ಭಾರತಕ್ಕೆ ಮರಳುವ ಆಸೆ, ಆದರೆ ಇದು ನನ್ನ ಬಲವಂತದ ಅಜ್ಞಾತವಾಸ: ವಿಜಯ್ ಮಲ್ಯ

ಭಾರತಕ್ಕೆ ವಾಪಸ್ಸಾಗುವ ಆಸೆ ಇದೆ, ಆದರೆ ನಾನು ಬಲವಂತದ ಅಜ್ಞಾತವಾಸ ಅನುಭವಿಸುತ್ತಿದ್ದೇನೆ ಎಂದು ವಿಜಯ್ ಮಲ್ಯ...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on

ನವದೆಹಲಿ: ಭಾರತಕ್ಕೆ ವಾಪಸ್ಸಾಗುವ ಆಸೆ ಇದೆ, ಆದರೆ ನಾನು ಬಲವಂತದ ಅಜ್ಞಾತವಾಸ ಅನುಭವಿಸುತ್ತಿದ್ದೇನೆ ಎಂದು ವಿಜಯ್ ಮಲ್ಯ ಹೇಳಿಕೊಂಡಿದ್ದಾರೆ.

ಫೇನಾನ್ಶಿಯನ್ ಟೈಮ್ಸ್ ಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಾಲ ತೀರಿಸುವ ವಿಚಾರ ಸಂಬಂಧಿಸಿ ಬ್ಯಾಂಕ್ ಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ನಮ್ಮಿಂದ ಸಾಧ್ಯವಿರುವ ಹಣವನ್ನು ನಾವು ಹಿಂತಿರುಗಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಬ್ಯಾಂಕುಗಳು ಕೂಡ ಈ ಹಿಂದೆ ನಾವು ಮಾಡಿಕೊಂಡಿರುವ ಒಪ್ಪಂದಗಳಂತೆ ನಡೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ನನ್ನ ಪಾಸ್ ಪೋರ್ಟ್ ನ್ನು ರದ್ದುಗೊಳಿಸುವುದು ಹಾಗೂ ಬಂಧನಕ್ಕೊಳಪಡಿಸುವುದರಿಂದ ಭಾರತ ಸರ್ಕಾರ ನನ್ನಿಂದ ಯಾವುದೇ ಹಣವನ್ನು ಪಡೆಯಲು ಸಾಧ್ಯವಿಲ್ಲ. ಪ್ರಸ್ತುತ ಬ್ರಿಟನ್ ಬಿಟ್ಟು ಹೋಗುವ ಯೋಜನೆಗಳಿಲ್ಲ. ಆದರೆ, ನಾನು ಬಲವಂತವಾಗಿ ದೇಶ ತೊರೆಯುವ ಪರಿಸ್ಥಿತಿಯ ತಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಾಸ್ ಪೋರ್ಟ್ ರದ್ದು ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಪಾಸ್ ಪೋರ್ಟ್ ರದ್ದತಿ ಹಿಂದೆ ಮೋದಿಯವರು ಇದ್ದಾರೆಂದು ಆಲೋಚಿಸುವುದಿಲ್ಲ. ದೇಶದಲ್ಲಿ ಸ್ಥಿರ ಸರ್ಕಾರವಿದ್ದು, ಸರ್ಕಾರದ ಬಗ್ಗೆ ನನಗೆ ಸಂತೋಷವಿದೆ ಎಂದು ಹೇಳಿದ್ದಾರೆ.

ಭಾರತೀಯ ಬ್ಯಾಂಕ್ ಗಳಿಗೆ 9,000 ಕೋಟಿ ಹಣವನ್ನು ಪಂಗನಾಮ ಹಾಕಿ ಬ್ರಿಟನ್ ಗೆ ಹಾರಿದ್ದ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಕೋರಿ ವಿದೇಶಾಂಗ ಸಚಿವಾಲಯ ಕೆಲವು ದಿನಗಳ ಹಿಂದಷ್ಟೇ ಬ್ರಿಟನ್ ಉನ್ನತ ಆಯೋಗಕ್ಕೆ ಪತ್ರವೊಂದನ್ನು ಬರೆದಿತ್ತು.

ಇದರಂತೆ ಗಡಿಪಾರು ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವಾಲಯ ನಿನ್ನೆ ಮಾಹಿತಿ ನೀಡಿತ್ತು. ವಿಜಯ್ ಮಲ್ಯ ಬ್ಯಾಂಕುಗಳಿಗೆ 9 ಸಾವಿರ ಕೋಟಿ ಸಾಲ ಮರುಪಾವತಿಸಬೇಕಾಗಿದ್ದು, ಈ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದರೂ ಅವರು ವಿಚಾರಣೆಗೆ ಹಾಜರಾಗಿಲ್ಲ. ಇನ್ನು ಮಲ್ಯ ಅವರ ಪಾಸ್ ಪೋರ್ಟ್ ಭಾರತ ಸರ್ಕಾರ ರದ್ದು ಮಾಡಿದ್ದು, ಗಡಿಪಾರು ಮಾಡುವಂತೆ ಪತ್ರ ಬರೆಯಲಾಗಿದೆ ಎಂದು ವಿಕಾಸ್ ಸ್ವರೂಪ್ ಅವರು ಹೇಳಿದ್ದರು.

ಭಾರತ ಬಿಟ್ಟು ವಿದೇಶಕ್ಕೆ ಹಾರಿದ್ದ ವಿಜಯ್ ಮಲ್ಯ ವಿರುದ್ಧ ಸಾಕಷ್ಟು ವಿವಾದಗಳು ಎದ್ದಿದ್ದವು. ಇದರಂತೆ ಟ್ವಿಟರ್ ನಲ್ಲಿ ಹೇಳಿಕೆ ನೀಡಲು ಆರಂಭಿಸಿದ್ದ ಮಲ್ಯ ಅವರು, ನಾನು ಭಾರತವನ್ನು ಬಿಟ್ಟು ಓಡಿಹೋಗಿಲ್ಲ. ನಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿದ್ದು, ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುತ್ತಿರುತ್ತೇನೆ. ನಾನೊಬ್ಬ ಸಂಸದನಾಗಿದ್ದು, ಭಾರತ ದೇಶದ ಕಾನೂನಿ ಬಗ್ಗೆ ಅಪಾರ ಗೌರವವಿದೆ ಹೇಳಿದ್ದರು.

ಅಲ್ಲದೆ, ಮಾಧ್ಯಮಗಳ ವಿರುದ್ಧ ಕಿಡಿಕಾರಿ ಟಿಆರ್ ಪಿ ಗಾಗಿ ಮಾಧ್ಯಮಗಳು ಇಂತಹ ಸುಳ್ಳು ಸುದ್ದಿ ಬಿತ್ತರಿಸುವುದು ಸರಿಯಲ್ಲ. ಮಾಧ್ಯಮಗಳ ಅಧಿಕಾರಿಗಳು ವರ್ಷಾನುಗಟ್ಟಲೆ ನಾನು ಮಾಡಿದ ಸಹಾಯವನ್ನು ಮರೆಯಬೇಡಿ. ಮಾಧ್ಯಮಗಳಿಗೆ ನಾನು ತೋರಿದ ದಯೆ ಹಾಗೂ ನೀಡಿದ ಸೌಕರ್ಯಗಳ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಟಿಆರ್ ಪಿಗಾಗಿ ಸುಳ್ಳು ಸುದ್ದಿಯನ್ನು ಬಿತ್ತರಿಸಬೇಡಿ ಎಂದು ಹೇಳಿದ್ದರು.

ಇದಾದ ಕೆಲವೇ ದಿನಗಳ ನಂತರ ಮತ್ತೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದ ಅವರು, ಲಂಡನ್ ನಲ್ಲಿ ಮಾಧ್ಯಗಳು ನನ್ನನ್ನು ಹುಡುಕಲು, ಭೇಟಿಯಾಗಲು ಸಾಕಷ್ಟು ಪ್ರಯತ್ನಗಳು ಮಾಡುತ್ತಿವೆ. ಆದರೆ, ನಾನಿರುವ ಸ್ಥಳವನ್ನು ಗುರ್ತಿಸಲು ವಿಫಲವಾಗಿವೆ. ನನಗೆ ಮಾಧ್ಯಮಗಳೊಂದಿಗೆ ಮಾತನಾಡಲು ಇಷ್ಟವಿಲ್ಲ, ವ್ಯರ್ಥ ಪ್ರಯತ್ನಗಳನ್ನು ಮಾಡಬೇಡಿ ಎಂದು ಹೇಳಿದ್ದರು.

ಕಳೆದ ವಾರವಷ್ಟೇ ವಿದೇಶಾಂಗ ಸಚಿವಾಲಯ ವಿಜಯ್ ಮಲ್ಯ ಅವರ ರಾಜತಾಂತ್ರಿಕ ಪಾಸ್‌‌‌‌‌‌‌ಪೋರ್ಟ್ ಅಮಾನತುಗೊಳಿಸಿತ್ತು. ವಿವಿಧ ಬ್ಯಾಂಕ್‌‌‌ಗಳಲ್ಲಿ ಮಾಡಿರುವ ಸುಮಾರು 9000 ಕೋಟಿ ರೂಪಾಯಿ ಸಾಲವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮುಂದೆ ವಿಜಯ್ ಮಲ್ಯ ವಿಚಾರಣೆಗೆ ಹಾಜರಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com