
ದೆಹಲಿ: ತುರ್ತು ಪರಿಸ್ಥಿತಿ ನೆನೆದು ನಾವು ಕಣ್ಣೀರು ಹಾಕುವ ಅಗತ್ಯವಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಚಳುವಳಿ ಭಾರತದ ಪ್ರಜಾಪ್ರಭುತ್ವಕ್ಕೆ ಹೇಗೆ ಬಲ ನೀಡಿತ್ತು ಎಂಬುದನ್ನು ನೆನೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಜಯಪ್ರಕಾಶ್ ನಾರಾಯಣ ಅವರ 113ನೇ ಜನ್ಮದಿನಾಚರಣೆಯ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಜಯಪ್ರಕಾಶ್ ಅವರ ಚಳುವಳಿ, ನವನಿರ್ಮಾಣ ಚಳುವಳಿಗಳು ಭಾರತದ ರಾಜಕೀಯಗಳಿಗೆ ಹೊಸ ಆಯಾಮವನ್ನು ನೀಡಿದ್ದವು. ಜಯಪ್ರಕಾಶ್ ಅವರು ತೆರೆದ ಮನಸ್ಸುಳ್ಳಂತಹ ವ್ಯಕ್ತಿಯಾಗಿದ್ದರು. ಅವರು ಇಂತಹದ್ದೇ ಆಲೋಚನೆ ಹಾಗೂ ಸಿದ್ಧಾಂತಗಳಿಗೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಯಾವಾಗಲೂ ಸತ್ಯದ ಪರವಾಗಿ ಹೋರಾಟ ನಡೆಸುತ್ತಿದ್ದಂತೆ ವ್ಯಕ್ತಿಯಾಗಿದ್ದರು. ಅಂದು ಅವರು ಆಲೋಚನೆ ಮಾಡುತ್ತಿದ್ದ ರೀತಿ ಸರಿಯಾದ ದಾರಿಯಾಗಿತ್ತು. ಇಂದು ನಾವು ತುರ್ತು ಪರಿಸ್ಥಿತಿ ನೆನೆದು ಕಣ್ಣೀರು ಹಾಕುವ ಅಗತ್ಯವಿಲ್ಲ. ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಚಳುವಳಿ ಭಾರತದ ಪ್ರಜಾಪ್ರಭುತ್ವಕ್ಕೆ ಹೇಗೆ ಬಲ ನೀಡಿತ್ತು ಎಂಬುದನ್ನು ನಾವು ನೆನೆಯುವ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ.
1977ರ ಚುನಾವಣೆ ಸಂದರ್ಭದಲ್ಲಿ ಉನ್ನತ ನಾಯಕರು ಜೈಲುವಾಸದಲ್ಲಿದ್ದರು. ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದು ಅವರ ಅರಿವಿಗೆ ಬಂದಿರಲಿಲ್ಲ. ಆದರೂ, ಅವರ ಹಿಂದೆ ಇದ್ದ ಪ್ರಜಾಪ್ರಭುತ್ವದ ಶಕ್ತಿ ಹೇಗಿತ್ತು ಎಂಬುದನ್ನು ನಾವು ಆಲೋಚಿಸಬೇಕು. ನಾಯಕತ್ವ ಎಂಬುದು ಅಂದಿನ ತುರ್ತುಪರಿಸ್ಥಿತಿ ಸಂದರ್ಭದಲ್ಲಿಯೇ ಹುಟ್ಟಿತ್ತು. ಅಂದಿನ ದಿನಗಳಲ್ಲಿ ಟಿವಿ ಮಾಧ್ಯಮಗಳೆಂದು ಯಾವುದೂ ಇರಲಿಲ್ಲ. ಅಂದಿನ ನಾಯಕರು ದೇಶಕ್ಕಾಗಿ ಬದುಕುತ್ತಿದ್ದರು. ಸಾಯುತ್ತಿದ್ದರು. ತುರ್ತುಪರಿಸ್ಥಿತಿ ಸಂದರ್ಭದಲ್ಲಿಯೇ ನಿಜವಾದ ರಾಜಕೀಯ ಪೀಳಿಗೆ ಹುಟ್ಟಿದ್ದು, ಇಂತಹ ತುರ್ತುಪರಿಸ್ಥಿತಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಮುಡಿಪಾಗಿದೆ.
ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ತನ್ನದೇ ಆದ ಆಯ್ಕೆ ಹಾಗೂ ಆದರ್ಶಗಳನ್ನು ಇಟ್ಟುಕೊಂಡಿರಬಹುದು. ಆದರೆ, ತುರ್ತು ಪರಿಸ್ಥಿತಿ ಸಂದರ್ಭವನ್ನು ಜನರು ಮರೆಯಲು ಮಾಧ್ಯಮಗಳು ಬಿಡಬಾರದು. ತುರ್ತು ಪರಿಸ್ಥಿತಿ ಸಂದರ್ಭವನ್ನಿಟ್ಟುಕೊಂಡು ಇತರರನ್ನು ದೂಷಿಸುವುದು ನಮಗೆ ಇಷ್ಟವಿಲ್ಲ. ಆದರೆ, ಪ್ರಜಾಪ್ರಭುತ್ವದ ಬಲವರ್ಧನೆಗೆ ತುರ್ತುಪರಿಸ್ಥಿತಿಯನ್ನು ನೆನಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
Advertisement