, ಮೊನ್ನೆ ಮಂಗಳೂರಲ್ಲಿ ಸಿಎಂ ಡಿ ಕೆ ಶಿವಕುಮಾರ್ ಸಾಹೇಬ್ರು ಕಾಣೆ ಮೀನು ಸಿಕ್ಕಾಪಟ್ಟೆ ಟೇಸ್ಟ್ ಅಂತ ಹೇಳಿದ್ರಲ್ಲ ಅದು ರೀಲ್ಸ್ ಅಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂಗಡಿಗೆ ಬಂದವ್ರೆಲ್ಲ ಕಾಣೆ ಮೀನು ಕೇಳ್ತಿದ್ದಾರೆ. ಹಂಗೆ ನೋಡಿದ್ರೆ ಈಗ ಮೀನ್ ಸೀಸನ್. ರೇಟು 700 ಕ್ಕಿಂತಲೂ ಕಡಿಮೆ ಆಗಬೇಕಿತ್ತು. ಆದರೆ ಕೆಜಿಗೆ 1200 ಆಗಿದೆ. ಕಾಣೆ ಮತ್ತು ಅಂಜಲ್ ಫಿಶ್ ಎರಡೂ ಒಂದೇ ರೇಟು ಎಂದರಂತೆ.
ಅಂತೂ ಸಿಎಂ ಡಿ ಕೆ ಶಿವಕುಮಾರ್ ರಿಂದ ಕಾಣೆ ಫಿಶ್ ರೇಟ್ ಜಾಸ್ತಿಯಾಯ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರಂತೆ.