ಹೈದರಾಬಾದ್: ತೆಲುಗು ದೇಶಂ ಪಕ್ಷದ ಮೂವರು ನಾಯಕರನ್ನು ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಕ್ಸಲೀಯರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲೀಯರು ತಮ್ಮ ಜಾಲ ವ್ಯವಸ್ಥೆಯ ಮೂಲಕ ಟಿಡಿಪಿ ನಾಯಕರಿಗೆ ಕರೆ ಮಾಡಿ ವಿಶಾಖಪಟ್ಟಣಂ ಜಿಲ್ಲೆಯ ದಾರ್ಕೊಂಡ ಪ್ರದೇಶದಲ್ಲಿ ನಿನ್ನೆ ಅಪರಾಹ್ನ ಭೇಟಿ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಇವರು ಹೋದಾಗ ಬಂಧಿಸಿದ್ದಾರೆ ಎಂದು ವಿಶಾಖಪಟ್ಟಣಂನ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪ್ರವೀಣ್ ತಿಳಿಸಿದ್ದಾರೆ.
ಬಂಧಿತರಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ನಕ್ಸಲೀಯರು ಭರವಸೆ ನೀಡಿದ್ದಾರೆ ಎಂದು ಅವರನ್ನು ಭೇಟಿ ಮಾಡಿರುವ ಟಿಡಿಪಿ ಮುಖಂಡರಾದ ಎಂ.ಬಾಲಯ್ಯ, ಮಹೇಶ್ ಮತ್ತು ವಿ.ಬಾಲಯ್ಯ ತಿಳಿಸಿದ್ದಾರೆ. ಪೊಲೀಸರಿಗೆ ಕಳೆದ ರಾತ್ರಿ ಮಾಹಿತಿ ಸಿಕ್ಕಿದೆ.
ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಮಾವೋವಾದಿಗಳು ಅವರನ್ನು ಪೂರ್ವ ಗೋದಾವರಿ ಜಿಲ್ಲೆಯ ದಟ್ಟ ಅರಣ್ಯಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಮಾವೋವಾದಿಗಳ ಬೇಡಿಕೆಗಳೇನು ಎಂಬುದು ತಿಳಿಯಬೇಕಾಗಿದೆ ಎಂದು ಪ್ರವೀಣ್ ಹೇಳಿದ್ದಾರೆ.
ಗೋದಾವರಿ ಅರಣ್ಯದಲ್ಲಿ ಬಾಕ್ಸೈಟ್ ಗಣಿಗಾರಿಕೆಯನ್ನು ವಿರೋಧಿಸಿ ಟಿಡಿಪಿ ಮುಖಂಡರನ್ನು ನಕ್ಸಲೀಯರು ಬಂಧಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
Advertisement