ನವದೆಹಲಿ: ದಾವೂದ್ ಪ್ರಕರಣದಲ್ಲಿ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ದನಿಯೆತ್ತಲು ಭಾರತಕ್ಕಿದು ಸರಿಯಾದ ಸಮಯ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದಾವೂದ್ ಇಬ್ರಾಹಿಂನ ಪಾಕಿಸ್ತಾನದ ವಿಳಾಸಗಳಿಗೆ ಸಂಬಂಧಿಸಿದಂತೆ ಭಾರತ ಸಲ್ಲಿಸಿದ್ದ 9 ದಾಖಲೆಗಳ ಪೈಕಿ 6 ದಾಖಲೆಗಳು ಸರಿಯಾಗಿದೆ ಎಂದು ಸ್ವತಃ ವಿಶ್ವಸಂಸ್ಥೆಯೇ ಹೇಳಿದೆ. ಈ ಹಿನ್ನೆಲೆಯಲ್ಲಿ ದಾವೂದ್ ಪ್ರಕರಣ ಸಂಬಂಧ ವಿಶ್ವಸಂಸ್ಥೆಯಲ್ಲಿ ಭಾರತ ದನಿಯೆತ್ತಲು ಇದು ಸಕಾಲವಾಗಿದೆ ಎಂದು ಹೇಳಿದ್ದಾರೆ.
ದಾವೂದ್ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆಂದು ಭಾರತ ಸ್ಫಷ್ಟವಾಗಿ ಹೇಳಿತ್ತು. ಇದೀಗ ವಿಶ್ವಸಂಸ್ಥೆಯೇ 9 ದಾಖಲೆಗಳ ಪೈಕಿ 6 ದಾಖಲೆಗಳು ಸರಿಯಿದೆ ಎಂದು ಹೇಳಿದೆ. ದಾವೂದ್ ನನ್ನು ಪಾಕಿಸ್ತಾನ ಗಡಿಪಾರು ಮಾಡದಿದ್ದರೆ ಅಥವಾ ಭಾರತದ ವಶಕ್ಕೆ ನೀಡದಿದ್ದರೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ದನಿಯೆತ್ತಬೇಕಾಗುತ್ತದೆ.
ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಪಾಕಿಸ್ತಾನ ಯಾವ ರೀತಿಯ ಸಹಾಯ ಮಾಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂಬ ಅಂಶವನ್ನಿಡು ಭಾರತ ದನಿಯೆತ್ತಬಹುದು. ವಿಶ್ವಸಂಸ್ಥೆ ಕೂಡ ಪಾಕಿಸ್ತಾನಕ್ಕೆ ನೀಡುತ್ತಿರುವ ನೆರವನ್ನು ಕೂಡಲೇ ಸ್ಥಗಿತಗೊಳಿಸಬೇಕಿದೆ ಎಂದು ಹೇಳಿದ್ದಾರೆ.
Advertisement