ಭೂ ಸುಗ್ರೀವಾಜ್ಞೆ: ಗಡ್ಕರಿ ಆಹ್ವಾನವನ್ನು ತಿರಸ್ಕರಿಸಿದ ಸೋನಿಯಾಗಾಂಧಿ

ಕೇಂದ್ರ ಸರ್ಕಾರದ ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತಂತೆ ಸಾರ್ವಜನಿಕ ಚರ್ಚೆ ಆಗಮಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಶನಿವಾರ ತಿರಸ್ಕರಿಸಿದ್ದಾರೆ...
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತಂತೆ ಸಾರ್ವಜನಿಕ ಚರ್ಚೆ ಆಗಮಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಶನಿವಾರ ತಿರಸ್ಕರಿಸಿದ್ದಾರೆ.

ಈ ಕುರಿತಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಸೋನಿಯಾ ಗಾಂಧಿ ಅವರು, ರೈತರು ಭಾರತದ ಬೆನ್ನಲುಬಾಗಿದ್ದಾರೆ. ವಿವಾದಾತ್ಕ ಭೂ ಸುಗ್ರೀವಾಜ್ಞೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಎಂದಿಗೂ ಬೆಂಬಲಿಸುವುದಿಲ್ಲ. ಈ ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಭೂ ಮಸೂದೆ ಕಾಯ್ದೆಗೆ ಎಲ್ಲಾ ಪಕ್ಷಗಳ ಬೆಂಬಲ ದೊರಕಿತ್ತು. ಈ ಕಾಯ್ದೆ ರೈತರಿಗೆ ಉಪಯೋಗವಾಗುವಂತಿದ್ದು, ಪ್ರಸ್ತುತ ತಿದ್ದುಪಡಿಯಾಗಿರುವ ಕಾಯ್ದೆ ರೈತರಿಗೆ ಅನ್ಯಾಯವಾಗಲು ದಾರಿ ಮಾಡಿ ಕೊಡುವಂತಿದ್ದು, ಯುಪಿಎ ಸರ್ಕಾರದಲ್ಲಿದ್ದ ಕಾಯ್ದೆಯನ್ನೇ ಮುಂದುವರೆಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದೇ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಅವರು ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಸಾರ್ವಜನಿಕ ಚರ್ಚೆಗೆ ಆಗಮಿಸುವಂತೆ ನೀಡಿದ್ದ ಆಹ್ವಾನದ ಕುರಿತಂತೆ ಮಾತನಾಡಿರುವ ಸೋನಿಯಾಗಾಂಧಿ, ಪ್ರಸ್ತುತ ತಿದ್ದುಪಡಿಯಾಗಿರುವ ಕಾಯ್ದೆ ಏಕಪಕ್ಷೀಯವಾಗಿದ್ದು ರೈತರಿಗೆ ಅನ್ಯಾಯವಾಗಲಿದೆ. ಸಾರ್ವಜನಿಕ ಚರ್ಚೆಗಳಿಂದ ಸಮಸ್ಯೆ ಈಡೇರುವುದಿಲ್ಲ. ಈ ಹಿಂದೆ ಭೂ ಸುಗ್ರೀವಾಜ್ಞೆ ಕಾಯ್ದೆ ಸರ್ವಾನುಮತದಿಂದ ಜಾರಿಯಾಗಿತ್ತು. ಹಿಂದಿದ್ದ ಕಾಯ್ದೆಯನ್ನೇ ಮುಂದುವರೆಸುವುದು ಒಳ್ಳೆಯದು. ರೈತರ ವಿರುದ್ಧವಾದ ಯಾವುದೇ ಕಾಯ್ದೆಗಳಿಗೂ ಕಾಂಗ್ರೆಸ್ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ.

ರೈತರು ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸಹಾಯವಾಗುವಂತಹ ಕಾಯ್ದೆಯನ್ನು ಜಾರಿಗೆ ತರಬೇಕು. ಪ್ರಸ್ತುತ ಅಧಿಕಾರದಲ್ಲಿರುವ ಮೋದಿ ಸರ್ಕಾರ, ತಿದ್ದುಪಡಿ ಮಾಡಿರುವ ಭೂ ಸ್ವಾಧೀನ ಕಾಯ್ದೆ ರೈತರ ಪರವಾಗಿಲ್ಲ ಎಂದು 14 ವಿರೋಧ ಪಕ್ಷಗಳು ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಅಲ್ಲದೆ, ಕಾಯ್ದೆ ವಿರೋಧಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು. ಇದರಲ್ಲಿ ಪ್ರಮುಖವಾಗಿ ಅಣ್ಣಾ ಹಜಾರೆ ಹಾಗೂ ಸೋನಿಯಾ ಗಾಂಧಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಭೂ ಸುಗ್ರೀವಾಜ್ಞೆ ತಿದ್ದುಪಡಿ ಮಸೂದೆ ರೈತರ ಪರವಾಗಿದ್ದು, ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಡ್ಕರಿ ಅವರು ಚರ್ಚೆಗೆ ಆಗಮಿಸುವಂತೆ ಸೋನಿಯಾ ಗಾಂಧಿ ಹಾಗೂ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಜೊತೆಗೆ ಎಲ್ಲಾ ಪಕ್ಷಗಳಿಗೂ ಮಾರ್ಚ್19 ರಂದು ಪತ್ರ ಬರೆದಿದ್ದರು. ಪತ್ರದಲ್ಲಿ ನಾನು ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ವೇದಿಕೆಯಲ್ಲಿಯಾದರೂ ಭೂ ಕಾಯ್ದೆ ತಿದ್ದುಪಡಿ ಕುರಿತಂತೆ ಚರ್ಚಿಸಲು ಸಿದ್ದನಿದ್ದೇನೆ ಎಂದು ಗಡ್ಕರಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com