ನವದೆಹಲಿ: ಟೀ ಮಾರುವವನಂತೆ ಬಂದ ನರೇಂದ್ರ ಮೋದಿಯವರು ದೇಶದ ಹಣವನ್ನು ಹೊತ್ತು ಓಡಿಹೋಗುತ್ತಿದ್ದಾರೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಮವಾರ ಹೇಳಿದ್ದಾರೆ.
ನೋಟು ನಿಷೇಧ ಕುರಿತಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ದೇಶದ ರಾಜಧಾನಿಯಲ್ಲಿ ಇಂದು ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಜನರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಬಹಳಷ್ಟು ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿರುವ ಪ್ರತೀಯೊಬ್ಬರೂ ಕಪ್ಪುಹಣದ ವಿರುದ್ಧವಿದ್ದಾರೆ. ಹಣವಿಲ್ಲದೆಯೇ ಜನತೆ ದೇಶವನ್ನು ಬಿಡುವ ದಿನಗಳು ಶೀಘ್ರದಲ್ಲೇ ಎದುರಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೀ ಮಾರುವವ ವ್ಯಕ್ತಿಯಂತೆ ಬಂದರು. ಇದೀಗ ದೇಶದ ಹಣವನ್ನು ಹೊತ್ತುಕೊಂಡು ಓಡಿಹೋಗುತ್ತಿದ್ದಾರೆಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಯಾರು ಯಾರು ವಿದೇಶಕ್ಕೆ ಹೋಗಿದ್ದಾರೆ. ಅವರ ಬಗ್ಗೆ ತನಿಖೆ ನಡೆಸಬೇಕಿದೆ. ವಿದೇಶಕ್ಕೆ ಹೋಗುವ ಮೋದಿಯವರು ತಮ್ಮ ಜೊತೆಗೆ ಮಾಧ್ಯಮದವರನ್ನು ಯಾವ ಕಾರಣಕ್ಕೆ ಕರೆದುಕೊಂಡು ಹೋಗುವುದಿಲ್ಲ? ಮೋದಿಯವರು ಪೇ ಟಿಎಂಗೇಕೆ ಜಾಹೀರಾತನ್ನು ನೀಡುತ್ತಿದ್ದಾರೆ? ಖಾಸಗಿ ಕಂಪನಿಗಳಿಗೆ ಎಂದಾದರೂ ಪ್ರಧಾನಮಂತ್ರಿಗಳು ಜಾಹೀರಾತುಗಳನ್ನು ನೀಡಿದ್ದಾರೆಯೇ? ಈ ವಿಚಾರವನ್ನೇ ತೆಗೆದುಕೊಳ್ಳುವುದಾದರೆ, ಪ್ರಧಾನಿ ಮೋದಿಯವರು ರಾಜೀನಾಮೆಯನ್ನು ನೀಡಬೇಕಿದೆ.
ಪಶ್ಚಿಮ ಬಂಗಾಳದಲ್ಲಿ ರು.500 ನೋಟುಗಳು ಲಭ್ಯವಿಲ್ಲ. ಆದರೆ, ಪಾಟ್ನದಲ್ಲಿ ಲಭ್ಯವಿದೆ. ಉತ್ತರ ಪ್ರದೇಶದಲ್ಲಿಯೂ ರು. 500 ನೋಟುಗಳ ಲಭ್ಯವಿಲ್ಲ. ಈ ರೀತಿಯ ತಾರತಮ್ಯವನ್ನೇಕೆ ಮಾಡಲಾಗುತ್ತಿದೆ? ಪ್ರಧಾನಿ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸುವ ರಾಜ್ಯಗಳಿಗೆ 21 ದಿನಗಳಲ್ಲಿ ಹೊಸ ನೋಟುಗಳು ಲಭ್ಯವಾಗುತ್ತಿವೆ. ಈ ವರೆಗೂ ಮೋದಿಯವರು 21 ಹೊಸ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮೋದಿಯವರು ಬಿಗ್ ಬಜಾರ್ ನ ಬಿಗ್ ಬಾಸ್ ಆಗಿಬಿಟ್ಟಿದ್ದಾರೆಂದು ತಿಳಿಸಿದ್ದಾರೆ.
Advertisement