ದಮಂಗಾಂವ: ವಿಮಾ ಕಂಪನಿಗಳು ತಮಗೆ ಮೋಸ ಮಾಡುತ್ತಿದ್ದು, ಬೆಳೆ ಹಾನಿಗೆ ಪರಿಹಾರ ನೀಡುತ್ತಿಲ್ಲ ಎಂದು ಮಹಾರಾಷ್ಟ್ರದ ವಿದರ್ಭದಲ್ಲಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಳಿ ಹಲವು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸುಮಾರು ೧೫ ಕಿಮೀ ಪಾದಯಾತ್ರೆ ಕೈಗೊಂಡಿರುವ ಕೈ ನಾಯಕ ರಾಹುಲ್ ಗಾಂಧಿ, ಬೆಳೆ ನಾಶದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಚರ್ಚಿಸಿದರು.
ಇಂದು ಬೆಳಗ್ಗೆ ಅಮರಾವತಿ ನಗರದಿಂದ ಸುಮಾರು ೫೦ ಕಿಮೀ ದೂರದಲ್ಲಿರುವ ಗುಂಜ್ ಗ್ರಾಮಕ್ಕೆ ಭೇಟಿ ಮಾಡಿದ ರಾಹುಲ್, ಇತ್ತೀಚೆಗಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ನಿಲೇಶ್ ವಾಲ್ಕೆ ಮತ್ತು ಅಂಬಾದಾಸ್ ವಾಹ್ಲಿಲೆ ಕುಟುಂಬದ ಸದಸ್ಯರನ್ನು ರಾಹುಲ್ ಭೇಟಿ ಮಾಡಿದರು.
ಗುಂಜ್ ಗ್ರಾಮದ ರಸ್ತೆಗಳ ಎರಡು ಬದಿಯಲ್ಲಿ ನೆರೆದಿದ್ದ ಗ್ರಾಮಸ್ಥರು ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿದರು. ಅಲ್ಲಿ ಕೆಲವರ ಜೊತೆ ಮಾನಾಡಿದ ರಾಹುಲ್ ಅವರ ತೊಂದರೆಗಳ ಆಳಕ್ಕಿಳಿದು ಅರಿತುಕೊಳ್ಳಲು ಪ್ರಯತ್ನಿಸಿದರು.
ಬೆಳೆ ನಾಶ ಹಾಗು ಮಳೆಯ ವೈಪರೀತ್ಯದಿಂದ ಹಾನಿಗೊಂಡಿರುವ ರೈತರು ಮತ್ತು ಕುಟುಂಬದವರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಐದು ಗ್ರಾಮಗಳಿಗೆ ಭೇಟಿ ನೀದಲಿದ್ದಾರೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಚವ್ಹಾಣ್ ಅವರು ರಾಹುಲ್ ಗೆ ಸಾಥ್ ನೀಡುತ್ತಿದ್ದಾರೆ.
Advertisement