ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ

ಪೊಲೀಸರ ಮೂಲಕ ರೈತರ ಮೇಲೆ ದೌರ್ಜನ್ಯ ನಡೆಸಿದರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಗಡಿ: ಪೊಲೀಸರ ಮೂಲಕ ರೈತರ ಮೇಲೆ ದೌರ್ಜನ್ಯ ನಡೆಸಿದರೆ ಇಲ್ಲಿ ಹೆದರುವವರು ಯಾರೂ ಇಲ್ಲ. ರೈತರ ಸಹನೆ ತಾಳ್ಮೆಯನ್ನ ಪೊಲೀಸರು ಪರೀಕ್ಷೆ ಮಾಡುತ್ತಿದ್ದಾರೆ. ರೈತರ ಹಿಡಿಶಾಪ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ.

ಜನಶಕ್ತಿಯ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರೈತರೊಂದಿಗೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ.

ತಾಲೂಕಿನ ಗೊರೂರು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧಿಸಿದ ರೈತರ ಮೇಲೆ ಶುಕ್ರವಾರ ಪೊಲೀಸರು ನಡೆಸಿದ ದೌರ್ಜನ್ಯವನ್ನ ಖಂಡಿಸಿ ಸೋಲೂರಿನಲ್ಲಿ ಸಾವಿರಾರು ಮಂದಿ ಸೇರು ಬೃಹತ್ ಪ್ರತಿಭಟನೆ ನಡೆಸಿದಾಗ ಕೇಳಿ ಬಂದ ಕೋಪ ತಾಪದ ನುಡಿ ಇದು.

ಮಾಜಿ ಸಚಿವ ಆಂಜನಮೂರ್ತಿ ಮಾತನಾಡಿ, ನಾನು ಕಾಂಗ್ರೆಸ್ಸಿಗನಾಗಿದ್ದರೂ ಕಾಂಗ್ರೆಸ್ ಸರ್ಕಾರ ಮಾಡಿರುವ ಈ ನಿರ್ಧಾರವನ್ನ ವಿರೋಧಿಸುತ್ತೇನೆ.

ಸ್ಥಳೀಯ ಸಂಸದರಾದ ವೀರಪ್ಪ ಮೊಯ್ಲಿಯವರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯವನರೊಂದಿಗೆ ಮಾತನಾಡಿ ಉದ್ದೇಶಿತ ತ್ಯಾಜ್ಯವಿಲೇವಾರಿ ಘಟಕ ನಿರ್ಮಾಣ ಮಾಡದಂತೆ ಚಚೆ ಎ ಮಾಡುತ್ತೇವೆಂದು ಹೇಳಿದ್ದಾರೆ. ಡಿಕೆಶಿಯವರಾಗಲೀ, ಯಾರೇ ಆಗಲೀ ಈ ನಿರ್ಧಾರದಿಂದ ಹಿಂದೆ ಸರಿಯಲೇಬೇಕು ಎಂದು ಆಂಜನಮೂರ್ತಿ ಹೇಳಿದರು.

ಮಾಜಿ ಶಾಸಕ ಎಂ.ವಿ.ನಾಗರಾಜ್ ಪೊಲೀಸರ ದೌರ್ಜನ್ಯ ದಬ್ಬಾಳಿಕೆಯ ಮೂಲಕ ತಾಲಿಬಾನ್ ಮಾಡಿಬಿಟ್ಟಿದ್ದಾರೆ. ಜನ ಸ್ನೇಹಿ ಪೊಲೀಸರಾಗಬೇಕಾ ದೇವರು ಜನವಿರೋಧಿ ಪೊಲೀಸರಾಗಿ ವರ್ತಿಸುತ್ತಿದ್ದಾರೆ. ಅಮಾನವೀಯ ಅಮಾನುಷವಾಗಿ ಪೊಲೀಸರು ತಮ್ಮ ಕ್ರೌರ್ಯವನ್ನ ನಡೆಸಿ ಅಮಾಯಕ ಜನರನ್ನ ಬಲಿತೆಗೆದುಕೊಳ್ಳಲು ಹೊರಟಿರುವುದು ಖಂಡನೀಯ ಎಂದು ಅವರು ಹೇಳಿದರು.

ಸಿಪಿಐ ಉದ್ಧಟತನ

 ನಿನ್ನೆಯಿಂದ ರೈತರ ಮತ್ತು ಮಹಿಳೆಯರು ಹಾಗೂ ಸ್ವಾಮೀಜಿಗಳ ಮೇಲೆ ಪರಾಕ್ರಮವನ್ನ ಪೊಲೀಸರು ತೋರಿದ್ದಾರೆ. ಇಂದು ನೆಲಮಂಗಳ ಸಿಪಿಐ ಪರಮೇಶ್ವರ್‌ಎಂಬುವವರು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸಾರ್ವಜನಿಕವಾಗಿಯೇ ಚಿತ್ರೀಕರಣಕ್ಕೆ ಅಡ್ಡಿಪಡಿಸಿ ಏಕವಚನದಲ್ಲಿ ಪದಪ್ರಯೋಗಳನ್ನ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯೂ ಪ್ರತಿಭಟನೆಯ ಸಂದರ್ಭದಲ್ಲಿ ನಡೆಯಿತು. ಡಿ.ವೈ.ಎಸ್.ಪಿ ಲಕ್ಷ್ಮಿಗಣೇಶ್ ಮಧ್ಯಪ್ರವೇಶಿಸಿ ಮಾಧ್ಯಮ ಪ್ರತಿನಿಧಿಗಳನ್ನ ಸಮಾಧಾನ ಪಡಿಸಲು ಪ್ರಯತ್ನ ಮಾಡಿದರು. ಆದರೆ ಉದ್ಧಟತನದ ಪರಮಾವಧಿ ತೋರಿದ ಸಿಪಿಐ ಪರಮೇಶ್ವರ್ ಬಗ್ಗೆ ಮಾತ್ರ ಮೃದುಧೋರಣೆ ತಾಳಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು.

ದೂರು: ನಿನ್ನೆ ದೌರ್ಜನ್ಯಕ್ಕೆ ಎಸ್.ಪಿ ಮತ್ತು ಡಿ.ಸಿಯವರೇ ಕಾರಣರಾಗಿದ್ದಾರೆಂದು ಆರೋಪಿಸಿ ಶನಿವಾರ ಸೋಲೂರು ಪೊಲೀಸ್ ಚೌಕಿಯಲ್ಲಿ ಬಂಡೇಮಠದ ಶ್ರೀಗಳು ಮತ್ತು ದೌರ್ಜನ್ಯಕ್ಕೊಳಗಾದವರು ದೂರು ನೀಡಿದ್ದಾರೆ. ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಂಡೇಮಠದ ಬಸವಲಿಂಗ ಶ್ರೀಗಳು, ಮಹಂತ ಶ್ರೀಗಳು, ಶಾಸಕರಾದ ಶ್ರೀನಿವಾಸ್‌ಮೂರ್ತಿ, ಇ.ಕೃಷ್ಣಪ್ಪ, ತಾ.ಪಂ.ಸದಸ್ಯ ಶಂಕರಪ್ಪ ಇತರರು ಇದ್ದರು.

ರೈತರ ಮೇಲಿನ ದೌರ್ಜನ್ಯಕ್ಕೆ ಶಾಸಕರ ಖಂಡನೆ

ರಾಮನಗರ: ಗೊರೂರಿನಲ್ಲಿ ರೈತರು, ಮಹಿಳೆಯರು ಹಾಗೂ ವೃದ್ಧರು ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಶಾಸಕ ಎಚ್.ಸಿಬಾಲಕೃಷ್ಣ ಖಂಡಿಸಿದ್ದಾರೆ. ಬಿಡದಿ ಹೋಬಳಿ ವ್ಯಾಪ್ತಿಯ ಬಿಡದಿ, ಕೆಂಚನಕುಪ್ಪೆ, ಬನ್ನಿಕುಪ್ಪೆ ಗ್ರಾಮ ಪಂಚಾಯ್ತಿ ನಾಗರಿಕರಿಗೆ ಶನಿವಾರ ಏರ್ಪಡಿಸಿದ್ದ ಕಂದಾಯ ಮತ್ತುಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಗೊರೂರಿನಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪಿಸುವ ಮುನ್ನ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತಿಳುವಳಿಕೆ ಮೂಡಿಸಬೇಕು.

ಸಂಘ-ಸಂಸ್ಥೆ, ಮಠಾಧೀಶರು, ಚಿಂತಕರು ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಇದ್ಯಾವುದನ್ನು ಾಡದೆ ಜನರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದರು. ಗೊರೂರು ಜನರ ಮೇಲೆ ದರ್ಪ, ದೌರ್ಜನ್ಯ ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಪಕ್ಷದ ರಾಜ್ಯಾಧ್ಯಕ್ಷರು ಎಚ್.ಡಿ.ಕುಮಾರಸ್ವಾಮಿ ಅವರು ಗೊರೂರು ಜನರ ಪರ ನಿಂತಿದ್ದಾರೆ. ಗೊರೂರನ್ನು ಮತ್ತೊಂದು ಮಂಡೂರು ಮಾಡಲು ಬಿಡುವುದಿಲ್ಲ ಎಂದು ಬಾಲಕೃಷ್ಣ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com